Andhra Pradesh, Telangana, Supreme Court
Andhra Pradesh, Telangana, Supreme Court 
ಸುದ್ದಿಗಳು

ಆಂಧ್ರ- ತೆಲಂಗಾಣ ಆಸ್ತಿ ಹಂಚಿಕೆ: ಕೇಂದ್ರ ಮತ್ತು ತೆಲಂಗಾಣ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್

Bar & Bench

ತನ್ನ ಮತ್ತು ತೆಲಂಗಾಣದ ನಡುವೆ ಆಸ್ತಿ ಮತ್ತು ಸಾಲಬಾಧ್ಯತೆಯ ಹಂಚಿಕೆಯಾಗಬೇಕೆಂದು ಕೋರಿ ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ [ಆಂಧ್ರ ಪ್ರದೇಶ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಈ ಸಂಬಂಧ ಕೇಂದ್ರ ಮತ್ತು ತೆಲಂಗಾಣ ಸರ್ಕಾರಗಳಿಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ನೋಟಿಸ್‌ ನೀಡಿತು.

2014ರ ಜೂನ್‌ನಲ್ಲಿ ಎರಡು ರಾಜ್ಯಗಳು ಉದಯಿಸಿದ್ದರೂ, 2014ರ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯಡಿಯಲ್ಲಿ ಆಸ್ತಿ ಮತ್ತು ಹೊಣೆಗಾರಿಕೆ ಹಂಚಿಕೆ ಮಾಡಲಾಗಿದ್ದರೂ ಹಾಗೂ ಆಂಧ್ರ ಪ್ರದೇಶ ಸರ್ಕಾರವು ತ್ವರಿತ ಪರಿಹಾರ  ಕೋರಿ ಮತ್ತೆ ಮತ್ತೆ  ಯತ್ನಿಸಿರುವುದರ ಹೊರತಾಗಿಯೂ ಆಸ್ತಿಗಳ ನಿಜವಾದ ವಿಭಜನೆ ಇನ್ನೂ ಆರಂಭವಾಗಿಲ್ಲ ಎಂದು ವಕೀಲ ಮಹ್‌ಫೂಝ್‌ ಎ ನಾಝ್ಕಿ ಅವರು ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿತ್ತು.

ಆದ್ದರಿಂದ ಸಂವಿಧಾನದ 14 ಮತ್ತು 21ನೇ ವಿಧಿಯಡಿಯಲ್ಲಿ ಒದಗಿಸಲಾದ ಹಕ್ಕುಗಳೂ ಸೇರಿದಂತೆ ತನ್ನ ಜನರ ಮತ್ತು ತನ್ನ ಸ್ವಂತ ಹಕ್ಕುಗಳ ಕಾರಣಕ್ಕೆ ಕಾನೂನು ರಕ್ಷಕನಾಗಿ (ಪೇರೆನ್ಸ್‌ ಪ್ಯಾಟ್ರಿಈ- ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಇರುವ ಜನರ ಪಾಲಿಗೆ ರಾಜ ಅಥವಾ ಪ್ರಭುತ್ವ ಕಾನೂನು ರಕ್ಷಕನಾಗುವುದಕ್ಕೆ ಇರುವ ಲ್ಯಾಟಿನ್ ಮೂಲದ ಪಾರಿಭಾಷಿಕ ಪದ) ಆಂಧ್ರಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

₹ 1,42,601 ಕೋಟಿ ಮೌಲ್ಯದ ಆಸ್ತಿ ವಿಭಜಿಸದಿರುವುದು ತೆಲಂಗಾಣಕ್ಕೆ ಲಾಭದಾಯಕವಾಗಿದೆ, ಏಕೆಂದರೆ ಈ ಆಸ್ತಿಗಳಲ್ಲಿ ಸುಮಾರು ಶೇ 91 ಭಾಗ ಅವಿಭಜಿತ ರಾಜ್ಯದ ರಾಜಧಾನಿಯಾಗಿದ್ದ ಹಾಗೂ ಈಗ ತೆಲಂಗಾಣದಲ್ಲಿರುವ ಹೈದರಾಬಾದ್‌ನಲ್ಲಿದೆ. ಆಸ್ತಿ ಹಂಚಿಕೆ ಮಾಡದಿರುವುದರಿಂದ ಸಂಸ್ಥೆಗಳ ನೌಕರರು ಸೇರಿದಂತೆ ಆಂಧ್ರದ ಜನರ ಮೂಲಭೂತ ಹಾಗೂ ಸಾಂವಿಧಾನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣದ ನಿಷ್ಕ್ರಿಯತೆ, ಆಂಧ್ರದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಘೋಷಿಸಬೇಕು ಮತ್ತು ಎರಡೂ ರಾಜ್ಯಗಳ ಆಸ್ತಿಯ ತ್ವರಿತ ವಿಂಗಡಣೆಗಾಗಿ ಅಗತ್ಯವಾದ ಎಲ್ಲಾ ನಿರ್ದೇಶನಗಳನ್ನು ನೀಡಬೇಕು  ಎಂದು ಅರ್ಜಿಯಲ್ಲಿ ವಿನಂತಿಸಲಾಗಿತ್ತು.

ಆದ್ದರಿಂದ, ತೆಲಂಗಾಣದ ನಿಷ್ಕ್ರಿಯತೆಯು ತನ್ನ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವನ್ನು ಘೋಷಿಸಲು ಕೋರಿ, ತ್ವರಿತವಾಗಿ ಎರಡು ರಾಜ್ಯಗಳ ನಡುವಿನ ಆಸ್ತಿಗಳ ಖಚಿತ ವಿಭಜನೆಗೆ ಅಗತ್ಯವಿರುವ ಎಲ್ಲಾ ನಿರ್ದೇಶನಗಳನ್ನು ಕೋರಿತ್ತು.