
ರಾಜ್ಯದಲ್ಲಿ ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ವಕೀಲರ ಚಿಹ್ನೆ ಲಗತ್ತಿಸಿದ್ದರೆ, ಅಂತಹ ವಾಹನಗಳ ಸಂಖ್ಯೆ ಮತ್ತು ಪೋಟೋವನ್ನು ಕಳುಹಿಸಿಕೊಡುವಂತೆ ಸಾರ್ವಜನಿಕರು ಹಾಗೂ ವಕೀಲರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ) ಮನವಿ ಮಾಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ವಕೀಲರ ಪರಿಷತ್ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಅವರು ರಾಜ್ಯದಲ್ಲಿ ವಕೀಲರಲ್ಲದವರು ಹಾಗೂ ವಾಣಿಜ್ಯ ವಾಹನಗಳಿಗೆ ವಕೀಲರ ಚಿಹ್ನೆ ಲಗತ್ತಿಕೊಂಡು, ತಾವು ವಕೀಲರು ಎಂದು ಸಾರ್ವಜನಿಕರಿಗೆ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಆ ಮೂಲಕ ವಕೀಲರ ಸಮುದಾಯದ ಹೆಸರು ದುರುಪಯೋಗ ಹಾಗೂ ವಕೀಲ ವೃತ್ತಿಗೆ ಅವಮಾನ ಮಾಡುತ್ತಿದ್ದಾರೆ. ಆದ್ದರಿಂದ ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ವಕೀಲರ ಚಿಹ್ನೆ ಅಳವಡಿಸಿಕೊಂಡಿದ್ದರೆ, ಅಂತಹ ವಾಹನಗಳ ಸಂಖ್ಯೆ/ಫೋಟೊವನ್ನು ಪರಿಷತ್ತಿನ ಅಧಿಕೃತ ಇ-ಮೇಲ್ Kar_barcouncil@yahoo.com ಗೆ ಕಳುಹಿಸಿಕೊಡಬೇಕು. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಮನವಿ ಮಾಡಿದ್ದಾರೆ.