ತಮ್ಮ ಮದುವೆಗೆ ಮಾನ್ಯತೆ ಕೋರಿ ಸಲಿಂಗ ದಂಪತಿಗಳು ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಕಳೆದ ವಾರ ತಿರಸ್ಕರಿಸಿದೆ.
ತಮ್ಮ ಮಗಳನ್ನು ಇನ್ನೊಬ್ಬ ಮಹಿಳೆ ಬಲವಂತ ಮತ್ತು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾಳೆ ಎಂದು ಆರೋಪಿಸಿ ಹಾಗೂ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ತಾಯಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಲೇವಾರಿ ಮಾಡಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಈ ತೀರ್ಪು ನೀಡಿದರು.
ನ್ಯಾಯಾಲಯ ಈ ಹಿಂದೆ ನೀಡಿದ್ದ ನಿರ್ದೇಶನದಂತೆ, ಹೆಚ್ಚುವರಿ ಸರ್ಕಾರಿ ವಕೀಲರು ಮಗಳು ಮತ್ತು ಅವಳನ್ನು ಬಂಧಿಸಿದ್ದಾರೆನ್ನಲಾದ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆಗ ಯುವತಿಯರು ತಾವು ವಯಸ್ಕರಾಗಿದ್ದು, ಪ್ರೀತಿಸುತ್ತಿದ್ದು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದೇವೆ. ಹೀಗಾಗಿ ತಮ್ಮ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿದರು.
ಆದರೆ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸರ್ಕಾರ ಪುರುಷ ಮತ್ತು ಮಹಿಳೆ ಇಲ್ಲದಿದ್ದರೆ ಭಾರತೀಯ ಸಂದರ್ಭದಲ್ಲಿ ವಿವಾಹವನ್ನು ಒಪ್ಪಲಾಗದು ಏಕೆಂದರೆ ಅಂತಹ ವಿವಾಹ ಭಾರತೀಯ ಕುಟುಂಬ ಕಲ್ಪನೆಯನ್ನು ಮೀರುತ್ತದೆ ಎಂದಿತು. ʼಭಾರತದಲ್ಲಿ ಮದುವೆ ವೇಳೆ ಹಿಂದೂ ಪುರುಷರು ಮತ್ತು ಮಹಿಳೆಯರು ಪರಸ್ಪರ ಸುಖ ದುಃಖಗಳಲ್ಲಿ ಭಾಗಿಯಾಗುವುದಾಗಿ ದೇವರು ಮತ್ತು ಅಗ್ನಿ ಸಾಕ್ಷಿಯಾಗಿ ಪ್ರಮಾಣ ಮಾಡುತ್ತಾರೆ”. ಇಂತಹ ಮದುವೆಗೆ ಅವಕಾಶ ನೀಡಿದರೆ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಅನೇಕ ಕಾನೂನುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅದು ಹೇಳಿತು.
ವಾದ ಪರಿಗಣಿಸಿದ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು. ಜೊತೆಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಹ ವಿಲೇವಾರಿ ಮಾಡಲಾಯಿತು.