Justice V Chitambaresh and Justice P N Ravindran
Justice V Chitambaresh and Justice P N Ravindran 
ಸುದ್ದಿಗಳು

ಬಿಜೆಪಿ ಸೇರ್ಪಡೆಯಾದ ಕೇರಳ ಹೈಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು

Bar & Bench

ಕೇರಳದ ತ್ರಿಪುನಿತರದಲ್ಲಿ ಭಾನುವಾರ ನಡೆದ ಬಿಜೆಪಿಯ ವಿಜಯ ಯಾತ್ರೆಯ ಸಂದರ್ಭದಲ್ಲಿ ಕೇರಳ ಹೈಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಾದ ಪಿ ಎನ್‌ ರವೀಂದ್ರನ್‌ ಮತ್ತು ವಿ ಚಿತಂಬರೇಶ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ನಿವೃತ್ತ ನ್ಯಾ. ರವೀಂದ್ರನ್‌ ಅವರು 2007 ರಿಂದ 2018ರ ವರೆಗೆ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದರು. ನ್ಯಾ. ಚಿತಂಬರೇಶ್ ಅವರು 2011ರಲ್ಲಿ ಕೇರಳ ಹೈಕೋರ್ಟ್‌ಗೆ ಪದೋನ್ನತಿ ಪಡೆದಿದ್ದು, 2019ರ ವರೆಗೆ ಕರ್ತವ್ಯ ನಿರ್ವಹಿಸಿದ್ದರು.

ಕಳೆದ ತಿಂಗಳು ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ ಕೇಮಲ್‌ ಪಾಷಾ ಅವರು ವಿಧಾನಸಭಾ ಚುನಾವಣಾಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅವಕಾಶ ಕಲ್ಪಿಸಿದರೆ ಎರ್ನಾಕುಲಂನಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಪಾಷಾ ಅವರು 2013 ರಿಂದ 2018ರ ವರೆಗೆ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದರು.

2018ರಲ್ಲಿ ಪಾಷಾ ಅವರು ವಿದಾಯ ಭಾಷಣದಲ್ಲಿ ಹೈಕೋರ್ಟ್‌ನಲ್ಲಿನ ಸ್ಪಜನ ಪಕ್ಷಪಾತದ ಬಗ್ಗೆ ಮಾತನಾಡಿದ್ದು, ಭಾರಿ ವಿವಾದ ಸೃಷ್ಟಿಸಿತ್ತು. ಇತ್ತೀಚಿನ ಕೊಲಿಜಿಯಂ ಶಿಫಾರಸ್ಸುಗಳು ಮತ್ತು ನಿವೃತ್ತಿ ಹೊಂದಿದ ಬಳಿಕ ಪಡೆಯುವ ಹುದ್ದೆಗಳ ಕುರಿತು ಪಾಷಾ ಅವರು ಗಂಭೀರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಲ್ಲದೇ ಇತ್ತೀಚೆಗಿನ ಕೆಲವು ಬೆಳವಣಿಗೆಗಳು ಕೇರಳ ಹೈಕೋರ್ಟ್‌ ಘನತೆಗೆ ಧಕ್ಕೆ ಉಂಟು ಮಾಡಿವೆ ಎಂದಿದ್ದರು.

ಪಾಷಾ ಅವರ ನಂತರ ನಿವೃತ್ತ ಹೊಂದಿದ್ದ ನ್ಯಾ. ರವೀಂದ್ರನ್‌ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಂಗದ ಬಗ್ಗೆ ದುರುದ್ದೇಶಪೂರಿತ ಅಭಿಪ್ರಾಯ ವ್ಯಕ್ತಪಡಿಸಿ ಪ್ರಚಾರ ಪಡೆಯಲಾಗುತ್ತಿದೆ ಎಂದು ಅವರು ಪಾಷಾ ಅವರ ಹೇಳಿಕೆಯನ್ನು ರವೀಂದ್ರನ್ ಖಂಡಿಸಿದ್ದರು.

“… ಕೇರಳದ ಹೈಕೋರ್ಟ್ ಅನ್ನು ಪ್ರಾಮಾಣಿಕ ಮತ್ತು ಪ್ರಬುದ್ಧ ನ್ಯಾಯಾಧೀಶರ ತಂಡ ಮುನ್ನಡೆಸುತ್ತಿದೆ. ನ್ಯಾಯಮೂರ್ತಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ತಮ್ಮ ಪೂರ್ಣ ಸಮಯ ಮತ್ತು ಗಮನವನ್ನು ತಮ್ಮ ಕೆಲಸಕ್ಕೆ ವಿನಿಯೋಗಿಸುತ್ತಾರೆ. ಅದು ಅವರ ಸ್ವಭಾವತಃ ಜವಾಬ್ದಾರಿಯಾಗಿದೆ. ಇದಕ್ಕಾಗಿ ಎಂದಿಗೂ ನ್ಯಾಯಮೂರ್ತಿಗಳು ಪ್ರಚಾರವನ್ನು ಬಯಸುವುದಿಲ್ಲ ಮತ್ತು ಊಹಾಪೋಹ, ಗಾಸಿಪ್‌ಗಳಿಗೆ ಅವಕಾಶ ನೀಡುವಂತಹ ಏನನ್ನೂ ಮಾಡುವುದಿಲ್ಲ. ಹೀಗೆ ಮಾಡಿದ್ದಲ್ಲಿ ಅದು ನ್ಯಾಯಾಂಗ ಸಂಸ್ಥೆಯ ಮೇಲೆ ಸಾಮಾನ್ಯ ಜನರ ನಂಬಿಕೆಯನ್ನು ಹಾಳು ಮಾಡುತ್ತದೆ" ಎಂದು ಅವರು ಹೇಳಿದ್ದರು.