
ನ್ಯಾಯಾಲಯಗಳ ಡಿಜಿಟಲ್ ಬದಲಾವಣೆ ಮತ್ತದರ ಪ್ರಯೋಜನಗಳು ಇನ್ನೂ ಸಮಾಜದಂಚಿನಲ್ಲಿರುವ ಸಮುದಾಯಗಳನ್ನು ತಲುಪಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾ. ಸೂರ್ಯ ಕಾಂತ್ ವಿಷಾದ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ನ್ಯಾ. ಸೂರ್ಯ ಕಾಂತ್. ಮಾನವ್ ರಚನಾ ವಿವಿ ನವದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ ನ್ಯಾ. ಆರ್ಸಿ ಲಹೋಟಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಜಿಟಲ್ ಕಂದರ ಎಂಬುದು ಅಸಮಾನತೆಯ ಹೊಸ ಮುಖವಾಗಿದ್ದು ಗುಣಮಟ್ಟದ ಕಾನೂನು ನೆರವು ಸಮಾಜದಂಚಿನಲ್ಲಿರುವವರನ್ನು ತಲುಪಿಲ್ಲ ಎಂದು ಅವರು ಹೇಳಿದರು.
ನ್ಯಾ. ಸೂರ್ಯ ಕಾಂತ್ ಅವರ ಭಾಷಣದ ಪ್ರಮುಖಾಂಶಗಳು
ನ್ಯಾಯಾಲಯಗಳು ಆನ್ಲೈನ್ ಮೂಲಕ ಲಭ್ಯವಿದ್ದು ಕಾನೂನು ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದ್ದರೂ ಡಿಜಿಟಲ್ ಕಂದರ ಎಂಬುದು ಅಸಮಾನತೆಯ ಹೊಸ ಮುಖವಾಗಿದ್ದು ಗುಣಮಟ್ಟದ ಕಾನೂನು ನೆರವು ಸಮಾಜದಂಚಿನಲ್ಲಿರುವವರನ್ನು ತಲುಪಿಲ್ಲ.
ಇದು ತಾಂತ್ರಿಕ ಕಂದರವನ್ನು ಕಡಿಮೆ ಮಾಡುವುದಕ್ಕೆ ಸಂಬಂಧಿಸಿದ ವಿಚಾರವಾಗಿರದೆ ಜನರನ್ನು ಕಾನೂನಿನ ಸಮೀಪ ನ್ಯಾಯದ ಬಳಿಗೆ ತರಬೇಕಾದ ಸಂಗತಿಯಾಗಿದೆ.
ತಂತ್ರಜ್ಞಾನದಿಂದ ಸಾಧನಗಳು ಮಾತ್ರ ದೊರೆಯುವುದಿಲ್ಲ ಬದಲಿಗೆ ಸಮಗ್ರ ನ್ಯಾಯ ವ್ಯವಸ್ಥೆ ರೂಪಿಸಲು ಸಂಪೂರ್ಣ ಮಾದರಿ ನೀಡುತ್ತದೆ.
ತಂತ್ರಜ್ಞಾನ ಎಂಬುದು ಜನರು ಅದರಲ್ಲಿಯೂ ಸಮಾಜದಂಚಿನಲ್ಲಿರುವವರು ಮತ್ತು ಕಾನೂನಿನ ನಡುವಿನ ಕಂದರವನ್ನು ಹೆಚ್ಚಿಸಬಾರದು.
ಇದುವರೆಗೆ ವಿಳಂಬ ನ್ಯಾಯದಿಂದಾಗಿ ನ್ಯಾಯದ ನಿರಾಕರಣೆ ಉಂಟಾಗುತ್ತದೆ ಎಂಬ ಮಾತಿತ್ತು. ಆದರೆ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಪ್ರವೇಶ ದೊರೆಯದ ಕಾರಣಕ್ಕೆ ನ್ಯಾಯ ದೊರೆಯದೆ ಇರುವುದು ಕೆಟ್ಟ ಸ್ಥಿತಿಯಾಗಿದೆ ಏಕೆಂದರೆ ಇದು ಪರಕೀಯತೆಯನ್ನು ಸೃಷ್ಟಿಸುತ್ತದೆ.
ನ್ಯಾಯ ಎಂಬುದು ಮಾನವ ಕ್ರಿಯೆಯಾಗಿದ್ದು ಅದನ್ನು ಬ್ಯಾಂಡ್ವಿಡ್ತ್ನಿಂದ ಅಳೆಯಲಾಗದು ಎಂಬುದನ್ನು ನೆನಪಿನಲ್ಲಿಡಬೇಕು.
ಕಾನೂನು ನೆರವು ಇನ್ನೂ ಅನೇಕರಿಗೆ ಅರ್ಥವಾಗಿಲ್ಲ, ಡಿಜಿಟಲ್ ಪರಿಕರಗಳು ಇದನ್ನು ಪರಿಹರಿಸಿಲ್ಲ.
ವರ್ಚುವಲ್ ನ್ಯಾಯಾಲಯಗಳು ಮತ್ತು ನೈತಿಕತೆ ಆಧಾರಿತ ತಂತ್ರಜ್ಞಾನ ಕಂದರವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮಾತನಾಡಿದರು.