Hemant Soren and Supreme Court
Hemant Soren and Supreme Court  Twitter
ಸುದ್ದಿಗಳು

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

Bar & Bench

ಅಕ್ರಮ ಹಣ ವರ್ಗಾವಣೆ, ನಿಧಿ ದುರುಪಯೋಗ ಹಾಗೂ ಗಣಿ ಗುತ್ತಿಗೆ ಅಕ್ರಮ ಸಂಬಂಧ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ವಿರುದ್ಧ ಜಾರ್ಖಂಡ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ [ಜಾರ್ಖಂಡ್‌ ಸರ್ಕಾರ ಮತ್ತು ಶಿವಶಂಕರ್‌ ಶರ್ಮಾ ನಡುವಣ ಪ್ರಕರಣ].

ಸೊರೇನ್‌ ಅವರ ವಿರುದ್ಧ ಶಿವಶಂಕರ್‌ ಶರ್ಮಾ ಎಂಬುವವರು ಸಲ್ಲಿಸಿದ್ದ ಪಿಐಎಲ್‌ ವಿಚಾರಣೆಗೆ ಅರ್ಹ ಎಂದಿದ್ದ ಜಾರ್ಖಂಡ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ತನ್ನ ಆದೇಶ ಕಾಯ್ದಿರಿಸಿತು.

“ಆದೇಶವನ್ನು ಕಾಯ್ದಿರಿಸಲಾಗಿದೆ. ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿರುವುದರಿಂದ ಹೈಕೋರ್ಟ್ ರಿಟ್ ಅರ್ಜಿಗಳ ವಿಚಾರಣೆ ಮುಂದುವರೆಸುವಂತಿಲ್ಲ” ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಕ್ರಮ ಹಣಕಾಸು ವ್ಯವಹಾರದ ವಿಸ್ತೃತ ಸಂಚೊಂದರ ಭಾಗವಾಗಿ ಅಪರಾಧ ನಡೆದಿದೆ ಎಂದು ಪ್ರಕರಣದ ದಾಖಲಿಸದೆ ಇರುವಾಗ ಜಾರಿ ನಿರ್ದೇಶನಾಲಯದ ತನಿಖೆ ಪ್ರಾರಂಭಿಸಲು ಪಿಐಎಲ್‌ ಮಾರ್ಗ ಅನುಸರಿಸುವುದಕ್ಕೆ ನ್ಯಾಯಾಲಯ ಅಸಮ್ಮತಿಸಿತು .

ಜಾರಿ ನಿರ್ದೇಶನಾಲಯದ (ಇಡಿ) ಮುಚ್ಚಿದ ಲಕೋಟೆ ವರದಿಯನ್ನು ಆಧರಿಸಿ ಜಾರ್ಖಂಡ್ ಹೈಕೋರ್ಟ್ ಸಿಬಿಐ ತನಿಖೆಗೆ ಈ ಹಿಂದೆ ಸೂಚಿಸಿತ್ತು. ಆದರೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನು ತಿರಸ್ಕರಿಸಿದ್ದ ನ್ಯಾಯಾಲಯ ನರೇಗಾ ಹಗರಣಕ್ಕೆ ಸಂಬಂಧಿಸಿದ 16 ಎಫ್‌ಐಆರ್‌ಗಳ ವಿವರಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಸರ್ಕಾರ ಈ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಪಿಐಎಲ್‌ಗಳು ವಿಚಾರಣೆಗೆ ಅರ್ಹವೇ ಎಂಬುದನ್ನು ಮೊದಲೇ ನಿರ್ಧರಿಸಲು ಹೈಕೋರ್ಟ್‌ಗೆ ಮೇ 24ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ವಿಚಾರಣೆಗೆ ಅರ್ಹ ಎಂದು ಜೂನ್ 3ರಂದು ಹೈಕೋರ್ಟ್ ಹೇಳಿತ್ತು. ನಂತರ ರಾಜ್ಯ ಸರ್ಕಾರ ಪ್ರಸ್ತುತ ಮನವಿಯಲ್ಲಿ ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.

"ಪಿಐಎಲ್‌ನಲ್ಲಿ, ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದ್ದು ಕ್ರಿಮಿನಲ್ ಪ್ರಕರಣದಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಅನುಮತಿಸಬಹುದು" ಎಂದಿರುವ ಸರ್ವೋಚ್ಚ ನ್ಯಾಯಾಲಯ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.

ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು, ಜಾರ್ಖಂಡ್‌ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌, ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ವಾದ ಮಂಡಿಸಿದರು.