ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನ್ಯಾಯಾಲಯಗಳಿಗೆ ಸಲ್ಲಿಸುತ್ತಿರುವ ಕನಿಷ್ಠ ಶೇಕಡಾ 40ರಷ್ಟು ವ್ಯಾಜ್ಯಗಳು ನಿಷ್ಪ್ರಯೋಜಕ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ಸೇವಾ ಪ್ರಕರಣವನ್ನು ಪ್ರಸ್ತಾಪಿಸುವುದಕ್ಕಾಗಿ ವಕೀಲರೊಬ್ಬರು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠದೆದುರು ಹಾಜರಾದಾಗ ಈ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
“ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ 40ರಷ್ಟು ದಾವೆಗಳು ಕ್ಷುಲ್ಲಕವಾಗಿವೆ. ಒಬ್ಬರಿಗೆ ಮಾಸಿಕ 700 ರೂಪಾಯಿ ಬರದಂತೆ ತಡೆಹಿಡಿಯಲು ತೆರಿಗೆದಾರರ 7 ಲಕ್ಷ ರೂಪಾಯಿಯನ್ನು ದಾವೆಗಾಗಿ ಖರ್ಚು ಮಾಡಲಾಗುತ್ತದೆ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಆ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಕ್ಷಣವೇ ಪ್ರತಿಕ್ರಿಯಿಸಿ “ನಾವೀಗ ಮಿತವಾದಿಗಳಾಗಿದ್ದೇವೆ (ಹೆಚ್ಚು ಪ್ರಕರಣಗಳನ್ನು ದಾವೆ ಹೂಡುತ್ತಿಲ್ಲ ಎನ್ನುವ ಅರ್ಥದಲ್ಲಿ)” ಎಂದು ಹೇಳಿದರು. ಆಗ ನ್ಯಾಯಾಲಯ ʼನಾವು ಇದನ್ನು (ಅಭಿಪ್ರಾಯವನ್ನು) ಒಪ್ಪುವುದಿಲ್ಲʼ ಎಂದಿತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಇತ್ತೀಚೆಗೆ ಕಾನೂನು ವಿವಾದಗಳನ್ನು ಬಗೆಹರಿಸಲು ಮೊಕದ್ದಮೆ ಹೂಡುವುದನ್ನು ಆಶ್ರಯಿಸುವ ಬದಲು ಕೇಂದ್ರ ಸರ್ಕಾರ ದೊಡ್ಡಮಟ್ಟದಲ್ಲಿ ಮಧ್ಯಸ್ಥಿಕೆ ಅಳವಡಿಸಿಕೊಳ್ಳಬೇಕು” ಎಂದು ಹೇಳಿದ್ದರು.
ಮಧ್ಯಸ್ಥಿಕೆ ಎಂಬುದು ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದು, ವಿವಿಧ ಭಾಗೀದಾರರನ್ನು ಒಟ್ಟುಗೂಡಿಸುವುದು ಹಾಗೂ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ಪ್ರಕ್ರಿಯೆಯಾಗಿದೆ. 'ವ್ಯಾಜ್ಯ ಬೇಡ, ಮಧ್ಯಸ್ಥಿಕೆ ಇರಲಿʼ ಎಂಬುದು ಕೇಂದ್ರ ಸರ್ಕಾರದ ಧ್ಯೇಯವಾಗಲಿ ಎಂದು ಅವರು ಕರೆ ನೀಡಿದ್ದರು.