TRP Scam, Republic TV
TRP Scam, Republic TV 
ಸುದ್ದಿಗಳು

[ಟಿಆರ್‌ಪಿ ಹಗರಣ] ಸಂತ್ರಸ್ತನಂತೆ ವರ್ತಿಸಲು ಯತ್ನಿಸುತ್ತಿರುವ ರಿಪಬ್ಲಿಕ್ ಟಿವಿ: ಮುಂಬೈ ಪೊಲೀಸರ ಆರೋಪ

Bar & Bench

ರಿಪಬ್ಲಿಕ್‌ ಟಿವಿ ಸಂತ್ರಸ್ತನಂತೆ ವರ್ತಿಸಲು ಯತ್ನಿಸುತ್ತಿದ್ದು ಟಿಆರ್‌ಪಿ ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಯತ್ನಿಸುತ್ತಿದೆ ಎಂದು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮುಂಬೈ ಪೊಲೀಸರು ಆರೋಪಿಸಿದ್ದಾರೆ. ಎಆರ್‌ಜಿ ಔಟ್ಲಿಯರ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಪ್ರತ್ಯುತ್ತರ ಅಫಿಡವಿಟ್‌ಗೆ ಉತ್ತರ ರೂಪದಲ್ಲಿ ಅವರು ಈ ಅಫಿಡವಿಟ್‌ ಸಲ್ಲಿಸಿದ್ದಾರೆ. ಪೊಲೀಸರು ಉಲ್ಲೇಖಿಸಿರುವ ಪ್ರಮುಖ ವಿಚಾರಗಳು ಹೀಗಿವೆ:

  • ವಿಚಾರಣಾ ನ್ಯಾಯಾಲಯದ ಮುಂದೆ ರಿಪಬ್ಲಿಕ್‌ ಟಿವಿ ಆರೋಪಿಯಲ್ಲ ಮತ್ತು ಅದು ಸಲ್ಲಿಸಿದ ಪ್ರತ್ಯುತ್ತರ ಅಫಿಡವಿಟ್‌ನಲ್ಲಿ ಕ್ರಿಮಿನಲ್‌ ಮೊಕದ್ದಮೆಯನ್ನು ಪ್ರಶ್ನಿಸಿದ್ದು ಟಿಆರ್‌ಪಿ ಹಗರಣದ ತನಿಖೆಯನ್ನು ಮುಂಬೈ ಪೊಲೀಸರಿಗೆ ಹೊರತಾದ ತನಿಖಾ ಸಂಸ್ಥೆಗೆ ಸಲ್ಲಿಸಿದೆ. ಆದರೆ ತಾನು ಆರೋಪಿ ಅಲ್ಲದಿರುವಾಗ ಅದು ಮೊಕದ್ದಮೆಯನ್ನು ಪ್ರಶ್ನಿಸಲು ಬರುವುದಿಲ್ಲ.

  • ಪ್ರಾಥಮಿಕ ತನಿಖೆಯ ವೇಳೆ ರಿಪಬ್ಲಿಕ್ ಟಿವಿಯ ವ್ಯಕ್ತಿಗಳು ಮತ್ತು ಸಿಬ್ಬಂದಿಗಳನ್ನು ಶಂಕಿತರೆಂದು ಮಾತ್ರ ಹೆಸರಿಸಲಾಗಿದೆ ಹಾಗೆ ಹೆಸರಿಸಿರುವುದರಿಂದ ಅವರ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಿದಂತಾಗುವುದಿಲ್ಲ. ಅಂತಹ ಕ್ರಮ ಸಂಪೂರ್ಣ ತನಿಖೆ / ಆರೋಪಪಟ್ಟಿ/ ಪೂರಕ ಆರೋಪಪಟ್ಟಿಯನ್ನು ರದ್ದುಗೊಳಿಸಲು ಆಧಾರವಾಗಿರಬಾರದು.

  • ರಿಪಬ್ಲಿಕ್‌ ಟಿವಿಯನ್ನು ಆರೋಪಿ ಎಂದು ಹೆಸರಿಸಿದ್ದಾಗ ಮಾತ್ರ ಅದು ಹಾಗೆ ಮಾಡಲು ಸಾಧ್ಯ. ಆರೋಪಿಗಳೆಂದು ಹೆಸರಿಸಲಾದ ವ್ಯಕ್ತಿಗಳ ಸಲುವಾಗಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸುವಂತಿಲ್ಲ.

  • ರಿಪಬ್ಲಿಕ್‌ ಟಿವಿಯ ಪ್ರತ್ಯುತ್ತರ ರಿಟ್‌ ತನ್ನ ವ್ಯಾಪ್ತಿ ಮೀರಿದ್ದು ವಿಚಾರಣಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿರುವ ವಾಸ್ತವ ಮತ್ತು ಆರೋಪಗಳ ವಿಚಾರಣೆಯನ್ನು ಹೈಕೋರ್ಟ್‌ ನಡೆಸುತ್ತದೆ. ಎಫ್‌ಐಆರ್ / ಆರೋಪಪಟ್ಟಿಅಥವಾ ತನಿಖೆಯನ್ನು ರದ್ದುಗೊಳಿಸುವ ಅಧಿಕಾರವನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ.

  • ರಿಪಬ್ಲಿಕ್‌ ಟಿವಿಯದ್ದು ಡೋಲಾಯಮಾನ ನಡೆ. ಒಂದೆಡೆ ತನ್ನ ವಿರುದ್ಧ ಯಾವುದೇ ಪ್ರಕರಣ ಇಲ್ಲ ಎಂದು ಅದು ಹೇಳುತ್ತಿದೆ. ಮತ್ತೊಂದೆಡೆ ಅಪರಾಧಗಳ ತನಿಖೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ವ್ಯಾಪ್ತಿಗೆ ಮಾತ್ರ ಬರಲಿದ್ದು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎನ್ನುತ್ತಿದೆ.

  • ರಾಯಗಡ ಆತ್ಮಹತ್ಯೆ ಪ್ರಚೋದನೆ ಪ್ರಕರಣ, ಬಾಂದ್ರಾ ದಂಗೆ ಪ್ರಕರಣಗಳಿಗೂ ಟಿಆರ್‌ಪಿ ಹಗರಣಕ್ಕೂ ನಂಟು ಕಲ್ಪಿಸಿ ಪ್ರಕರಣವನ್ನು ಅಸ್ಪಷ್ಟಗೊಳಿಸಲು ಅದು ಯತ್ನಿಸುತ್ತಿದೆ. ಅವು ಬೇರೆಯದೇ ಅಪರಾಧಗಳಾಗಿದ್ದು ಕಾಲ್ಪನಿಕ ದೃಷ್ಟಿಯಿಂದ ಗ್ರಹಿಸಬಾರದು.

ರಿಪಬ್ಲಿಕ್ ಟಿವಿಯ ನೌಕರರನ್ನು ಸಹ ಆರೋಪಿಗಳೆಂದು ಹೆಸರಿಸಿಲ್ಲದ ಕಾರಣ ಎಆರ್‌ಜಿಯ ಮನವಿ ನಿಲ್ಲುವುದಿಲ್ಲ ಎಂದು ಮುಂಬೈ ಪೊಲೀಸರು ಈ ಹಿಂದೆ ಉತ್ತರಿಸಿದ್ದರು. ಮಾರ್ಚ್‌ 16ರಂದು ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ.