ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 14ರ ಪ್ರಕಾರ ಹಿಂದೂ ಮಹಿಳೆಯರಿಗೆ ನೀಡಲಾದ ಆಸ್ತಿ ಹಕ್ಕಿಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಸೋಮವಾರ ವಿಸೃತ ಪೀಠಕ್ಕೆ ವರ್ಗಾಯಿಸಿದೆ [ಕಾನೂನು ಉತ್ತರಾಧಿಕಾರಿಗಳ ಮೂಲಕ ದಿ. ತೇಜ್ ಭಾನ್ ಮತ್ತಿತರರು ಹಾಗೂ ಕಾನೂನು ಉತ್ತರಾಧಿಕಾರಿಗಳ ದಿ. ರಾಮ ಕಿಶನ್ ಇನ್ನಿತರರ ನಡುವಣ ಪ್ರಕರಣ]
ಹಿಂದೂ ಉತ್ತರಾಧಿಕಾರ ಕಾಯಿದೆ, 1956ರ ಸೆಕ್ಷನ್ 14ರ ಉಪ ಸೆಕ್ಷನ್ಗಳಾದ (1) ಮತ್ತು (2)ರ ನಡುವಿನ ಪರಸ್ಪರ ಸಂಬಂಧದ ಸುತ್ತ ಪ್ರಶ್ನೆ ಸುತ್ತುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ಹಿಂದೂ ಪತ್ನಿಗೆ ಆಕೆಯ ಪತಿ ಉಯಿಲಿನ ಮೂಲಕ ನೀಡಿದ ಆಸ್ತಿಗೆ ಉಯಿಲಿನಲ್ಲಿ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ನಿರ್ಬಂಧಗಳಿದ್ದರೂ ಕೂಡ, ಆಕೆ ಸದಾ ಸಂಪೂರ್ಣ ಮಾಲೀಕಳೇ ಎಂಬುದಾಗಿದೆ.
ಸೆಕ್ಷನ್ 14ರ ಬಗ್ಗೆ ವ್ಯತಿರಿಕ್ತವಾದ ವ್ಯಾಖ್ಯಾನಗಳಿರುವುದರಿಂದ ಮತ್ತು ಇದು ದೇಶದೆಲ್ಲೆಡೆಯ ಹಿಂದೂ ಮಹಿಳೆಯರ ಹಕ್ಕುಗಳ ಮೇಲೆ ಪರಿಣಾಮ ಬೀರುವುದರಿಂದ ಪ್ರಕರಣದ ಕುರಿತು ನಿರ್ಣಾಯಕ ತೀರ್ಪು ನೀಡುವುದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠ ಸೋಮವಾರ ಅಭಿಪ್ರಾಯಪಟ್ಟಿದೆ.
ಪ್ರತಿಯೊಬ್ಬ ಹಿಂದೂ ಮಹಿಳೆ ಮೇಲೆ ಆಕೆಯ ವಿಸ್ತೃತ ಕುಟುಂಬದ ಮೇಲೆ ಪರಿಣಾಮ ಬೀರುವುದರಿಂದ ಮತ್ತು ದೇಶದ ಉದ್ದಗಲಕ್ಕೂ ಇರುವ ಮೂಲ ಹಾಗೂ ಮೇಲ್ಮನವಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ವಾದ ಮತ್ತು ಪ್ರತಿವಾದದ ಮೇಲೆ ಪರಿಣಾಮ ಬೀರುವುದರಿಂದ ಈ ಪ್ರಕರಣ ಅತ್ಯಂತ ಮಹತ್ವದ್ದು ಎಂದ ವಿಭಾಗೀಯ ಪೀಠ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸುವುದಕ್ಕಾಗಿ ಸಿಜೆಐ ಅವರಿರುವ ಪೀಠಕ್ಕೆ ಪ್ರಕರಣ ಉಲ್ಲೇಖಿಸುವಂತೆ ಸೂಚಿಸಿತು.
ಗಮನಾರ್ಹವಾಗಿ, ಸಾಂಪ್ರದಾಯಿಕ ಕಾನೂನುಗಳಲ್ಲಿನ ತಾರತಮ್ಯವನ್ನು ನಿಭಾಯಿಸಲೆಂದು ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 14 (1) ಅನ್ನು ಜಾರಿಗೆ ತರಲಾಗಿದ್ದು ಹಿಂದೂ ಮಹಿಳೆಯರು ಗಳಿಸಿದ ಆಸ್ತಿಯ ಸಂಪೂರ್ಣ ಮಾಲೀಕತ್ವವನ್ನು ಆಕೆಗೆ ನೀಡಲು ಅದು ಯತ್ನಿಸುತ್ತದೆ.
ಆದರೂ ಸಾಧನಗಳ ಮೂಲಕ (ಉಡುಗೊರೆ, ಉಯಿಲು, ನ್ಯಾಯಾಲಯದ ತೀರ್ಪು ಇತ್ಯಾದಿ)ಮಹಿಳೆಯರು ಗಳಿಸಿದ ಆಸ್ತಿಗೆ ಸೆಕ್ಷನ್ 14 (1) ಅನ್ವಯಿಸುವುದಿಲ್ಲ ಎಂದು ಸೆಕ್ಷನ್ 14 (2), ನಿರ್ಬಂಧ ವಿಧಿಸುತ್ತದೆ.
ವಿ ತುಲಸಮ್ಮ ಮತ್ತಿತರರು ಹಾಗೂ ಕಾನೂನು ಉತ್ತರಾಧಿಕಾರಿಗಳ ಮೂಲಕ ದಿ. ಶೇಷ ರೆಡ್ಡಿ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಾಯಿದೆಯ ಸೆಕ್ಷನ್ 14 (1) ರ ಪ್ರಕಾರ ಹಿಂದೂ ಮಹಿಳೆಯ ಸಂಪೂರ್ಣ ಮಾಲೀಕತ್ವದ ಹಕ್ಕುಗಳನ್ನು ಆಕೆಗೆ ಒದಗಿಸಿತ್ತು.
ಆದರೆ ತುಲಸಮ್ಮ ಪ್ರಕರಣದಲ್ಲಿ ನೀಡಲಾದ ತೀರ್ಪಿಗೆ ವ್ಯತಿರಿಕ್ತವಾದ ಕನಿಷ್ಠ ಹದಿನೆಂಟು ತೀರ್ಪುಗಳನ್ನು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ. ಹೀಗಾಗಿ ಇಂತಹ ಸಂಘರ್ಷ ತಪ್ಪಿಸಲು ಕಾಯಿದೆಗೆ ಸಂಬಂಧಿಸಿದಂತೆ ನಿರ್ಣಾಯಕ ತೀರ್ಪು ನೀಡುವುದಕ್ಕಾಗಿ ಪ್ರಕರಣವನ್ನು ಅದು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು.