ರಾಜಕೀಯ, ವೈಯಕ್ತಿಕ ನಂಬಿಕೆಗಳೇನೇ ಇರಲಿ, ವಕೀಲರಾದವರು ಸಂವಿಧಾನ ವಿರೋಧಿ ನೆಲೆಯಲ್ಲಿರಲು ಸಾಧ್ಯವಿಲ್ಲ: ನ್ಯಾ. ಮುರಳೀಧರ್

ದೆಹಲಿ ಹೈಕೋರ್ಟ್ ಮಹಿಳಾ ವಕೀಲರ ವೇದಿಕೆಯ ವರ್ಚುವಲ್ ಸಮಾವೇಶದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು, "ವಕೀಲರಾಗಿ, ನಿಮ್ಮ ನಿಲುವು ಸಾಂವಿಧಾನಿಕ ಮೌಲ್ಯಗಳು ಹೇಳುವ ವಿಷಯಕ್ಕೆ ವಿರುದ್ಧವಾದ ನೆಲೆಯಲ್ಲಿರಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿ ಎಸ್ ಮುರಳೀಧರ್
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿ ಎಸ್ ಮುರಳೀಧರ್

ವಕೀಲರ ರಾಜಕೀಯ ಮತ್ತು ವೈಯಕ್ತಿಕ ನಂಬಿಕೆಗಳು ಸಾಂವಿಧಾನಿಕ ಮೌಲ್ಯಗಳನ್ನು ಮಣಿಸಲು ಸಾಧ್ಯ ಇಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿ ಎಸ್ ಮುರಳೀಧರ್ ಅಭಿಪ್ರಾಯಪಟ್ಟರು.

ಗಾಂಧಿ ಜಯಂತಿ ಅಂಗವಾಗಿ ದೆಹಲಿ ಹೈಕೋರ್ಟ್ ಮಹಿಳಾ ವಕೀಲರ ವೇದಿಕೆ ಆಯೋಜಿಸಿದ್ದ ವರ್ಚುವಲ್ ಸಮಾವೇಶದಲ್ಲಿ ಅವರು ಮಾತನಾಡಿದರು.

ದಾಕ್ಷಾಯಣಿ ವೇಲಾಯುಧನ್, ನ್ಯಾ ಅಣ್ಣಾ ಚಾಂಡಿ, ನ್ಯಾ. ರುತ್ ಬೇಡರ್ ಗಿನ್ಸ್ಬರ್ಗ್, ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಯವರಂತಹ ಕಾನೂನು ಲೋಕದ ಧ್ರುವತಾರೆಗಳನ್ನು ಸ್ಮರಿಸಿದ ನ್ಯಾಯಮೂರ್ತಿ ಮುರಳೀಧರ್ ಅವರು ಹೀಗೆಂದರು:

Also Read
ಕೊರೊನಾ ಬಳಿಕವೂ ವರ್ಚುವಲ್ ಕೋರ್ಟುಗಳು ಉಳಿಯಲಿ ಎಂದ ಸಂಸದೀಯ ಸ್ಥಾಯಿ ಸಮಿತಿ

"ಸಂವಿಧಾನವನ್ನು ನೀವು ಅಪ್ಪಿಕೊಳ್ಳಬೇಕು. ಸಾಂವಿಧಾನಿಕ ಮೌಲ್ಯಗಳನ್ನು ನಿಮ್ಮ ವೈಯಕ್ತಿಕ ನೆಲೆಯಲ್ಲಿ ಅಳವಡಿಸಿಕೊಳ್ಳಬೇಕು. ನೀವು ವೈಯಕ್ತಿಕ ನೆಲೆಯಲ್ಲಿ ಒಂದು ನಡವಳಿಕೆ, ವೃತ್ತಿಪರವಾಗಿ ಮತ್ತೊಂದು ನಡವಳಿಕೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದು ತೋರ್ಪಡುತ್ತದೆ. ಅಂತಹ ಬೂಟಾಟಿಕೆಗಳು ನಿಮ್ಮ ನಿಲುವನ್ನು ದುರ್ಬಲಗೊಳಿಸುತ್ತವೆ. ಆ ದ್ವಂದ್ವದಲ್ಲಿ ನೀವು ಮುಂದುವರೆದರೆ ಆದರ್ಶಗಳನ್ನು ಪ್ರತಿನಿಧಿಸುವ ನೈತಿಕ ಅಧಿಕಾರ ಅಥವಾ ನ್ಯಾಯಸಮ್ಮತಿಯನ್ನು ಕಳೆದುಕೊಳ್ಳುತ್ತೀರಿ" ಎಂದು ತಿಳಿಸಿದರು.

"ನಿಮ್ಮ ರಾಜಕೀಯ ನಂಬಿಕೆಗಳು ಏನೇ ಇರಲಿ, ನಿಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆಗಳು ಏನೇ ಇರಲಿ, ವಕೀಲರಾಗಿ ನೀವು ಸಾಂವಿಧಾನಿಕ ಮೌಲ್ಯಗಳು ಮಾತನಾಡುವ ವಿಷಯಕ್ಕೆ ವಿರುದ್ಧವಾದ ನೆಲೆಯಲ್ಲಿ ಇರಲು ಸಾಧ್ಯವಿಲ್ಲ.... ನೀವು ಹೋರಾಡುವ ಕಾರಣ ಏನೇ ಇರಲಿ, ಪ್ರತಿನಿಧಿಸುವ ಕಕ್ಷಿದಾರರು ಯಾರೇ ಇರಲಿ – ನಾವು ಒಪ್ಪಲೇಬೇಕಾದ ಮೂಲಭೂತ ಮತ್ತು ಕನಿಷ್ಠ ನಿಲುವೊಂದು ಇದೆ. ಅದೆಂದರೆ ಸಾಂವಿಧಾನಿಕ ಮೌಲ್ಯಗಳ ಸ್ವೀಕಾರ. "
ನ್ಯಾ. ಎಸ್ ಮುರಳೀಧರ್
Also Read
ವರ್ಚುವಲ್ ಕಲಾಪದಲ್ಲಿ ಹೊಣಗೇಡಿತನ ಪ್ರದರ್ಶಿಸಬೇಡಿ; ಕೆಲ ವಕೀಲರ ಅಸಭ್ಯ ನಡತೆಗೆ ಕೆಎಸ್‌ಬಿಸಿ ಕೆಂಡಾಮಂಡಲ

ಶಾಶ್ವತ ನ್ಯಾಯಿಕ ಸುಧಾರಣೆ ಎಂಬುದು ಒಳಗಿನಿಂದಲೇ ಆಗಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

"ನೀವು ಸಿನಿಕರಾಗಲು ಸಾಧ್ಯವಿಲ್ಲ, ನ್ಯಾಯಕ್ಕಾಗಿ ಹಲವಾರು ಜನ ಕಾಯುತ್ತಿದ್ದು ವ್ಯವಸ್ಥೆ ಕುಸಿದಿದೆ ಅಥವಾ ನಿಷ್ಪ್ರಯೋಜಕ ಎಂದು ನೀವು ಹೇಳಲಾಗದು. ನೀವು ಸೋಲೊಪ್ಪಲು ಸಾಧ್ಯವೇ ಇಲ್ಲ. ನೀವೇ ವ್ಯವಸ್ಥೆ. ನೀವು ಅದನ್ನು ನ್ಯಾಯಿಕ ನಿಯಮ ಸಂವಿಧಾನವನ್ನು ನಂಬುವಂತೆಯೇ ನಂಬಬೇಕು" ಎಂದು ಹೇಳಿದರು.

ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಮಾತನಾಡಿ, ‘ಕೆಲವು ಮಂದಿ ನ್ಯಾಯಾಧೀಶರಾಗಲೆಂದೇ ಹುಟ್ಟಿರುತ್ತಾರೆ ಏಕೆಂದರೆ ಅವರ ಹೃದಯಗಳು ಸೂಕ್ತ ಸ್ಥಳದಲ್ಲಿರುತ್ತವೆ" ಎಂದರು.

ವಕೀಲರಾದ ಮೃಣಾಲಿನಿ ಸೇನ್ ಮತ್ತು ಸೌಮ್ಯಾ ಟಂಡನ್ ಕಾರ್ಯಕ್ರಮ ನಿರೂಪಿಸಿದರು.

Related Stories

No stories found.
Kannada Bar & Bench
kannada.barandbench.com