A1
A1
ಸುದ್ದಿಗಳು

ಬಾಕಿ ಇರುವ ಅಪರಾಧ ಪ್ರಕರಣಗಳ ಕುರಿತ ಟಿವಿ ಚರ್ಚೆಯಿಂದ ನ್ಯಾಯದಾನದಲ್ಲಿ ಹಸ್ತಕ್ಷೇಪ: ಸುಪ್ರೀಂ ಕೋರ್ಟ್

Bar & Bench

ನ್ಯಾಯಾಲಯದಲ್ಲಿ ಬಾಕಿ ಇರುವ ಅಪರಾಧ ಪ್ರಕರಣಗಳ ಕುರಿತು ಟೆಲಿವಿಷನ್ ಚಾನೆಲ್‌ನಂತಹ ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವುದು ಅಥವಾ ಸಂವಾದ ನಡೆಸುವುದು ಕ್ರಿಮಿನಲ್‌ ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ [ವೆಂಕಟೇಶ್ ಅಲಿಯಾಸ್ ಚಂದ್ರ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ವಿಚಾರಣಾ ನ್ಯಾಯಾಲಯವು ವಿಧಿಸಿದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ವಿಚಾರ ತಿಳಿಸಿತು. ಅಂದಹಾಗೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯ ಆಕ್ಷೇಪಿತ ತಪ್ಪೊಪ್ಪಿಗೆ ಹೇಳಿಕೆಯ ಡಿವಿಡಿ ಮುದ್ರಿಕೆಯನ್ನು ಉದಯ ಟಿವಿ ಕನ್ನಡದ ಕ್ರೈಮ್‌ ಆಧಾರಿತ ಕಾರ್ಯಕ್ರಮವೊಂದರಲ್ಲಿ ಪ್ರಸಾರ ಮಾಡಲಾಗಿತ್ತು.

ಡಿವಿಡಿಯನ್ನು ಖಾಸಗಿ ಟಿವಿ ಚಾನೆಲ್‌ ಕೈ ಸೇರಲು ಅವಕಾಶ ಮಾಡಿಕೊಟ್ಟು ಅದನ್ನು ಕಾರ್ಯಕ್ರಮವೊಂದರಲ್ಲಿ ಪ್ರಸಾರ ಮಾಡಲು ಅವಕಾಶ ನೀಡುವುದು ಕರ್ತವ್ಯ ಲೋಪ ಮತ್ತು ನ್ಯಾಯಾಡಳಿತದಲ್ಲಿ ನೇರ ಹಸ್ತಕ್ಷೇಪವಲ್ಲದೆ ಬೇರೇನೂ ಅಲ್ಲ.
ಸುಪ್ರೀಂ ಕೋರ್ಟ್

ಅಪೀಲುದಾರರ ಮೇಲೆ ಕೊಲೆ ಮತ್ತು ಡಕಾಯಿತಿ ಆರೋಪ ಇತ್ತು. ಮೇಲ್ಮನವಿಯ ವಿಚಾರಣೆ ನಡೆಸಿದ ಸರ್ವೊಚ್ಚ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಅಡಚಣೆಗಳಿವೆ ಎಂದಿತು. ಸಾಕ್ಷ್ಯಾಧಾರ ಕಾಯಿದೆಯ ತತ್ವಗಳಿಗೆ ಸರಿಹೊಂದದ ರೀತಿಯಲ್ಲಿ ಹೇಳಿಕೆಗಳನ್ನು ತಪ್ಪೊಪ್ಪಿಗೆಯಾಗಿ ದಾಖಲಿಸುವ ಪ್ರವೃತ್ತಿ ಕಂಡುಬಂದಿದೆ. ಎರಡನೆಯದಾಗಿ ಸಾಕ್ಷ್ಯವನ್ನು ಟಿವಿಯಲ್ಲಿ ಚರ್ಚಿಸಲಾಗಿದೆ. ಮೂರನೆಯದಾಗಿ ಮೇಲ್ಮನವಿದಾರರು ಇತರ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಸಾಕಷ್ಟು ವಿವರಗಳಿಲ್ಲ ಎಂದು ಅದು ವಿವರಿಸಿತು.

ಅಂತಿಮವಾಗಿ ಘಟನೆಗೆ ಸಂಬಂಧಿಸಿದಂತೆ ಸನ್ನಿವೇಶಗಳ ಸರಣಿಯನ್ನು ನಿರೂಪಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಮೇಲ್ಮನವಿದಾರರನ್ನು ಖುಲಾಸೆಗೊಳಿಸಿತು.