ನಕಲಿ ಅಂಕಪಟ್ಟಿ ನೀಡಿದ ಪ್ರಕರಣದಲ್ಲಿ ಅಯೋಧ್ಯೆ ಶಾಸಕ ಬಿಜೆಪಿಯ ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ ಅವರನ್ನು ದೋಷಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ.
ಕಳೆದ ಅಕ್ಟೋಬರ್ನಲ್ಲಿ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದ ವಿಶೇಷ ನ್ಯಾಯಾಧೀಶೆ ಪೂಜಾ ಸಿಂಗ್ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಅಲ್ಲದೆ ಪ್ರಕರಣದ ಉಳಿದ ಆರೋಪಿಗಳಾದ ಫೂಲ್ ಚಂದ್ರ ಯಾದವ್, ಕೃಪಾ ನಿಧನ್ ತಿವಾರಿ ಮತ್ತು ಇಂದ್ರ ಪ್ರತಾಪ್ ತಿವಾರಿ ಕೂಡ ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.
ಬಿಎಸ್ಸಿ ಕೋರ್ಸ್ಗೆ ಕಾಲೇಜೊಂದರಲ್ಲಿ ಪ್ರವೇಶ ಪಡೆಯಲು ತಿವಾರಿ ಅವರು ನಕಲಿ ಅಂಕಪಟ್ಟಿ ನೀಡಿದ್ದರು ಎಂದು ನ್ಯಾಯಾಲಯ ಹೇಳಿದೆ. ಬಿಎಸ್ಸಿ ಎರಡನೇ ವರ್ಷದಲ್ಲಿಅನುತ್ತೀರ್ಣರಾಗಿದ್ದರೂ ನಕಲಿ ಅಂಕಪಟ್ಟಿ ಸಲ್ಲಿಸಿ ಮೂರನೇ ವರ್ಷಕ್ಕೆ ಪ್ರವೇಶ ಪಡೆದಿದ್ದರು ಎಂದು 1992 ರಲ್ಲಿ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದರು.
ಅಪರಾಧಿ ಎಂದು ಘೋಷಿಸಿದ ದಿನಾಂಕದಿಂದ ಅವರು ಅನರ್ಹ ಎಂದು ಪರಿಗಣಿಸಲಾಗುವುದು ಎಂದು ವಿಧಾನಸಭಾ ಸಚಿವಾಲಯ ಇದೇ ಡಿಸೆಂಬರ್ 7 ರಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ತಿವಾರಿ ಪ್ರತಿನಿಧಿಸುತ್ತಿದ್ದ ಅಯೋಧ್ಯೆಯ ಗೋಸಾಯ್ಗಂಜ್ ವಿಧಾನಸಭಾ ಕ್ಷೇತ್ರ ತೆರವಾಗಿದೆ.