Justice Shantanagoudar and Supreme Court
Justice Shantanagoudar and Supreme Court  
ಸುದ್ದಿಗಳು

ನ್ಯಾ. ಶಾಂತನಗೌಡರ್‌ಗೆ ಸಂತಾಪ: ಸುಪ್ರೀಂಕೋರ್ಟ್, ಕರ್ನಾಟಕ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳ ಕಲಾಪ ರದ್ದು

Bar & Bench

ಶನಿವಾರ, ಏಪ್ರಿಲ್‌ 24 ರಂದು ನಿಧನರಾದ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಗೌರವಾರ್ಥ ಸುಪ್ರೀಂಕೋರ್ಟ್‌ ಕರ್ನಾಟಕ, ಪಂಜಾಬ್‌- ಹರಿಯಾಣ ಹಾಗೂ ಅಲಹಾಬಾದ್‌ ಹೈಕೋರ್ಟ್‌ಗಳು ಸೋಮವಾರ ನ್ಯಾಯಾಲಯದ ಕಾರ್ಯಕಲಾಪಗಳನ್ನು ರದ್ದುಪಡಿಸಿವೆ.

ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳು ನ್ಯಾ. ಶಾಂತನಗೌಡರ್‌ ಅವರಿಗೆ ಗೌರವ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ಮಾಡಿದ ಬಳಿಕ ನ್ಯಾಯಾಲಯದ ಕಲಾಪವನ್ನು ದಿನದ ಮಟ್ಟಿಗೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ರದ್ದುಗೊಳಿಸಿದರು. ವಿಚಾರಣೆಗಾಗಿ ಸೋಮವಾರ ಪಟ್ಟಿಮಾಡಲಾದ ಎಲ್ಲಾ ಪ್ರಕರಣಗಳನ್ನು ಮಂಗಳವಾರ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.

ನ್ಯಾಯಮೂರ್ತಿ ಶಾಂತನಗೌಡರ್ ಅವರು ತಮ್ಮ 62 ನೇ ವಯಸ್ಸಿನಲ್ಲಿ ಹರಿಯಾಣ ಗುರುಗ್ರಾಮದಲ್ಲಿ ನಿಧನ ಹೊಂದಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ವೈರಲ್‌ ನ್ಯುಮೋನಿಯಾ ಸೋಂಕು ತಗುಲಿತ್ತು.

ಭಾನುವಾರ ಪತ್ರಿಕಾ ಪ್ರಕಟಣೆಯಲ್ಲಿ ಸಿಜೆಐ ಎನ್‌‌ ವಿ ರಮಣ ಅವರು “ಶಾಂತನಗೌಡರ್‌ ಶೀಘ್ರ ಗುಣಮುಖರಾಗುವುದಾಗಿ ಭಾವಿಸಿದ್ದೆ. ಆದರೆ ಘೋರ ಆಘಾತವೊಂದು ಎರಗಿತು. ಅವರ ಅಗಲಿಕೆಯಿಂದಾಗಿ ಅದ್ಭುತ ಕಾನೂನು ಕುಶಾಗ್ರಮತಿ ಹಾಗೂ ಮೌಲ್ಯಯುತ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ಕಾನೂನು ಚತುರರಾದ ಅವರೊಂದಿಗಿನ ಒಡನಾಟದಿಂದ ಸಾಕಷ್ಟು ಪ್ರಯೋಜನ ಪಡೆದಿದ್ದೇನೆ” ಎಂದು ಸ್ಮರಿಸಿದ್ದರು.