A1
A1
ಸುದ್ದಿಗಳು

ಬೆಳೆನಷ್ಟ ಅನುಭವಿಸಿದ 3.5 ಲಕ್ಷ ರೈತರಿಗೆ ವಿಮೆ ಪರಿಹಾರ: ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

Bar & Bench

ಭಾರೀ ಮಳೆಯಿಂದಾಗಿ 2020ರಲ್ಲಿ ಸೋಯಾಬೀನ್ ಬೆಳೆನಷ್ಟ ಅನುಭವಿಸಿದ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ 3.5 ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡುವಂತೆ ಬಜಾಜ್ ಅಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಇತ್ತೀಚೆಗೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ [ಬಜಾಜ್‌ ಅಲಯನ್ಸ್‌ ಜನರಲ್‌ ಇನ್‌ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ ಮತ್ತು ಜ್ಞಾನರಾಜ್ ನಡುವಣ ಪ್ರಕರಣ].

ವಿಮಾ ಕಂಪೆನಿ 6 ವಾರಗಳಲ್ಲಿ ಪರಿಹಾರ ಒದಗಿಸಬೇಕು. ವಿಫಲವಾದರೆ ಸರ್ಕಾರವೇ ಇನ್ನು ಆರು ವಾರಗಳಲ್ಲಿ ಅದನ್ನು ಪಾವತಿಸಬೇಕಾಗುತ್ತದೆ ಎಂದು ಔರಂಗಾಬಾದ್ ಪೀಠ ನೀಡಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ತಡೆ ನೀಡಿತು.

ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ಒದಗಿಸದೇ ಇರುವುದನ್ನು ಪ್ರಶ್ನಿಸಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಮಾ ರಕ್ಷಣೆಗಾಗಿ ವಿಮಾ ಕಂತು ಪಾವತಿಸಿದ್ದೇವೆ. ಪ್ರೀಮಿಯಂನ ಒಂದು ಭಾಗವನ್ನು ಕೃಷಿಕರ ಪರವಾಗಿ ರಾಜ್ಯ ಸರ್ಕಾರ ಕೂಡ ಪಾವತಿಸಿದೆ. ಪರಿಹಾರ ದೊರಕಿಸಿಕೊಡುವಂತೆ ವಿಮಾ ಕಂಪೆನಿಗೆ ನಿರ್ದೇಶನ ನೀಡಬೇಕು. ಒಟ್ಟು 3,57,287 ಕೃಷಿಕರಿಗೆ ಪರಿಹಾರ ನೀಡಲು ಕಂಪೆನಿ ನಿರಾಕರಿಸಿದರೆ ಆ ಹೊಣೆಯನ್ನು ಸರ್ಕಾರವೇ ಹೊರುವಂತೆ ಸೂಚಿಸಬೇಕು ಎಂದು ಕೋರಿದ್ದರು.

ತೀರ್ಪು ನೀಡುವ ವೇಳೆ ನ್ಯಾಯಾಲಯವು ಕಂಪೆನಿಯ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಒಸ್ಮಾನಾಬಾದ್‌ ಜಿಲ್ಲೆಯಿಂದ ಕಂಪೆನಿಗೆ ₹ 500 ಕೋಟಿ ಪ್ರೀಮಿಯಂ ಪಾವತಿಯಾಗಿದೆ. ಜಿಲ್ಲೆಯ 72,325 ಕೃಷಿಕರಿಗೆ ₹ 87.87 ಕೋಟಿ ಪರಿಹಾರ ಮೊತ್ತ ಪಾವತಿಸಲಾಗಿದೆ ಎನ್ನುವುದನ್ನು ಗಮನಿಸಿತ್ತು. "ಬೆಳೆನಷ್ಟದ ದಿನದಿಂದ 72 ಗಂಟೆಗಳ ಒಳಗೆ ಕೃಷಿಕರು ಯಾವುದೇ ಸೂಚನೆ ಅಥವಾ ದೂರು ನೀಡಿಲ್ಲ ಎಂಬ ಕಾರಣಕ್ಕೆ ಬಹಳಷ್ಟು ರೈತರಿಗೆ ಪರಿಹಾರ ಒದಗಿಸಲಾಗಿಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ವ್ಯಾಪ್ತಿ ಮೀರಿ ಪರಿಹಾರ ಕೋರಲಾಗಿದೆ ಎಂಬ ವಿಮಾ ಕಂಪೆನಿಯ ವಾದದಲ್ಲಿ ಹುರುಳಿಲ್ಲ" ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು.