ಮೈಸೂರು ರಾಜಮನೆತನಕ್ಕೆ ಸೇರಿದ ಬೆಂಗಳೂರಿನಲ್ಲಿರುವ 472 ಎಕರೆ ಮತ್ತು 16 ಗುಂಟೆ ಜಾಗವನ್ನು ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ 1996ರ ಅನ್ವಯ ಸ್ವಾಧೀನಪಡಿಸಿಕೊಂಡಿದೆ. ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ವ್ಯವಸ್ಥೆಯು 2004ರಲ್ಲಿ ಜಾರಿಗೆ ಬಂದಿರುವುದರಿಂದ ಮೈಸೂರಿನ ರಾಜವಂಶಸ್ಥರಿಗೆ ₹3,011 ಕೋಟಿ ಟಿಡಿಆರ್ ನೀಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಬಲವಾಗಿ ಪ್ರತಿಪಾದಿಸಿದೆ.
ಮೈಸೂರು ರಾಜಮನೆತನವು ಟಿಡಿಆರ್ ಪರಿಹಾರ ನೀಡದ ರಾಜ್ಯ ಸರ್ಕಾರದ ವಿರುದ್ಧ ಹೂಡಿರುವ ನ್ಯಾಯಾಂಗ ನಿಂದನೆ ಹಾಗೂ ಸಂಬಂಧಿತ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಹಾಲಿ ಪ್ರಕರಣದಲ್ಲಿ ಕಾನೂನು ಉಲ್ಲೇಖಿಸಿದೇ ರಾಜ್ಯ ಸರ್ಕಾರ ಪ್ರಮಾದ ಎಸಗಿದೆ. ಇದಕ್ಕಾಗಿ ನಮಗೆ ಅಪರಾಧ ಪ್ರಜ್ಞೆ ಕಾಡುತ್ತಿದೆ. ಇದನ್ನೇ ಅಫಿಡವಿಟ್ನಲ್ಲಿ ಹೇಳಲಾಗಿದ್ದು, ಸರ್ಕಾರ ಇದನ್ನು ಉಲ್ಲೇಖಿಸಬೇಕಿತ್ತು. ಆದರೆ, ಇದನ್ನು ಮಾಡಿಲ್ಲ. ಅಂತಿಮವಾಗಿ ಕಾನೂನು ಟಿಡಿಆರ್ ನೀಡಲು ಅನುಮತಿಸುವುದಿಲ್ಲ” ಎಂದರು.
“ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ರಾಜ್ಯ ಸರ್ಕಾರದ ಬಳಿ ಇದ್ದ ಭೂಮಿಯನ್ನು ಬಳಕೆ ಮಾಡಲಾಗಿದೆ. ಇದಕ್ಕಾಗಿ ಪಡೆದಿದ್ದ ರಾಜಮನೆತನದ 15.39 ಎಕರೆ ಜಾಗವನ್ನು ಬಳಕೆ ಮಾಡಿಲ್ಲ. ಹೀಗಾಗಿ, ಬಳಕೆ ಮಾಡದ ಒಂದಿಷ್ಟು ಭೂಮಿಗೆ ಟಿಡಿಆರ್ ರೂಪದಲ್ಲಿ ₹3,011 ಕೋಟಿ ರೂಪಾಯಿ ನೀಡಲಾಗದು. ಇಲ್ಲಿ, ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು” ಎಂದು ವಿವರಿಸಿದರು.
“1996ರ ಕಾಯಿದೆಯನ್ನು ಎತ್ತಿ ಹಿಡಿಯುವ ಮೂಲಕ ಕರ್ನಾಟಕ ಹೈಕೋರ್ಟ್ ಸರ್ಕಾರದ ಪರ ಆದೇಶ ಮಾಡಿದೆ. ಆದರೆ, ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಕಾಯಿದೆ ಎತ್ತಿ ಹಿಡಿದಿರುವುದಕ್ಕೆ ವಿರುದ್ಧವಾದ ಆದೇಶವಿದೆ. ಕಾಯಿದೆಯ ಸೆಕ್ಷನ್ 14ಬಿ ಅನ್ವಯಿಸದಿದ್ದರೂ ರಾಜವಂಶಸ್ಥರಿಗೆ ₹3,011 ಕೋಟಿ ಟಿಡಿಆರ್ ಪಾವತಿಸಬೇಕು ಎಂದು ಹೇಳಲಾಗಿದೆ. ಇದು ಸ್ವಾಧೀನ ಪ್ರಕರಣವಲ್ಲ. ಕಾಯಿದೆ ಅನ್ವಯ ಅರಮನೆ ಆಸ್ತಿಯನ್ನು ಸರ್ಕಾರ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಿರುವಾಗ 14ಬಿ ಎಲ್ಲಿ ಅನ್ವಯಿಸುತ್ತದೆ?” ಎಂದು ಪ್ರಶ್ನಿಸಿದರು.
“ರಾಜಮನೆತನದವರು ಟಿಡಿಆರ್ಗೆ ಅರ್ಹರಲ್ಲ ಎಂಬುದು ಮೊದಲಿನಿಂದ ಸರ್ಕಾರದ ನಿಲುವಾಗಿದೆ. ಒಂದೊಮ್ಮೆ ಅವರು ಅರ್ಹರಾದರೆ ಭೂಸ್ವಾಧೀನ ಕಾಯಿದೆ ಅಡಿ ಪರಿಹಾರಕ್ಕೆ ಮಾತ್ರ ಅರ್ಹರಾಗಿದ್ದಾರೆ. ಹೀಗಾಗಿ, ₹3,011 ಕೋಟಿ ಮೌಲ್ಯ ನಿರ್ಧಾರವೂ ತಪ್ಪಾಗಿದೆ. 2004ಕ್ಕೂ ಮುನ್ನ ಟಿಡಿಆರ್ ಎಂಬ ವಿಚಾರವೇ ಇರಲಿಲ್ಲ. ಹೀಗಿರುವಾಗ ರಾಜಮನೆತನಕ್ಕೆ ಟಿಡಿಆರ್ ನೀಡಬೇಕು ಎಂಬ ಪ್ರಶ್ನೆ ಎಲ್ಲಿದೆ? ಹೀಗಾಗಿ, ಟಿಡಿಆರ್ ಇಲ್ಲಿಗೆ ಅನ್ವಯಿಸುವುದಿಲ್ಲ” ಎಂದರು.
“ಬಿಬಿಎಂಪಿಯು 2009ರ ಡಿಸೆಂಬರ್ 26ರಂದು ಟಿಡಿಆರ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕಾನೂನಿನ ದೋಷವನ್ನು ಎಸಗಿದೆ. ಬಿಬಿಎಂಪಿಯ ಆ ಪತ್ರಕ್ಕೆ ಶಾಸನದ ಬಲ ಇಲ್ಲ. ಅದು ಕಾಯಿದೆ ಸೆಕ್ಷನ್ 14ಬಿ ಮೇಲೆ ಸವಾರಿ ಮಾಡಲಾಗದು. ಶಾಸನದಲ್ಲಿ ನಿರ್ದಿಷ್ಟ ರೀತಿಯಲ್ಲಿ ಮಾಡಲು ಅನುಮತಿ ಇರುವಾಗ ಅದೇ ರೀತಿಯಲ್ಲಿ ಅದನ್ನು ಮಾಡಬೇಕೆ ವಿನಾ ಬೇರೆ ರೀತಿಯಲ್ಲಲ್ಲ” ಎಂದು ವಾದಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು “ಪ್ರಕರಣದಲ್ಲಿ ಕಾನೂನಿನ ಸೂಕ್ಷ್ಮ ಅಂಶಗಳಿದ್ದು, ಉಭಯ ಪಕ್ಷಕಾರರ ನಡುವೆ ಸಮತೋಲನ ಸಾಧಿಸಬೇಕಿದೆ. ಅಲ್ಲದೇ, 1996ರ ಕಾಯಿದೆ ಸಿಂಧುತ್ವ ಎತ್ತಿ ಹಿಡಿದಿರುವ ಆದೇಶ ಪ್ರಶ್ನಿಸಿರುವ ಮೇಲ್ಮನವಿಯ ವಿಚಾರವು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಸೆಕ್ಷನ್ 14ಬಿ ಅನ್ವಯಿಸುವುದು ಅಥವಾ ಅನ್ವಯಿಸದೇ ಇರುವುದರ ಪರಿಣಾಮವು ಮೇಲ್ಮನವಿಯ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ” ಎಂದು ಮೌಖಿಕವಾಗಿ ಹೇಳಿ, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿತು.
ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆಯು 1996ರ ನವೆಂಬರ್ 18ರಂದು ಜಾರಿಯಾಗಿದ್ದು, 2004ರಲ್ಲಿ ಕಾಯಿದೆಗೆ ಸೆಕ್ಷನ್ 14ಬಿ ಅಳವಡಿಸಲಾಗಿದೆ. 1996ರಲ್ಲಿ ಕಾಯಿದೆ ಜಾರಿಗೆ ಬಂದಾಗಲೇ ಆಕ್ಷೇಪಾರ್ಹವಾದ ರಾಜಮನೆತನದ ಭೂಮಿಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆದಿತ್ತು. ಭೂಮಿಯನ್ನು ಸರ್ಕಾರ ಅದಾಗಲೇ ಸರ್ಕಾರಕ್ಕೆ ಸ್ವಾಧೀನ ಪಡಿಸಿಕೊಂಡಿದ್ದರಿಂದ 2004ರಲ್ಲಿ ಕಾಯಿದೆಗೆ ಅಳವಡಿಸಿರುವ ಸೆಕ್ಷನ್ 14ಬಿ ಅನ್ವಯಿಸುವುದಿಲ್ಲ.
ಸೆಕ್ಷನ್ 14ಬಿ ಅನ್ವಯಿಸಬೇಕಾದರೆ ಸೆಕ್ಷನ್ 14ಬಿ ಜಾರಿಗೆ ಬಂದ ಬಳಿಕ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗುತ್ತದೆ ಎಂದು ಅಧಿಸೂಚನೆ ಹೊರಡಿಸಬೇಕು; ಭೂಮಾಲೀಕರು ಸ್ವಯಂಪ್ರೇರಿತವಾಗಿ ಭೂಮಿಯನ್ನು ಸರ್ಕಾರದ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕು; ಹಸ್ತಾಂತರದ ಸಂದರ್ಭದಲ್ಲಿ ಭೂಮಿಯ ಹಕ್ಕಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ಇರಬಾರದು ಎಂದು ಹೇಳುತ್ತದೆ.
ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಪ್ರತಿವಾದಿಗಳ ಪರವಾಗಿ ರಾಜ್ಯದಿಂದ ಹಿರಿಯ ವಕೀಲರಾದ ಆದಿತ್ಯ ಸೋಂಧಿ ಮತ್ತು ಡಿ ಆರ್ ರವಿಶಂಕರ್ ಹಾಜರಿದ್ದರು.