ಸುದ್ದಿಗಳು

ಎಜಿ ಒಪ್ಪಿಗೆ ನಿರಾಕರಿಸಿದ ತಿಂಗಳುಗಳ ಬಳಿಕ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ

Bar & Bench

ಮಹತ್ವದ ಬೆಳವಣಿಗೆಯೊಂದರಲ್ಲಿ ನ್ಯಾಯಾಂಗದ ವಿರುದ್ಧ ಟ್ವೀಟ್‌ಗಳನ್ನು ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್‌ ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಅವರ ವಿರುದ್ಧ ಮಂಗಳವಾರ ಸ್ವಯಂಪ್ರೇರಿತವಾಗಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ. ವಕೀಲ ಪ್ರಶಾಂತ್ ಭೂಷಣ್‌ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೋಲುವಂತಹ ಮತ್ತೊಂದು ಪ್ರಕರಣ ಇದಾಗಿದೆ.

ಆಸ್ತಾ ಖುರಾನಾ ಎಂಬುವವರು ಸಲ್ಲಿಸಿದ್ದ ಅರ್ಜಿ ಆಧರಿಸಿ ಸುಪ್ರೀಂಕೋರ್ಟ್ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ. ಈ ಹಿಂದೆ ಸರ್ದೇಸಾಯಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅಸಮ್ಮತಿ ಸೂಚಿಸಿದ್ದರು.

ಸರ್ದೇಸಾಯಿ ಅವರು ಪ್ರಶಾಂತ್ ಭೂಷಣ್ ಶಿಕ್ಷೆಗೊಳಗಾದ ದಿನ ಮಾಡಿದ ವಿವಿಧ ಟ್ವೀಟ್‌ಗಳನ್ನು ಉಲ್ಲೇಖಿಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳುವಂತೆ ಖುರಾನಾ ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯವನ್ನು ಕೋರಿದ್ದರು.

"ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್‌ ಎದುರು ತಪ್ಪಿತಸ್ಥರಾಗಿದ್ದು ಅವರಿಗೆ, ಆಗಸ್ಟ್ 20 ರಂದು ಶಿಕ್ಷೆ ವಿಧಿಸಲಾಗುತ್ತಿದೆ. ಕಾಶ್ಮೀರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನಕ್ಕೊಳಗಾದವರ ಹೇಬಿಯಸ್ ಕಾರ್ಪಸ್ ಅರ್ಜಿಗಳು ಬಾಕಿ ಉಳಿದಿವೆ." ಎಂದು ಸರ್ದೇಸಾಯಿ ಟ್ವೀಟ್‌ ಮಾಡಿದ್ದರು. ಬಳಿಕ ಪ್ರಶಾಂತ್‌ ಭೂಷಣ್‌ ಅವರು ನ್ಯಾಯಾಂಗ ನಿಂದನೆ ಶಿಕ್ಷೆಗೆ ಗುರಿಯಾಗಿ ಒಂದು ರೂಪಾಯಿ ದಂಡ ವಿಧಿಸಿದಾಗಲೂ ಸರ್ದೇಸಾಯಿ ವಿವಿಧ ಟ್ವೀಟ್‌ಗಳನ್ನು ಮಾಡಿದ್ದರು. ಅಲ್ಲದೆ ನಿವೃತ್ತರಾಗಿರುವ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಮತ್ತು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರ ವಿರುದ್ಧವೂ ಟ್ವೀಟ್‌ ಮಾಡಿದ್ದರು” ಎಂದು ಉಲ್ಲೇಖಿಸಿರುವ ಖುರಾನಾ “ಅಗ್ಗದ ಪ್ರಚಾರ ಪಡೆಯುವ ಸಲುವಾಗಿ ಇಂಡಿಯಾ ಟುಡೆ ನಿರೂಪಕ ಸರ್ದೇಸಾಯಿ ಅವರು ಈ ರೀತಿ ಮಾಡಿದ್ದಾರೆ. ನ್ಯಾಯಾಲಯದ ಘನತೆಗೆ ಧಕ್ಕೆ ತರುವ ಕೆಲಸ ನಡೆದಿದೆ," ಎಂದು ಆಕ್ಷೇಪಿಸಿದ್ದರು.

ಅಟಾರ್ನಿ ಜನರಲ್ ಅನುಮೋದನೆ ಪಡೆಯದೆ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದು ಇದೇ ಮೊದಲಲ್ಲ. ಪ್ರಶಾಂತ್‌ ಭೂಷಣ್ ಅವರ‌ ವಿರುದ್ಧ ಕ್ರಮ ಕೈಗೊಳ್ಳಲು ಎಜಿ ಅಸಮ್ಮತಿ ಸೂಚಿಸಿದಾಗಲೂ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.