Journalist Abhisar Sharma and Supreme Court  Facebook
ಸುದ್ದಿಗಳು

ಪತ್ರಕರ್ತ ಅಭಿಸಾರ್ ವಿರುದ್ಧ ಅಸ್ಸಾಂ ಸರ್ಕಾರ ಎಫ್ಐಆರ್: ಬಂಧಿಸದಂತೆ ಸುಪ್ರೀಂ ಮಧ್ಯಂತರ ರಕ್ಷಣೆ

ಆದರೆ ರಾಷ್ಟ್ರದ ಸಾರ್ವಭೌಮತ್ವಕ್ಕೆ ಅಪಾಯ ಸೇರಿದಂತೆ ಇನ್ನಿತರ ಆರೋಪಗಳಿಗಾಗಿ ತನ್ನ ವಿರುದ್ಧದ ಎಫ್ಐಆರ್ ರದ್ದತಿ ಕೋರಿ ಅಭಿಸಾರ್ ಅವರು ಮಾಡಿದ್ದ ಮನವಿಯನ್ನು ಪೀಠ ತಿರಸ್ಕರಿಸಿತು.

Bar & Bench

ಬಿಜೆಪಿ ಆಡಳಿತ ನಡೆಸುತ್ತಿರುವ ಅಸ್ಸಾಂ ಸರ್ಕಾರವನ್ನು ಯೂಟ್ಯೂಬ್‌ನಲ್ಲಿ ಟೀಕಿಸಿದ ಸಂಬಂಧ ಪತ್ರಕರ್ತ ಅಭಿಸಾರ್‌ ಶರ್ಮ ವಿರುದ್ಧ ಅಸ್ಸಾಂ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಅವರನ್ನು 4 ವಾರಗಳ ಕಾಲ ಬಂಧಿಸದಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ರಕ್ಷಣೆ ನೀಡಿದೆ.

ಆದರೆ ರಾಷ್ಟ್ರದ ಸಾರ್ವಭೌಮತ್ವಕ್ಕೆ ಅಪಾಯ ಸೇರಿದಂತೆ ಇನ್ನಿತರ ಆರೋಪಗಳಿಗಾಗಿ ತನ್ನ ವಿರುದ್ಧದ ಎಫ್ಐಆರ್ ರದ್ದತಿ  ಕೋರಿ ಅಭಿಸಾರ್ ಅವರು ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ತಿರಸ್ಕರಿಸಿತು. ಎಫ್ಐಆರ್ ರದ್ದತಿಗಾಗಿ  ಗುವಾಹಟಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವಂತೆ ಅದು ಸಲಹೆ ನೀಡಿತು.

"ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪ್ರಕರಣ ಇರುವುದು ಹೈಕೋರ್ಟ್‌ನಲ್ಲಿ. ಆದರೂ ಹೈಕೋರ್ಟ್‌ ಬಿಟ್ಟು ಇಲ್ಲಿಗೆ ಬಂದಿದ್ದೇಕೆ? ಹೈಕೋರ್ಟ್‌ಗೆ ಹೋಗಿ, ಬಂಧನದಿಂದ ರಕ್ಷಣೆ ನೀಡಲಾಗುವುದು. ನೀವು ಪತ್ರಕರ್ತರಾದ ಮಾತ್ರಕ್ಕೆ..." ಎಂದು ನ್ಯಾಯಾಲಯ ಹೇಳಿತು.

ಶರ್ಮಾ ಅವರು ತಮ್ಮ ಅರ್ಜಿಯಲ್ಲಿ ಬಿಎನ್‌ಎಸ್‌ ಸೆಕ್ಷನ್ 152 (ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವ ಕಾರ್ಯಕ್ಕೆ ಶಿಕ್ಷೆ) ಸಂವಿಧಾನ ಬಾಹಿರವೆಂದು ಪ್ರಶ್ನಿಸಿದ್ದರು. ಜೊತೆಗೆ ತಮ್ಮ ವಿರುದ್ಧ ಸೆಕ್ಷನ್ 196 (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 197 (ರಾಷ್ಟ್ರೀಯ ಏಕೀಕರಣಕ್ಕೆ ವಿರುದ್ಧವಾದ ಪೂರ್ವಾಗ್ರಹ ಪೀಡಿತ ಹೇಳಿಕೆಗಳನ್ನು ನೀಡುವುದು) ಅಡಿಯೂ ಪ್ರಕರಣ ದಾಖಲಾಗಿದೆ ಎಂದಿದ್ದರು. ಭಿನ್ನಾಭಿಪ್ರಾಯವನ್ನು ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ದೇಶದ್ರೋಹದಂತಹ ಸೆಕ್ಷನ್‌ಗಳನ್ನು ತಮ್ಮ ವಿರುದ್ಧ ಪ್ರಯೋಗಿಸಲಾಗಿದೆ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಇದೇ ರೀತಿಯ ಉಳಿದ ಪ್ರಕರಣಗಳ ಜೊತೆ ಶರ್ಮಾ ಅವರ ಅರ್ಜಿಯನ್ನು ಆಲಿಸಲು ನಿರ್ಧರಿಸಿದೆ. ಅಭಿಸಾರ್‌ ಅವರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ವಾದ ಮಂಡಿಸಿದರು.

ಆಗಸ್ಟ್ 21ರಂದು ಅಭಿಸಾರ್ ಶರ್ಮಾ ಅವರು ಅಸ್ಸಾಂ ಸರ್ಕಾರದ ನಿರ್ಧಾರ ಟೀಕಿಸುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಿದ್ದರು. ಸರ್ಕಾರ ಗಿರಿಜನರಿಗೆ ಸೇರಿದ 3,000 ಬಿಘಾ ಜಮೀನು (̄ಸುಮಾರು 2000 ಎಕರೆ) ಖಾಸಗಿ ಸಂಸ್ಥೆಗೆ ಮಾರಾಟ ಮಾಡುತ್ತಿರುವುದನ್ನು ಅವರು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದರು.