<div class="paragraphs"><p>Justice Shekhar Saraf, Harish Salve and Calcutta HC</p></div>

Justice Shekhar Saraf, Harish Salve and Calcutta HC

 
ಸುದ್ದಿಗಳು

ನಾವು ಮಾರಾಟದ ಸರಕಲ್ಲ: ತಮ್ಮ ಪರ ತೀರ್ಪು ನೀಡುವಂತೆ ಕೋರಿದ್ದವರ ಬಗ್ಗೆ ನ್ಯಾ. ಸರಾಫ್ ಅಸಮಾಧಾನ; ವಿಚಾರಣೆಗೆ ನಕಾರ

Bar & Bench

ತಮ್ಮ ಪರವಾಗಿ ತೀರ್ಪು ನೀಡುವಂತೆ ಕಕ್ಷಿದಾರರೊಬ್ಬರ ಕಡೆಯ ವಕೀಲರು ತಮ್ಮನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ತಾವು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವ ವಿಚಾರವನ್ನು ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್ ಸರಾಫ್ ಅವರು ಶುಕ್ರವಾರ ಮುಕ್ತ ನ್ಯಾಯಾಲಯದಲ್ಲಿ ಬಹಿರಂಗಪಡಿಸಿದರು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರನ್ನು ಉದ್ದೇಶಿಸಿ “ನಿಮ್ಮ ವಾದ ಕೇಳುವುದು ನನ್ನ ಅದೃಷ್ಟವಾಗಿತ್ತು…. ಆದರೆ, ನಿಮ್ಮ ಕಡೆಯಿಂದ ಯಾರೋ ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಅನ್ನಿಸುತ್ತದೆ. ಏಕೆಂದರೆ ನನ್ನನ್ನು ಭೇಟಿಯಾದ ವ್ಯಕ್ತಿ ʼಪ್ರಕರಣದಲ್ಲಿ ಸಾಳ್ವೆ ವಾದ ಮಂಡಿಸಲಿದ್ದಾರೆʼ ಎಂದರು" ಎಂಬುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.

ಯಾರೋ ಒಬ್ಬರು ನಿಮ್ಮ ಚೇಂಬರ್‌ಗೆ ಬಂದು ನಿಮ್ಮನ್ನು ಸಂಪರ್ಕಿಸಬಹುದು ಎಂಬುದು ಅತ್ಯಂತ ದುರದೃಷ್ಟಕರ. ಈ ನ್ಯಾಯಾಲಯದ ನ್ಯಾಯಮೂರ್ತಿಗಳು ಅಥವಾ ದೇಶದ ನ್ಯಾಯಾಧೀಶರ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಇದು. ಆ ಸಮಯದಲ್ಲಿ ನಾನು ತುಂಬಾ ಆಘಾತಕ್ಕೊಳಗಾಗಿದ್ದೆ, ನಾನು ಏನನ್ನೂ ಹೇಳದೆ ಸುಮ್ಮನಾಗಿ ಅದನ್ನು ಅಲ್ಲಿಗೇ ಬಿಟ್ಟೆ. ಅವರನ್ನು ನಂತ ಹಿಡಿದುಹಾಕಬಹುದಿತ್ತು. ನಂತರದ ಅನೇಕ ಸಂದರ್ಭಗಳಲ್ಲಿ ಆತ ನನ್ನನ್ನು ಸಂಪರ್ಕಿಸಲು ಯತ್ನಿಸಿದರು, ಆದರೆ ಭೇಟಿಯಾಗದೇ ಇರಲು ನಾನು ನಿರ್ಧರಿಸಿದೆ ಮತ್ತು ಆತ ಭೇಟಿಯಾಗಲು ಬಯಸಿದರೂ ಅವರಿಂದ ದೂರ ಉಳಿದೆ ಎಂದು ಅವರು ವಿವರಿಸಿದರು.

ಯಾರೋ ಒಬ್ಬರು ಸೀದಾ ನಮ್ಮ ಚೇಂಬರ್‌ಗೆ ಬಂದು, ನಮ್ಮನ್ನು ಸಂಪರ್ಕಿಸಬಹುದು ಎಂಬುದು ಅತ್ಯಂತ ದುರದೃಷ್ಟಕರ ಸಂಗತಿ. ಈ ನ್ಯಾಯಾಲಯದ ನ್ಯಾಯಮೂರ್ತಿಗಳು ಅಥವಾ ದೇಶದ ನ್ಯಾಯಾಧೀಶರ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಇದು.
-ನ್ಯಾ. ಶೇಖರ್ ಸರಾಫ್

ತಮ್ಮನ್ನು ಸಂಪರ್ಕಿಸಿದ ವ್ಯಕ್ತಿ ವಕೀಲ ಎಂಬ ಮಾಹಿತಿ ನೀಡಿದ ನ್ಯಾ,. ಸರಾಫ್‌ "ನಾವು ಮಾರಾಟ ಮಾಡಬಹುದಾದ ಸರಕುಗಳಲ್ಲ. ವಕೀಲರು ಬಂದು ನಮ್ಮನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದರೆ, ನಮಗೆ ತುಂಬಾ ಕಷ್ಟವಾಗುತ್ತದೆ ... ಇದು ತುಂಬಾ ದುರದೃಷ್ಟಕರ" ಎಂದು ಎಚ್ಚರಿಸಿದರು.

ಘಟನೆಗೆ ವಿಷಾದ ವ್ಯಕ್ತಪಡಿಸಿದ ಸಾಳ್ವೆ “"ಇದು ಅಸಹ್ಯಕರ. ನಾನು ಈ ರೀತಿಯ ದೂರು ಕೇಳುತ್ತಿರುವುದು ಇದೇ ಮೊದಲಲ್ಲ. ತಾವು ಈ ಪ್ರಕರಣವನ್ನು ಆಲಿಸಬಾರದು" ಎಂದು ಮನವಿ ಮಾಡಿದರು.

ಆಗ ನ್ಯಾಯಮೂರ್ತಿಗಳು "ನೋಡಿ, ನಿಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬೌದ್ಧಿಕ ಅಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರವನ್ನು ಖಾಯಂ ಮಾಡಲು ಬಳಸಲಾಗುತ್ತದೆ ಎಂಬುದು ಕೆಟ್ಟ ಸಂಗತಿ. ಭಾರತೀಯ ವಕೀಲ ವರ್ಗದ ಹಿರಿಯ ಸದಸ್ಯನ (ಹರೀಶ್‌ ಸಾಳ್ವೆ) ಹೆಸರನ್ನು ಬಳಸುವ ಮೂಲಕ ಆದೇಶವನ್ನು ತಳ್ಳಿಹಾಕಲು ಯತ್ನಿಸಲಾಗಿದೆ" ಎಂದರು.

“ನಿಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬೌದ್ಧಿಕ ಅಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರವನ್ನು ಖಾಯಂ ಮಾಡಲು ಬಳಸಲಾಗುತ್ತದೆ ಎಂಬುದು ಕೆಟ್ಟ ಸಂಗತಿ.
-ನ್ಯಾ. ಸರಾಫ್

ತಮ್ಮನ್ನು ಭೇಟಿಯಾದವರನ್ನು ಸಿಲುಕಿಸಲು ಯತ್ನಿಸಬಹುದಾಗಿತ್ತಾದರೂ ಅವರನ್ನು ಗೊಂದಲಕ್ಕೆ ಸಿಲುಕಿಸುವುದು ತಮಗೆ ಇಷ್ಟವಿರಲಿಲ್ಲ ಎಂದ ನ್ಯಾಯಮೂರ್ತಿಗಳು ಆ ವ್ಯಕ್ತಿ ಯಾರು ಎಂಬುದನ್ನು ಖಾಸಗಿಯಾಗಿ ತಿಳಿಸುವುದಾಗಿ ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೊಬ್ಬ ವಕೀಲ ಧ್ರುಬ ಘೋಷ್‌ ಅವರನ್ನುದ್ದೇಶಿಸಿ ಹೇಳಿದರು.

ಪ್ರಕರಣದಿಂದ ಹಿಂದೆ ಸರಿದ ನಂತರ, ನ್ಯಾಯಮೂರ್ತಿ ಸರಾಫ್ ಅವರು ಸಾಳ್ವೆ ಅವರಿಗೆ (ಸನ್ನಿವೇಶವನ್ನು ತಿಳಿಯಾಗಿಸುವ ಧಾಟಿಯಲ್ಲಿ) “ನನಗೆ ಭಾರತೀಯ ವಕೀಲ ವರ್ಗದ ಹಿರಿಯ ಸದಸ್ಯರ (ಹರೀಶ್‌ ಸಾಳ್ವೆ) ವಾದವನ್ನು ಆಲಿಸುವ ಮತ್ತೊಂದು ಅವಕಾಶ ಸಿಗುತ್ತದೆ ಎಂದು ಭಾವಿಸುತ್ತೇನೆ. ನೀವು ಮತ್ತೊಮ್ಮೆ ನನ್ನ ಮುಂದೆ ಕಾಣಿಸಿಕೊಳ್ಳಲು ಅವಕಾಶವನ್ನು ಹುಡುಕಬೇಕು!" ಎಂದರು

ತಾವು ಕಾನೂನು ವಿದ್ಯಾರ್ಥಿಯಾಗಿದ್ದಾಗ 1992- 93ರಲ್ಲಿ ಸಾಳ್ವೆ ಅವರು ಪ್ರಕರಣವೊಂದರಲ್ಲಿ ಹೇಗೆ ವಾದಿಸಿದ್ದರು ಎಂಬುದನ್ನು ನ್ಯಾಯಮೂರ್ತಿಗಳು ನೆನೆದರು. “ಸಾಲಿಸಿಟರ್ ಜನರಲ್ ಆಗಿದ್ದ ದೀಪಂಕರ್ ಗುಪ್ತಾ ಅವರ ಬಳಿ ನಾನು ಇಂಟರ್ನಿಯಾಗಿದ್ದೆ. ಆಗ ನೀವು ವಾದ ಮಂಡಿಸುವುದನ್ನು ಕಂಡಿದ್ದೆ” ಎಂದರು.