AFT Chandigarh, Justice Dharam Chand Chaudhary, and SC
AFT Chandigarh, Justice Dharam Chand Chaudhary, and SC 
ಸುದ್ದಿಗಳು

ನ್ಯಾಯಮೂರ್ತಿ ವರ್ಗಾವಣೆ: ವಿವಾದಗ್ರಸ್ತ ಆದೇಶಕ್ಕೆ ತಡೆ ನೀಡಿದ ಸುಪ್ರೀಂ; ವಿವರಣೆ ನೀಡಲು ಎಎಫ್‌ಟಿ ಅಧ್ಯಕ್ಷರಿಗೆ ಸೂಚನೆ

Bar & Bench

ಚಂಡಿಗಢದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ (ಎಎಫ್‌ಟಿ) ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಧರಂ ಚಂದ್ ಚೌಧರಿ ಅವರನ್ನು ಚಂಡಿಗಢದ ಪ್ರಧಾನ ಪೀಠದಿಂದ ಕೋಲ್ಕತ್ತಾ ಎಎಫ್‌ಟಿಗೆ ವರ್ಗಾಯಿಸಿದ್ದಆದೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.

ಅಲ್ಲದೆ ವರ್ಗಾವಣೆಗೆ ಕಾರಣಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸುವಂತೆಯೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.

ಜೊತೆಗೆ ಚಂಡಿಗಢದಲ್ಲಿ ವಿಚಾರಣೆ ನಡೆಸುತ್ತಿರುವ ಜಾರಿ ಅರ್ಜಿಗಳನ್ನು ತನ್ನ ಅನುಮತಿ ಇಲ್ಲದೆ ವಿಲೇವಾರಿ ಮಾಡುವಂತಿಲ್ಲ ಎಂದು ಅದು ಕಟ್ಟುನಿಟ್ಟಿನ ಆದೇಶ ನೀಡಿದೆ. ಸಾಮಾನ್ಯವಾಗಿ ತಾನು ವರ್ಗಾವಣೆ ಆದೇಶದಲ್ಲಿ ಮಧ್ಯಪ್ರವೇಶಿಸುವುದರಲ್ಲಿ ಎಚ್ಚರ ವಹಿಸಿದರೂ ವಕೀಲರ ಸಂಘದ ಅಹವಾಲನ್ನು ಗಮನಿಸುವುದು ಅಗತ್ಯವಾಗಿದೆ ಎಂದು ಅದು ತಿಳಿಸಿದೆ.

ಎಎಫ್‌ಟಿ ಅಧ್ಯಕ್ಷರು ನೀಡಿದ್ದ ವರ್ಗಾವಣೆ ಆದೇಶಕ್ಕೆ ತಡೆ ಕೋರಿ ಚಂಡಿಗಢದ ಎಎಫ್‌ಟಿ ವಕೀಲರ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳ ವಿರುದ್ಧ ನ್ಯಾ. ಚೌಧರಿ ಅವರು ಜಾರಿ ಮಾಡಿದ ಕಠಿಣ ಆದೇಶಗಳ ಪರಿಣಾಮ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಿಜೆಐಗೆ ವಕೀಲ ಸಮುದಾಯ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿತ್ತು.

ವಾದ ಆಲಿಸಿದ ನ್ಯಾಯಾಲಯ ಅರ್ಜಿದಾರರ ವರ್ಗಾವಣೆ ದುರುದ್ದೇಶಪೂರಿತವಾಗಿದೆ. ಈ ಬಗ್ಗೆ ಸೂಕ್ತ ಹಂತದಲ್ಲಿ ವಿಶ್ಲೇಷಿಸಬೇಕಿದೆ. ವರ್ಗಾವಣೆ ಕೂಲಂಕಷ ಪರಿಶೀಲನೆಗೆ ಅರ್ಹವಾಗಿದೆ ಎಂದು ತಿಳಿಸಿದೆ.

ಚಂಡಿಗಢ ಎಎಫ್‌ಟಿ ವಕೀಲರ ಸಂಘ ಮಾತ್ರವಲ್ಲದೆ ಚೆನ್ನೈ, ಜಮ್ಮು, ಲಖನೌ, ಪಂಚಕುಲ, ಕುರುಕ್ಷೇತ್ರ ಸಂಘಗಳು ಹಾಗೂ ಹರಿಯಾಣದಲ್ಲಿನ ವೆಟರನ್ ಏರ್ ವಾರಿಯರ್ ಸೇರಿದಂತೆ ವಿವಿಧ ವಕೀಲರ ಸಂಘಗಳೂ ನ್ಯಾಯಮೂರ್ತಿಯವರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದವು.