Religious Conversion 
ಸುದ್ದಿಗಳು

ಅಕ್ರಮ ಸಾಮೂಹಿಕ ಮತಾಂತರ ಪ್ರಕರಣ: 16 ಮಂದಿ ದೋಷಿಗಳೆಂದು ಉತ್ತರ ಪ್ರದೇಶ ನ್ಯಾಯಾಲಯ ತೀರ್ಪು

ಉತ್ತರ ಪ್ರದೇಶದ ಜನರನ್ನು ಹಿಂದೂ ಧರ್ಮದಿಂದ ಇಸ್ಲಾಂಗೆ ಸಾಮೂಹಿಕವಾಗಿ ಮತಾಂತರ ಮಾಡಿದ ಆರೋಪದ ಮೇಲೆ ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Bar & Bench

ಅಕ್ರಮ ಸಾಮೂಹಿಕ ಧಾರ್ಮಿಕ ಮತಾಂತರ ಪ್ರಕರಣ ಕೈಗೊಂಡಿದ್ದ ಹದಿನಾರು ವ್ಯಕ್ತಿಗಳನ್ನು ವಂಚನೆ, ಭಾರತದ ವಿರುದ್ಧ ಯುದ್ಧ ಸಾರುವಿಕೆ, ಧರ್ಮ ದ್ವೇಷ ಪ್ರಚೋದನೆ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಲಖನೌ ಸೆಷನ್ಸ್‌ ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿದೆ.

ನ್ಯಾಯಾಲಯವು ಮೌಲಾನಾ ಉಮರ್ ಗೌತಮ್ ಮತ್ತು ಮೊಹಮ್ಮದ್ ಕಲೀಂ ಸಿದ್ದಿಕಿ ಸೇರಿದಂತೆ ಹನ್ನೆರಡು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ನ್ಯಾಯಾಧೀಶ ವಿವೇಕಾನಂದ ಸರಣ್ ತ್ರಿಪಾಠಿ ಅವರು ಉಳಿದ ನಾಲ್ವರಿಗೆ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.

ಮೌಲಾನಾ ಉಮರ್ ಗೌತಮ್, ಅರ್ಶನ್ ಮುಸ್ತಫಾ ಅಲಿಯಾಸ್ ಭೂಪ್ರಿಯಾ ಬಂದೋ, ಆದಮ್ ಅಲಿಯಾಸ್ ಪ್ರಸಾದ್ ರಾಮೇಶ್ವರಂ ಕೊವೆರೆ, ಅಬ್ದುಲ್ ಮನ್ನಾನ್ ಅಲಿಯಾಸ್ ಮುನ್ನು ಯಾದವ್, ಮೊಹಮ್ಮದ್ ಅತೀಫ್ ಅಲಿಯಾಸ್ ಕುನಾಲ್ ಅಶೋಕ್ ಚೌಧರಿ, ಮುಫ್ತಿ ಖಾಜಿ ಜಹಾಂಗೀರ್ ಖಾಸ್ಮಿ, ಕೌಶರ್ ಬಾಬುದ್ದೀನ್, ಝಾಹರ್ ಸಲ್ಲುದ್ದೀನ್, ಫರಾಜ್ ಸಲ್ಲುದ್ದೀನ್, ಐ. ಶೇಖ್, ಧೀರಜ್ ಗೋವಿಂದ್, ರಾಹುಲ್ ಬೋಲಾ, ಮೊಹಮ್ಮದ್ ಕಲೀಮ್ ಸಿದ್ದಿಕಿ, ಮೊಹಮ್ಮದ್ ಸಲೀಂ, ಸರ್ಫರಾಜ್ ಅಲಿ ಜಾಫಾರಿ ಹಾಗೂ ಅಬ್ದುಲ್ಲಾ ಉಮರ್ ಶಿಕ್ಷೆಗೊಳಗಾದವರು.

ಎಲ್ಲಾ ಆರೋಪಿಗಳು ಉತ್ತರ ಪ್ರದೇಶದ ಜನರನ್ನು ಹಿಂದೂ ಧರ್ಮದಿಂದ ಇಸ್ಲಾಂಗೆ ಸಾಮೂಹಿಕವಾಗಿ ಮತಾಂತರ ಮಾಡುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಇಸ್ಲಾಂ ಧರ್ಮವನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಿ ಮತಾಂತರಗೊಂಡ ವ್ಯಕ್ತಿಗಳಿಗೆ ಪುನರ್ವಸತಿ ಒದಗಿಸಿದ್ದರು ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು.

ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ 2021 ರಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿತ್ತು. ಕಾನೂನು ಬಾಹಿರ ಧಾರ್ಮಿಕ ಮತಾಂತರದ ಜೊತೆಗೆ, ಅಂತಹ ಚಟುವಟಿಕೆಗಳನ್ನು ನಡೆಸಲು ಸಾಕಷ್ಟು ಹಣವನ್ನು ಸಂಗ್ರಹಿಸಿದ ಆರೋಪವೂ ಅವರ ಮೇಲಿದೆ