Waqf Amendment Act 
ಸುದ್ದಿಗಳು

ವಕ್ಫ್ ತಿದ್ದುಪಡಿ ಕಾಯಿದೆ: ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ವಾದಕ್ಕೆ ಅರ್ಜಿದಾರರ ಪ್ರತಿಕ್ರಿಯೆ ಏನು?

ಇಂದು ಮಧ್ಯಾಹ್ನ 2 ಗಂಟೆಗೆ ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಹಾಗೂ ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.

Bar & Bench

ವಕ್ಫ್ (ತಿದ್ದುಪಡಿ) ಕಾಯಿದೆ- 2025 ಅನ್ನು ಸಮರ್ಥಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರತಿ ಅಫಿಡವಿಟ್‌ ಸಲ್ಲಿಸಿದ ಬಳಿಕ ಕಾಯಿದೆ ಪ್ರಶ್ನಿಸಿದ್ದ ಅರ್ಜಿದಾರರು ಅದಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ಮರು ಅಫಿಡವಿಟ್‌ ಸಲ್ಲಿಸಿದ್ದಾರೆ.

ಕಾಯಿದೆಯನ್ನು ಸಂಪೂರ್ಣವಾಗಿ ಜಾರಿಗೆ ತಂದರೆ ಮುಸ್ಲಿಂ ಸಮುದಾಯದ ಹಕ್ಕು ಹೇಗೆ ಉಲ್ಲಂಘನೆಯಾಗುತ್ತದೆ ಎಂಬುದನ್ನು ಅರ್ಜಿದಾರರು ತಮ್ಮ ಪ್ರತ್ಯುತ್ತರ ವಾದಗಳಲ್ಲಿ ಎತ್ತಿ ತೋರಿಸಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅಮಾನತುಲ್ಲಾ ಖಾನ್

ಸರ್ಕಾರ ಧಾರ್ಮಿಕ ಪಂಗಡದ ಸ್ವಂತ ಆಸ್ತಿ ನಿರ್ವಹಿಸುವ ಹಕ್ಕನ್ನು ನಿಯಂತ್ರಿಸಬಹುದಾರೂ ಅದು ಅದರ ಆಸ್ತಿಗಳ ಆಡಳಿತವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ.

ಡಿಎಂಕೆ

ತಿದ್ದುಪಡಿ ಕಾಯಿದೆಯ ಮೂಲಕ ಹೊಸದಾಗಿ ಸೇರಿಸಲಾದ ಸೆಕ್ಷನ್ 3ಬಿ(2) ವಕ್ಫ್ ಸೃಜನೆಯ ವಿಧಾನ, ದಿನಾಂಕ,  ಅದರ ಹೆಸರು ಹಾಗೂ ವಿಳಾಸ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸುತ್ತದೆ. ಆದರೆ, ಹಾಗೆ ಮಾಡುವ ಮೂಲಕ ಅಂತಹ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವುದು ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಅಸಾಧ್ಯವಾದ ಹೊರೆ ಹೇರುತ್ತದೆ.

ವಕ್ಫ್ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಬಡವರು ಮತ್ತು ನಿರ್ಗತಿಕರಿಗೆ ನೆರವು ನೀಡುವಂತಹ ದತ್ತಿ ಉದ್ದೇಶಗಳನ್ನು ಒಳಗೊಂಡಿರುವುದರಿಂದ ವಕ್ಫ್ ಹಿಂದೂ ದತ್ತಿಗಳಿಗಿಂತ ಭಿನ್ನವಾಗಿದೆ ಎಂಬ ಸರ್ಕಾರದ ವಾದ ಸಂಪೂರ್ಣ ತಪ್ಪು.

ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಸಿಪಿಆರ್‌)

ಇಸ್ಲಾಮಿಕ್ ಧಾರ್ಮಿಕ ದತ್ತಿಗಳನ್ನು ನಿರ್ವಹಿಸಲು ಪ್ರತ್ಯೇಕವಾಗಿ ರಚಿಸಲಾದ ಸಂಸ್ಥೆಗಳ ಶಾಸನಬದ್ಧ ಸಂಯೋಜನೆಯಲ್ಲಿ ಮುಸ್ಲಿಮೇತರ ಸದಸ್ಯರನ್ನು ಸೇರಿಸುವುದು ಹಿಂದೆಂದೂ ನಡೆದಿಲ್ಲ ಮತ್ತು ಅದು ನ್ಯಾಯಸಮ್ಮತವಲ್ಲ.

ಇದು ಧಾರ್ಮಿಕ ವ್ಯವಹಾರಗಳಲ್ಲಿ, ವಿಶೇಷವಾಗಿ ಧಾರ್ಮಿಕ ಆಚರಣೆಗಳಿಗೆ ನಿಕಟವಾಗಿ ಸಂಬಂಧಿಸಿದ ಆಡಳಿತಾತ್ಮಕ ವಿಷಯಗಳಲ್ಲಿ ಬಾಹ್ಯ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ.  

ಇಂದು (05 ಮೇ 2025- ಸೋಮವಾರ) ಮಧ್ಯಾಹ್ನ 2 ಗಂಟೆಗೆ ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿವಿ ಸಂಜಯ್ ಕುಮಾರ್ ಹಾಗೂ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.