

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಅವರ ಕುಟುಂಬ ಸದಸ್ಯರ ಅಕ್ರಮ ಭೂಮಿ ಖರೀದಿ ಆರೋಪ ಕುರಿತಂತೆ ಮಾನಹಾನಿಕರ ಹೇಳಿಕೆ ನೀಡಬಾರದು ಎಂದು ಗೌರವ್ ಗೊಗೊಯಿ, ಭೂಪೇಶ್ ಬಘೇಲ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಗುವಾಹಟಿಯ ಕಾಮರೂಪ್ (ಮೆಟ್ರೋ) ನ್ಯಾಯಾಲಯ ನಿರ್ಬಂಧ ವಿಧಿಸಿದೆ.
ಮೂವರು ಕಾಂಗ್ರೆಸ್ ನಾಯಕರು ಮತ್ತು ಎರಡು ಸ್ಥಳೀಯ ಪತ್ರಿಕೆಗಳ ವಿರುದ್ಧ ದಾಖಲಾಗಿದ್ದ ದಾವೆಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಧೀಶೆ (ಹಿರಿಯರ ವಿಭಾಗ) ನಯನ್ ಜ್ಯೋತಿ ಶರ್ಮಾ ಅವರು ಈ ಆದೇಶ ನೀಡಿದ್ದಾರೆ.
ಅರ್ಜಿದಾರರು ಕೋರಿರುವಂತೆ ತಾತ್ಕಾಲಿಕ ತಡೆ ಆದೇಶ ನೀಡದೆ ಹೋದರೆ ನ್ಯಾಯಕ್ಕೆ ಧಕ್ಕೆಯಾಗುತ್ತದೆ ಮತ್ತು ಅನೇಕ ಕಾನೂನು ಪ್ರಕ್ರಿಯೆಗಳು ತಲೆದೋರುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ತಾತ್ಕಾಲಿಕ ತಡೆ ಆದೇಶವನ್ನು ಕಾಯಂಗೊಳಿಸದಿರಲು ಕಾರಣ ಒದಗಿಸುವಂತೆ ಕಾಂಗ್ರೆಸ್ ನಾಯಕರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದ್ದು ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 9 ರಂದು ನಡೆಯಲಿದೆ.
ಅಸ್ಸಾಂ ಮುಖ್ಯಮಂತ್ರಿ ತಮ್ಮ ಪತ್ನಿ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಬಹಳಷ್ಟು ಭೂಮಿ ಖರೀದಿಸಿದ್ದಾರೆ ಎಂದುಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಈಚೆಗೆ ಆರೋಪಿಸಿದ್ದರು.
ಇಂತಹ ಹೇಳಿಕೆಗಳು ತೀವ್ರ ಮಾನಹಾನಿಕರವಾಗಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಜೊತೆಗೆ, ಸ್ವಾಭಾವಿಕ ನ್ಯಾಯತತ್ವ ಪಾಲಿಸದೆ ಪತ್ರಿಕೆಗಳು ವರದಿ ಪ್ರಕಟಿಸಿವೆ ಎಂದು ವಾದಿಸಲಾಯಿತು.
ಇತ್ತೀಚೆಗೆ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಡಿದ ಪೋಸ್ಟ್ ಪ್ರಕಾರ, ಪತ್ರಿಕಾಗೋಷ್ಠಿಯಲ್ಲಿ “ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ” ಆರೋಪಗಳನ್ನು ಮಾಡಿರುವ ಕಾರಣಕ್ಕೆ ಕಾಂಗ್ರೆಸ್ ನಾಯಕರು ₹500 ಕೋಟಿ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಶರ್ಮಾ ಬೇಡಿಕೆ ಇಟ್ಟಿದ್ದಾರೆ.