Supreme Court on FIR 
ಸುದ್ದಿಗಳು

'ಎರಡನೇ ಎಫ್ಐಆರ್ ಯಾವಾಗ ದಾಖಲಿಸಬಹುದು?' ಇಲ್ಲಿವೆ ಸುಪ್ರೀಂ ಕೋರ್ಟ್‌ ರೂಪಿಸಿರುವ ಐದು ತತ್ವಗಳು

ರಾಜಸ್ಥಾನದ ಜೈವಿಕ ಇಂಧನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಯೋಜನಾ ನಿರ್ದೇಶಕರು ಲಂಚ ಕೇಳಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಒಂದೇ ಘಟನೆ ಅಥವಾ ಅದೇ ಸನ್ನಿವೇಶಕ್ಕೆ ಎರಡನೇ ಬಾರಿಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಅನುಮತಿ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಕೆಲ ತತ್ವಗಳನ್ನು ರೂಪಿಸಿದೆ.

ಎರಡನೇ ಎಫ್‌ಐಆರ್ ದಾಖಲಿಸುವ ಸಂದರ್ಭದಲ್ಲಿ ಪಾಲಿಸಬೇಕಾದ ಐದು ಷರತ್ತುಗಳನ್ನು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ನಿಗದಿಪಡಿಸಿತು.

  • ಪ್ರತಿ-ದೂರು ಆಗಿದ್ದಾಗ ಅಥವಾ ಹಿಂದಿನ ಎಫ್‌ಐಆರ್‌ನಲ್ಲಿ ಈಗಾಗಲೇ ದಾಖಲಾಗಿರುವ ಸಂಗತಿಗಳಿಗೆ ವ್ಯತಿರಿಕ್ತ ಸಂಗತಿಗಳು ಕಂಡುಬಂದಾಗ ಎರಡನೇ ಎಫ್‌ಐಆರ್ ದಾಖಲಿಸಬಹುದು;

  • ಒಂದೇ ರೀತಿಯ ಸನ್ನಿವೇಶಗಳಿಂದ ಉದ್ಭವಿಸಬಹುದಾದರೂ ಎರಡು ಎಫ್‌ಐಆರ್‌ಗಳ ವ್ಯಾಪ್ತಿ ಭಿನ್ನವಾಗಿದ್ದಾಗ;

  • ತನಿಖೆ ಮತ್ತು ಅಥವಾ ಇತರ ಮಾರ್ಗಗಳು ಹಿಂದಿನ ಎಫ್‌ಐಆರ್ ಅಥವಾ ಸಂಗತಿಗಳನ್ನು ದೊಡ್ಡ ಪಿತೂರಿಯ ಭಾಗವೆಂದು ಬಹಿರಂಗಪಡಿಸಿದಾಗ.

  • ಘಟನೆಗೆ ಸಂಬಂಧಿಸಿದ ವ್ಯಕ್ತಿಗಳು ಇಲ್ಲಿಯವರೆಗೆ ತಿಳಿದಿಲ್ಲದ ಸಂಗತಿಗಳು ಅಥವಾ ಸಂದರ್ಭಗಳನ್ನು ಬೆಳಕಿಗೆ ತಂದಾಗ.

  • ಘಟನೆ ಪ್ರತ್ಯೇಕವಾಗಿದ್ದರೆ; ಅಪರಾಧಗಳು ಹೋಲಲಿ ಅಥವಾ ಭಿನ್ನವಾಗಿರಲಿ ಅಂತಹ ಸಂದರ್ಭಗಳಲ್ಲಿ.

ರಾಜಸ್ಥಾನದ ಜೈವಿಕ ಇಂಧನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಯೋಜನಾ ನಿರ್ದೇಶಕ ಸುರೇಂದ್ರ ಸಿಂಗ್ ರಾಥೋಡ್ (ಪ್ರತಿವಾದಿ) ಬಯೋ-ಡೀಸೆಲ್ ಮಾರಾಟಕ್ಕೆ ಪ್ರತಿ ಲೀಟರ್‌ಗೆ ₹2 ಅಂದರೆ, ತಿಂಗಳಿಗೆ ₹15 ಲಕ್ಷ ಮತ್ತು ದೂರುದಾರರ ಪರವಾನಗಿ ನವೀಕರಣಕ್ಕಾಗಿ ₹5 ಲಕ್ಷ ಲಂಚ ಕೇಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

ಎರಡನೇ ಎಫ್ಐಆರ್ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ರಾಜಸ್ಥಾನ ಹೈಕೋರ್ಟ್ ನೀಡಿದ್ದ ಆದೇಶವನ್ನು ಇಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ “ಎರಡನೇ ಎಫ್ಐಆರ್ ಸಂಬಂಧಿತ ಇಲಾಖೆಯಲ್ಲಿನ ವ್ಯಾಪಕ ಭ್ರಷ್ಟಾಚಾರದ ವಿಸ್ತೃತ ಪ್ರಕರಣಕ್ಕೆ ಸಂಬಂಧಿಸಿದೆ.  ಆದ್ದರಿಂದ, ಹಿಂದಿನ ಎಫ್ಐಆರ್‌ಗಿಂತಲೂ ಎರಡನೇ ಎಫ್‌ಐಆರ್‌ನ ವ್ಯಾಪ್ತಿ ವಿಶಾಲವಾಗಿದೆ” ಎಂಬ ಆಧಾರದಲ್ಲಿ ಮೇಲ್ಮನವಿಯನ್ನು ಪುರಸ್ಕರಿಸಿತು.  

ಎರಡನೇ ಎಫ್ಐಆರ್ ರದ್ದುಗೊಳಿಸುವುದರಿಂದ ಭ್ರಷ್ಟಾಚಾರದ ತನಿಖೆ ಆರಂಭದಲ್ಲೇ ನಿಂತುಹೋಗುತ್ತದೆ. ಇದು ಸಮಾಜದ ಹಿತಾಸಕ್ತಿಗೆ ವಿರುದ್ಧ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.