ಸಿಎಸ್‌ಆರ್‌ ನಿಧಿ ಮೂಲಕ ದೇಣಿಗೆ ನೀಡದ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಬಾಂಬೆ ಹೈಕೋರ್ಟ್‌

ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಗೆ ಅಗತ್ಯವಾದ ಔಷಧ ಉತ್ಪಾದನೆಗೆ ತುರ್ತು ಕ್ರಮಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
Nagpur Bench
Nagpur Bench

ಕೋವಿಡ್‌ ನಿರ್ವಹಣೆಗೆ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿಯಡಿ ನೆರವು ನೀಡಲು ಮುಂದಾಗದ ಕಂಪೆನಿಗಳ ವಿರುದ್ಧ ಶಾಸನಬದ್ಧ ನಿಬಂಧನೆಗಳ ಅಡಿ ಕ್ರಮಕೈಗೊಳ್ಳುವಂತೆ ಸರ್ಕಾರಿ ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಆದೇಶಿಸಿದೆ (ನ್ಯಾಯಾಲಯ ತನ್ನದೇ ನಿಲುವಳಿ ವರ್ಸಸ್‌ ಭಾರತ ಸರ್ಕಾರ).

ನಾಗಪುರದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಬಿ ಶುಕ್ರೆ ಮತ್ತು ಎ ಜಿ ಘರೋಟೆ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಕಂಪೆನಿಗಳು ಸಿಎಸ್‌ಆರ್‌ ನಿಧಿಯಡಿ ಕೋವಿಡ್‌ ನಿರ್ವವಣೆಗೆ ದೇಣಿಗೆ ನೀಡಲು ಒಲವು ತೋರುತ್ತಿಲ್ಲ ಎಂದು ವಿಭಾಗೀಯ ಆಯುಕ್ತರು ಪೀಠದ ಗಮನಕ್ಕೆ ತಂದರು. ಆಗ ನ್ಯಾಯಾಲಯವು ದೇಣಿಗೆ ನೀಡಲು ಒಲವು ತೋರದ ಮತ್ತು ವಿಫಲವಾಗುವ ಸಂಸ್ಥೆಗಳ ವಿರುದ್ಧ ಕಂಪೆನಿಗಳ ಕಾಯಿದೆ 2013 ರ ನಿಬಂಧನೆಗಳನ್ನು ಉಲ್ಲೇಖಿಸಿ, ಇದರ ಅಡಿ ಶಾಸನಬದ್ಧ ನಿಬಂಧನೆಗಳ ಪ್ರಕಾರ ಕ್ರಮಕೈಗೊಳ್ಳುವಂತೆ ನಾಗಪುರ, ಅಮರಾವತಿಯ ವಿಭಾಗೀಯ ಆಯುಕ್ತರು ಮತ್ತು ಇತರೆ ಜಿಲ್ಲಾ ದಂಡಾಧಿಕಾರಿಗಳಿಗೆ ಸೂಚಿಸಿತು.

ವಾಸ್ತವಿಕ ಅಂಶಗಳನ್ನು ಪರಿಗಣಿಸಿ ಇದಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯ ಒಳಗೆ ವಿಸ್ತೃತ ಆದೇಶ ಹೊರಡಿಸುವ ಅಗತ್ಯಬಿದ್ದರೆ ಅದನ್ನು ಮಾಡುವುದಾಗಿ ಪೀಠ ಹೇಳಿದೆ.

Also Read
ನಾಗಪುರದಲ್ಲಿ ಆಮ್ಲಜನಕ, ರೆಮ್‌ಡಿಸಿವಿರ್‌ ಪೂರೈಕೆಗೆ ಆದೇಶಿಸಿದ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ

ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಗೆ ಅಗತ್ಯವಾದ ಔಷಧ ಕೊರತೆಯಿದೆ ಎಂಬುದನ್ನು ಪರಿಗಣಿಸಿದ ನ್ಯಾಯಾಲಯವು ಔಷಧ ಉತ್ಪಾದನೆಗೆ ತುರ್ತು ಕ್ರಮಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಸೋಂಕು (ಮುಕೊರ್ಮೈಕೋಸಿಸ್‌) ಎಂದು ಪರಿಗಣಿತವಾಗಿರುವ ಬ್ಲ್ಯಾಕ್‌ ಫಂಗಸ್‌ ಅನ್ನು ನಿಯಂತ್ರಿಸುವ ಸಂಬಂಧ ಕ್ರಮಕೈಗೊಳ್ಳದಿದ್ದರೆ ಭಾರತದಲ್ಲಿ ಇದು ಗಂಭೀರವಾದ ಸಾಂಕ್ರಾಮಿಕತೆಯ ರೂಪ ಪಡೆಯಬಹುದು ಎಂದು ಪೀಠ ಹೇಳಿದೆ. ಇದು ಯುದ್ಧಕಾಲದಂತಹ ಪರಿಸ್ಥಿತಿ ಎಂದಿರುವ ನ್ಯಾಯಾಲಯವು ಈ ಅಹವಾಲುಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯೆಸಬಹುದು ಎಂಬ ಭರವಸೆ ವ್ಯಕ್ತಪಡಿಸಿತು.

Related Stories

No stories found.
Kannada Bar & Bench
kannada.barandbench.com