Parkash Singh Badal, Sukhbir Singh Badal and Supreme Court
Parkash Singh Badal, Sukhbir Singh Badal and Supreme Court 
ಸುದ್ದಿಗಳು

ಶಿರೋಮಣಿ ಅಕಾಲಿ ದಳ ನೇತಾರರ ವಿರುದ್ಧದ ಫೋರ್ಜರಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

Bar & Bench

ಪಂಜಾಬ್‌ನ ಪ್ರಮುಖ ರಾಜಕೀಯ ಪಕ್ಷಗಳಲ್ಲೊಂದಾದ ಶಿರೋಮಣಿ ಅಕಾಲಿದಳ (ಎಸ್‌ಎಡಿ) ನಾಯಕರಾದ ಪ್ರಕಾಶ್ ಸಿಂಗ್ ಬಾದಲ್ ಮತ್ತು ಸುಖ್‌ಬೀರ್ ಸಿಂಗ್ ಬಾದಲ್ ಅವರ ವಿರುದ್ಧದ ವಂಚನೆ ಮತ್ತು ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಯಾಲಯದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ [ಸುಖ್‌ಬೀರ್ ಸಿಂಗ್ ಬಾದಲ್ ಮತ್ತು ಬಲ್ವಂತ್ ಖೇರಾ ಇನ್ನಿತರರ ನಡುವಣ ಪ್ರಕರಣ].

ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಈ ನಾಯಕರು ಸಲ್ಲಿಸಿದ್ದ ಮನವಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಪ್ರತಿವಾದಿಗಳಿಗೆ ನೋಟಿಸ್‌ ನೀಡಿತು.

ಗುರುದ್ವಾರ ಚುನಾವಣಾ ಆಯೋಗ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಶಿರೋಮಣಿ ಅಕಾಲಿದಳ ಪ್ರತ್ಯೇಕ ಸಂವಿಧಾನಗಳನ್ನು ಸಲ್ಲಿಸಿದೆ ಎಂದು ಆರೋಪಿಸಿ ಹೋಶಿಯಾರ್‌ಪುರ್‌ ನಿವಾಸಿ ಬಲ್ವಂತ್ ಸಿಂಗ್ ಖೇರಾ ಅವರು 2009ರಲ್ಲಿ ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ಕ್ರಿಮಿನಲ್ ದೂರು ಸಲ್ಲಿಸಿದ್ದರು.

ಒಂದೆಡೆ, ಶಿರೋಮಣಿ ಅಕಾಲಿದಳ ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುತ್ತದೆ ಇನ್ನೊಂದೆಡೆ ಅದು ಧಾರ್ಮಿಕ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (ಎಸ್‌ಜಿಪಿಸಿ) ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ ಎಂದು ಕ್ರಿಮಿನಲ್ ದೂರು ವಿವರಿಸಿತ್ತು.

ಆದರೆ, ಧಾರ್ಮಿಕವಾಗಿರುವುದು ಜಾತ್ಯತೀತ ತತ್ವಗಳಿಗೆ ವಿರುದ್ಧವಾದುದಲ್ಲ. ಆದ್ದರಿಂದ, ಗುರುದ್ವಾರ ಸಮಿತಿಯ ಚುನಾವಣೆಗೆ ಸ್ಪರ್ಧಿಸುವ ಶಿರೋಮಣಿ ಅಕಾಲಿದಳವನ್ನು ಜಾತ್ಯತೀತ ಪಕ್ಷವಲ್ಲ ಎಂದು ಹೇಳಲಾಗದು ಎಂಬುದಾಗಿ ಇಂದಿನ ವಿಚಾರಣೆ ವೇಳೆ ಹಿರಿಯ ವಕೀಲರಾದ ಆರ್‌ ಎಸ್‌ ಚೀಮಾ ಮತ್ತು ಕೆ ವಿ ವಿಶ್ವನಾಥನ್‌  ಅರ್ಜಿದಾರರ ಪರ ವಾದ ಮಂಡಿಸಿದರು.   ದೂರುದಾರ ಬಲ್ವಂತ್ ಸಿಂಗ್ ಖೇರಾ ಪರ ನ್ಯಾಯವಾದಿ ಇಂದಿರಾ ಉನ್ನಿನಾಯರ್ ವಾದಿಸಿದರು.