ನ್ಯಾ, ಎ ಎಸ್ ಬೋಪಣ್ಣ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ, ನ್ಯಾ, ವಿ ರಾಮಸುಬ್ರಮಣಿಯನ್
ನ್ಯಾ, ಎ ಎಸ್ ಬೋಪಣ್ಣ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ, ನ್ಯಾ, ವಿ ರಾಮಸುಬ್ರಮಣಿಯನ್  
ಸುದ್ದಿಗಳು

ವಿಶೇಷ ಕಾಯ್ದೆಯಡಿ ಬಂಧಿತರಾದವರಿಗೆ ಜಾಮೀನು: ಮೇಧಾ ಪಾಟ್ಕರ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Bar & Bench

ಕೋವಿಡ್- 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಶೇಷ ಕಾಯ್ದೆಗಳ ಅಡಿಯಲ್ಲಿ ಬಂಧಿತರಾದವರನ್ನು ಬಿಡುಗಡೆ ಮಾಡದಿರುವ ಮಹಾರಾಷ್ಟ್ರ ಉನ್ನತಾಧಿಕಾರ ಸಮಿತಿಯ (ಎಚ್‌ಪಿಸಿ) ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡದೇ ಇರಲು ಸುಪ್ರೀಂಕೋರ್ಟ್ ಮಂಗಳವಾರ ನಿರ್ಧರಿಸಿದೆ.

ಆ ಮೂಲಕ ಸೆಪ್ಟೆಂಬರ್ 14 ರಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಮತ್ತವರ ಸಂಘಟನೆ ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ಸ್, ಹೋರಾಟಗಾರ್ತಿ ಮೀರಾ ಸದಾನಂದ್ ಕಾಮತ್ ಅವರೊಂದಿಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಶೇಷ ಕಾಯ್ದೆಗಳ ಅಡಿ ಮಹಾರಾಷ್ಟ್ರದ ಜೈಲುಗಳಲ್ಲಿ ಬಂಧಿತರಾದ ಕೈದಿಗಳನ್ನು ಮಧ್ಯಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲು ಅರ್ಜಿಯಲ್ಲಿ ಕೋರಲಾಗಿತ್ತು.

ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಪರಿಸ್ಥಿತಿ ಗಮನಿಸಿ ಕೆಲ ಕೈದಿಗಳನ್ನು ಬಿಡುಗಡೆ ಮಾಡಲು ಮಾತ್ರ ಅನುಮತಿ ನೀಡಲಾಗುತ್ತದೆ ಎಂಬ ತನ್ನ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸಲು ಮಹಾರಾಷ್ಟ್ರ ಉನ್ನತಾಧಿಕಾರ ಸಮಿತಿಗೆ ಸುಪ್ರೀಂಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಮಿತಿಯು ಮಾಡಿದ್ದ ತುರ್ತು ಪೆರೋಲ್ ಮೇಲೆ ಬಿಡುಗಡೆಗೊಳ್ಳಬೇಕಿದ್ದ ಕೈದಿಗಳ ವರ್ಗೀಕರಣವನ್ನು ಆಗಸ್ಟ್ 5 ರಂದು ಹೈಕೋರ್ಟ್ ಎತ್ತಿ ಹಿಡಿದಿತ್ತು.

ಬಾಂಬೆ ಹೈಕೋರ್ಟ್‌ನ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಪೀಠ, "ಎಚ್‌ಪಿಸಿ ಕಡೆಗೆ ಹೆಚ್ಚು ಒತ್ತು ನೀಡುವ ಸಂಗತಿ ಎಂದರೆ ಇಂತಹ ಕಾಯ್ದೆಗಳು ಅಪರಾಧ ದಂಡ ಸಂಹಿತೆ ಅಡಿಯಲ್ಲಿ ಬಂಧಿತರಾದವರಿಗೆ ಜಾಮೀನು ನೀಡಲು ಸಾಕಷ್ಟು ನಿರ್ಬಂಧ ಹೇರುತ್ತವೆ" ಎಂದಿದೆ.

ವಿಶೇಷ ಕಾಯ್ದೆಗಳ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಅಥವಾ ಶಿಕ್ಷೆಗೊಳಗಾದ ಕೈದಿಗಳಲ್ಲಿ 7 ವರ್ಷಗಳಿಗಿಂತ ಹೆಚ್ಚು ಕಾಲ ಶಿಕ್ಷೆಗೊಳಗಾದದವರು ಈಗಲೂ ಕಾನೂನಿನ ಪ್ರಕಾರ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. "ಜಾಮೀನು ಪಡೆಯಲು ಸಾಂಕ್ರಾಮಿಕ ರೋಗವನ್ನು ಅದೃಷ್ಟಶಾಲಿ ಸನ್ನಿವೇಶ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.