uthra case Kerala
uthra case Kerala 
ಸುದ್ದಿಗಳು

[ಉತ್ರಾ ಕೊಲೆ ಪ್ರಕರಣ] ನಾಗರಹಾವಿನಿಂದ ಕಚ್ಚಿಸಿ ಕೊಲೆ; ಪತಿಯೇ ಅಪರಾಧಿ ಎಂದು ತೀರ್ಪಿತ್ತ ಕೇರಳ ನ್ಯಾಯಾಲಯ

Bar & Bench

ಕೇರಳದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಉತ್ರಾ ಕೊಲೆ ಪ್ರಕರಣದ ತೀರ್ಪು ಸೋಮವಾರ ಪ್ರಕಟವಾಗಿದೆ. ವಿಷಕಾರಿ ನಾಗರಹಾವಿನಿಂದ 25 ವರ್ಷದ ಪತ್ನಿ ಉತ್ರಾ ಅವರನ್ನು ಕಚ್ಚಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಪತಿ ಸೂರಜ್‌ ಅಪರಾಧಿ ಎಂದು ಕೇರಳ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 302, 307, 328, 201ರ ಅಡಿ ಸೂರಜ್‌ರನ್ನು ಅಪರಾಧಿ ಎಂದು ಕೊಲ್ಲಂನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ನ್ಯಾಯಾಲಯವು ಬುಧವಾರ (ಅಕ್ಟೋಬರ್‌ 13ರಂದು) ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನು ಸೂರಜ್‌ ಕೊಲೆ ಮಾಡಿದ್ದ ಪ್ರಕರಣವು ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದು ಪತ್ನಿಯನ್ನು ಕೊಲೆ ಮಾಡಲು ಸೂರಜ್‌ ಮಾಡಿದ್ದ ಎರಡನೇ ಪ್ರಯತ್ನವಾಗಿತ್ತು. ಮೊದಲ ಬಾರಿ ಮಂಡಲದ ಹಾವು ಬಳಸಿ ಕೊಲೆಗೆ ವಿಫಲ ಯತ್ನವನ್ನು ನಡೆಸಿದ್ದ ಅರೋಪ ಸೂರಜ್‌ ಮೇಲಿತ್ತು.

2020ರ ಮೇನಲ್ಲಿ ನಾಗರ ಹಾವು ಕಡಿತದಿಂದ ಉತ್ರಾ ಸಾವನ್ನಪ್ಪಿದ ಬಳಿಕ ಆಕೆಯ ಕುಟುಂಬವು ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣವನ್ನು ಸೂರಜ್‌ ವಿರುದ್ಧ ದಾಖಲಿಸಿತ್ತು.

ತನಿಖೆಯ ಸಂದರ್ಭದಲ್ಲಿ ಹಾವು ಮಾರಾಟಗಾರ ₹10,000ಕ್ಕೆ ಎರಡು ಹಾವುಗಳನ್ನು ಸೂರಜ್‌ಗೆ ಮಾರಾಟ ಮಾಡಿದ್ದ ಅಂಶ ತಿಳಿದು ಬಂದಿತ್ತು. ಬಳಿಕ ಹಾವು ಮಾರಾಟ ಮಾಡಿದ್ದಾತ ಮತ್ತು ಸೂರಜ್‌ನನ್ನು ಪೊಲೀಸರು ಬಂಧಿಸಿದ್ದರು.

ಆನಂತರ, ಸೂರಜ್‌ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ, ಪಿತೂರಿ ಮತ್ತಿತರರ ಆರೋಪಗಳಿಗಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಉತ್ರಾ ಕುಟುಂಬದವರು ಪ್ರಕರಣ ದಾಖಲಿಸಿದ್ದರು. ಅಂತಿಮವಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ ಸೂರಜ್ ಆರ್ಥಿಕ ಲಾಭಕ್ಕಾಗಿ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದ.