CJI NV Ramana and Union Law Minister Kiren Rijiju
CJI NV Ramana and Union Law Minister Kiren Rijiju  
ಸುದ್ದಿಗಳು

ಸುರಕ್ಷತೆ ದೃಷ್ಟಿಯಿಂದ ಜಿಲ್ಲಾ ನ್ಯಾಯಾಲಯಗಳಿಗೆ ಎರಡು ಹಂತದ ಭದ್ರತೆ: ಸಿಜೆಐ ಎನ್ ವಿ ರಮಣ

Bar & Bench

ದೇಶದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಭದ್ರತೆಯ ಬಗ್ಗೆ ಇರುವ ಆತಂಕ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ತಮಗೆ ಭರವಸೆ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಶನಿವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿರುವ ಎರಡು ಹಂತದ ಭದ್ರತಾ ವ್ಯವಸ್ಥೆಯನ್ನು ಜಿಲ್ಲಾ ನ್ಯಾಯಾಲಯಗಳಲ್ಲಿಯೂ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಮುಖ್ಯಮಂತ್ರಿಗಳು ಮತ್ತು ದೇಶದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶದಲ್ಲಿನ ಬೆಳವಣಿಗೆಗಳ ಕುರಿತಂತೆ ಅಂದು ಸಂಜೆ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ʼಬಾರ್ & ಬೆಂಚ್ʼ ಕೇಳಿದ ಪ್ರಶ್ನೆಗೆ ಸಿಜೆಐ ಪ್ರತಿಕ್ರಿಯಿಸಿದರು.

ನ್ಯಾಯಾಂಗ ಮೂಲಸೌಕರ್ಯ ಕುರಿತು ಸಿಜೆಐ ಈ ಹಿಂದೆ ಪ್ರಸ್ತಾಪಿಸಿದ್ದರು. ಹೀಗಾಗಿ, ಹಿಂಸಾತ್ಮಕ ದಾಳಿ ಮತ್ತು ಸ್ಫೋಟಗಳಿಗೆ ತುತ್ತಾಗುತ್ತಿರುವ ಜಿಲ್ಲಾ ನ್ಯಾಯಾಲಯಗಳಲ್ಲಿ ಭದ್ರತಾ ಲೋಪ ತೊಡೆದು ಹಾಕಲು ಏನಾದರೂ ಬದಲಾವಣೆ ಮಾಡಲಾಗುತ್ತದೆಯೇ ಎಂದು ʼಬಾರ್‌ ಅಂಡ್‌ ಬೆಂಚ್‌ʼ ಪ್ರಶ್ನಿಸಿತು.

ಆಗ ನ್ಯಾಯಮೂರ್ತಿಗಳು "ನಾವು ಈಗಾಗಲೇ ಸಮಸ್ಯೆ ಪರಿಶೀಲಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇಂತಹ ಘಟನೆಗಳನ್ನುಎದುರಿಸಲು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಅನುಸರಿಸಿದಂತೆ ಎರಡು ಹಂತದ ಭದ್ರತಾ ವ್ಯವಸ್ಥೆ ಜಾರಿಗೆ ತರಲು ಚಿಂತಿಸುತ್ತಿದ್ದೇವೆ" ಎಂದು ಉತ್ತರಿಸಿದರು.

ಅನೇಕ ಮಹತ್ವದ ಪ್ರಕರಣಗಳ ವಿಚಾರಣೆಯಲ್ಲಿ ತೊಡಗಿದ್ದ ಜಾರ್ಖಂಡ್‌ನ ಧನಾಬಾದ್‌ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉತ್ತಮ್‌ ಚಂದ್‌ ಅವರಿಗೆ 2021ರ ಜುಲೈನಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟರು.

ಅಲ್ಲದೆ ಸೆಪ್ಟೆಂಬರ್ 2021ರಲ್ಲಿ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ನಡೆದ ಶೂಟೌಟ್‌ನಲ್ಲಿ ದರೋಡೆಕೋರ ಜಿತೇಂದರ್ ಗೋಗಿ ಸೇರಿದಂತೆ ಮೂವರು ಮೃತಪಟ್ಟಿದ್ದರು. ಅದೇ ನ್ಯಾಯಾಲಯದಲ್ಲಿ 2021ರ ಡಿಸೆಂಬರ್‌ನಲ್ಲಿ ಸಣ್ಣ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ತಮಿಳುನಾಡಿನ ಸೇಲಂ ಜಿಲ್ಲೆಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಅವರಿಗೆ ಮಾರ್ಚ್ 2022ರಲ್ಲಿ ಕಚೇರಿ ಸಹಾಯಕನೊಬ್ಬ ಚೂರಿ ಇರಿದಿದ್ದ. ನ್ಯಾಯಾಧೀಶರ ಕಚೇರಿಯಲ್ಲೇ ಈ ಘಟನೆ ನಡೆದಿತ್ತು. ಈ ಘಟನೆಗಳ ಬಳಿಕ ನ್ಯಾಯಾಧೀಶರ ಸುರಕ್ಷತೆ ಎಂಬುದು ನ್ಯಾಯಿಕ ವರ್ಗದಲ್ಲಿ ಪ್ರಮುಖ ಚರ್ಚೆಯ ವಿಷಯವಾಯಿತು.

ದೆಹಲಿಯ ಜಿಲ್ಲಾ ನ್ಯಾಯಾಲಯಗಳಲ್ಲಿ ಸುರಕ್ಷತೆ ಮತ್ತು ಭದ್ರತೆಗಾಗಿ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿ ದೆಹಲಿ ಹೈಕೋರ್ಟ್‌ ಮುಂದಿದೆ.