ಸುದ್ದಿಗಳು

ಪ. ಬಂಗಾಳ ಚುನಾವಣೋತ್ತರ ಹಿಂಸಾಚಾರ: ಸಿಬಿಐ ಬಳಿ ಪುರಾವೆಗಳಿಲ್ಲ ಎಂಬ ಪತ್ರಿಕಾ ವರದಿ ಹಿಂಪಡೆಯುವಂತೆ ಎಎಸ್‌ಜಿ ಪತ್ರ

Bar & Bench

ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ವೇಳೆ ಹೂಡಲಾದ 21 ಅತ್ಯಾಚಾರ ಮತ್ತು ಅತ್ಯಾಚಾರದ ಯತ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ಬರೆಯಲಾಗಿದ್ದ ಲೇಖನ ಹಿಂಪಡೆಯುವಂತೆ ಕಲ್ಕತ್ತಾ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಯೆಜ್ಡೆಝಾರ್ದ್‌ ಜಹಾಂಗೀರ್ ದಸ್ತೂರ್ ಅವರು ಟೈಮ್ಸ್‌ ಆಫ್‌ ಇಂಡಿಯಾ ದಿನಪತ್ರಿಕೆಗೆ ಪತ್ರ ಬರೆದಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ 21 ಅತ್ಯಾಚಾರ ಪ್ರಕರಣಗಳಲ್ಲಿ ಸಿಬಿಐಗೆ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಸಿಬಿಐ ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದೆ ಎಂಬ ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಮುದ್ರಣ ಮತ್ತು ವೆಬ್‌ ಪ್ರತಿಯನ್ನು ಎಎಸ್‌ಜಿ ದಸ್ತೂರ್‌ ಉಲ್ಲೇಖಿಸಿದ್ದಾರೆ.

“ದುರದೃಷ್ಟವಶಾತ್‌ ಸಿಬಿಐ ಪರವಾಗಿ ಉಲ್ಲೇಖಿಸಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ್ರಕಟವಾದ ವರದಿಗಳಲ್ಲಿ ಸತ್ಯದ ಲವಲೇಶವೂ ಇಲ್ಲ. (ಟೈಮ್ಸ್‌ ಆಫ್‌ ಇಂಡಿಯಾದ) ಮೇಲಿನ ಎರಡು ಲೇಖನಗಳಲ್ಲಿ ವರದಿಯಾಗಿರುವ ಯಾವುದೇ ಹೇಳಿಕೆಗಳನ್ನು ನಿನ್ನೆ ನಡೆದ ವಿಚಾರಣೆ ವೇಳೆ ಸಿಬಿಐ ಪರವಾಗಿ ಮಾಡಿಲ್ಲ. ನಿಮ್ಮ (ಪತ್ರಿಕೆಯ) ವರದಿಯಲ್ಲಿ ಉಲ್ಲೇಖಿಸಿರುವ ಮುಖ್ಯಾಂಶಗಳು, ವರದಿ ಹಾಗೂ ಅಂಕಿಅಂಶಗಳು ಸಂಪೂರ್ಣವಾಗಿ ಸುಳ್ಳು” ಎಂದಿರುವ ಅವರು ಲೇಖನಗಳನ್ನು ಹಿಂತೆಗೆದುಕೊಂಡಿರುವುದಾಗಿ ಪ್ರಕಟಿಸಲು ಮತ್ತು ಕ್ಷಮೆಯಾಚಿಸಲು ಒತ್ತಾಯಿಸಿದ್ದಾರೆ. ಇಂತಹ ಪ್ರತಿಷ್ಠಿತ ಪತ್ರಿಕೆಯೊಂದು ಸೂಕ್ಷ್ಮ ವಿಚಾರದಲ್ಲಿ ಈ ರೀತಿಯ ಸುಳ್ಳು ವರದಿ ಪ್ರಕಟಿಸಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇತ್ತ ವರದಿಯನ್ನು ನಿರಾಕರಿಸಿ ಸಿಬಿಐ ಕೂಡ ಪತ್ರಿಕಾ ಹೇಳಿಕೆ ನೀಡಿದೆ. ದೂರು ಸ್ವೀಕಾರ, ತನಿಖೆಯ ಹಂತ ಇತ್ಯಾದಿ ವಿವರ ನೀಡಿರುವ ಅದು ಮಾಧ್ಯಮದಲ್ಲಿ ಪ್ರಕಟವಾದ ವರದಿ ವಾಸ್ತವಾಂಶಗಳನ್ನು ತಪ್ಪಾಗಿ ನಿರೂಪಿಸುತ್ತದೆ. ಅದು ಸ್ಪಷ್ಟವಾಗಿ ಕುಚೇಷ್ಟೆಯಿಂದ ಕೂಡಿದ್ದು, ಸಂಪೂರ್ಣ ದಿಕ್ಕು ತಪ್ಪಿಸುವ ಸುಳ್ಳು ಮಾಹಿತಿಯಾಗಿದೆ ಎಂದು ಸಿಬಿಐ ಹೇಳಿದೆ.