ಆದಿತ್ಯನಾಥ್‌ ಕುರಿತ ಚಿತ್ರ: ಯಾವುದೇ ಬದಲಾವಣೆ ಇಲ್ಲದೆ 'ಅಜಯ್' ಸಿನಿಮಾ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ

'ದಿ ಮಾಂಕ್ ಹೂ ಬಿಕೇಮ್‌ ಚೀಫ್ ಮಿನಿಸ್ಟರ್' ಪುಸ್ತಕದಿಂದ ಸ್ಫೂರ್ತಿ ಪಡೆದ ಈ ಚಿತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನ ಆಧರಿಸಿದೆ ಎಂದು ಹೇಳಲಾಗಿದೆ.
Ajey, Bombay High Court
Ajey, Bombay High Court
Published on

'ಅಜಯ್: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್ ಎ ಯೋಗಿ' ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡದೆ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ [ಸಾಮ್ರಾಟ್ ಸಿನಿಮ್ಯಾಟಿಕ್ಸ್ ಮತ್ತು ಸಿಬಿಎಫ್‌ಸಿ ನಡುವಣ ಪ್ರಕರಣ] .

'ದಿ ಮಾಂಕ್ ಹೂ ಬಿಕೇಮ್‌ ಎ ಚೀಫ್ ಮಿನಿಸ್ಟರ್' ಪುಸ್ತಕದಿಂದ ಸ್ಫೂರ್ತಿ ಪಡೆದ ಈ ಚಿತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನ ಆಧರಿಸಿದೆ ಎಂದು ಹೇಳಲಾಗಿದೆ.

Also Read
ಸೆನ್ಸಾರ್ ವಿವಾದ: ಯೋಗಿ ಆದಿತ್ಯನಾಥ್ ಜೀವನಾಧಾರಿತ ʼಅಜಯ್ʼ ಸಿನಿಮಾ ವೀಕ್ಷಿಸಲಿರುವ ಬಾಂಬೆ ಹೈಕೋರ್ಟ್

ಚಿತ್ರವನ್ನು ವೀಕ್ಷಿಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ಚಿತ್ರವನ್ನು ಮರು ಸಂಕಲನ ಮಾಡಬೇಕಾದಂತಹ ಯಾವುದೇ ಆಕ್ಷೇಪಾರ್ಹ ಅಂಶ ಇಲ್ಲ ಎಂದಿತು.

"ನಾವು ಸಿನಿಮಾವನ್ನು ಅದರ ಸನ್ನಿವೇಶದೊಂದಿಗೆ ನೋಡಿದ್ದೇವೆ. ಯಾವುದನ್ನೂ ಮರು ಸಂಕಲನ ಮಾಡುವ ಅಗತ್ಯವಿಲ್ಲ. ಆಕ್ಷೇಪ ಎತ್ತಿದ ಪ್ರತಿಯೊಂದು ದೃಶ್ಯವನ್ನೂ ಗಮನಿಸಿದ್ದೇವೆ. ಆಕ್ಷೇಪಾರ್ಹವಾದುದು ಏನೂ ಕಂಡುಬಂದಿಲ್ಲ” ಎಂದು ನ್ಯಾಯಾಲಯ ಹೇಳಿತು.

ಅಂತೆಯೇ ಚಿತ್ರದ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಹೊರಡಿಸಿದ್ದ ಆದೇಶಗಳನ್ನು ಅದು ರದ್ದುಗೊಳಿಸಿತು.

ಆಗಸ್ಟ್ 11ರಂದು ಸಿಬಿಎಫ್‌ಸಿ ʼಪರಿಶೀಲನಾ ಸಮಿತಿʼ 29 ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತಾದರೂ ನಿರ್ಮಾಪಕರು ಯಾವುದೇ ಬದಲಾವಣೆಗಳ ಪ್ರಸ್ತಾವನೆ ನೀಡದ ಹಿನ್ನೆಲೆಯಲ್ಲಿ ಹಾಗೂ ಪ್ರತಿಕ್ರಿಯಿಸದ ಕಾರಣ ಸಿಬಿಎಫ್‌ಸಿಯ ʼಪುನರ್ಪರಿಶೀಲನಾ ಸಮಿತಿʼ ತಾನೇ ಖುದ್ದು ಚಿತ್ರ ವೀಕ್ಷಿಸಲು ಮುಂದಾಗಿತ್ತು.

Also Read
ಸಿಎಂ ಯೋಗಿ ವಿರುದ್ಧದ ಆಕ್ಷೇಪಾರ್ಹ ಸಂದೇಶ ರವಾನೆ: ಅಧಿಕಾರಿ ಮರುನೇಮಕಕ್ಕೆ ಸೂಚಿಸಿದ ಅಲಾಹಾಬಾದ್ ಹೈಕೋರ್ಟ್

ಈ ಸಮಿತಿ ಪರಿಶೀಲನಾ ಸಮಿತಿ ಆಕ್ಷೇಪ ಎತ್ತಿದ್ದ 8 ದೃಶ್ಯಗಳನ್ನು ಉಳಿಸಿಕೊಂಡಿತ್ತು. ಆದರೆ ಆಗಸ್ಟ್ 17ರಂದು ಪ್ರಮಾಣಪತ್ರ ತಿರಸ್ಕರಿಸಿತ್ತು. ಇದಾದ ನಂತರ, ನ್ಯಾಯಾಲಯ ಆಗಸ್ಟ್ 22 ರಂದು ಚಿತ್ರ ವೀಕ್ಷಿಸಲು ನಿರ್ಧರಿಸಿತ್ತು. ಬಳಿಕ ಚಿತ್ರಕ್ಕೆ ಬದಲಾವಣೆ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರವಿ ಕದಮ್‌ ಅವರು, ಪ್ರಮಾಣಪತ್ರವನ್ನು ಪಡೆಯಲು ಪೂರ್ವ ಷರತ್ತಾಗಿ ಯೋಗಿ ಆದಿತ್ಯನಾಥ್‌ ಅವರಿಂದ ನಿರಾಕ್ಷೇಪಣಾ ಪತ್ರವನ್ನು ತರಬೇಕು ಎನ್ನುವ ಸಿಬಿಎಫ್‌ಸಿಯ ನಿಲುವು ಅದರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ವಾದಿಸಿದ್ದರು.

ಮುಂದುವರೆದು, "ಮಂಡಳಿಯು ನೈತಿಕ ರಕ್ಷಕನಂತೆ ವರ್ತಿಸುತ್ತಿದೆ. ಸಿಬಿಎಫ್‌ಸಿಯ ಅಧಿಕಾರವು ಸೀಮಿತವಾಗಿದೆ. ಮಾನಹಾನಿಕರವಲ್ಲದ ಹೊರತು ನೈಜ ವ್ಯಕ್ತಿಗಳನ್ನು ಚಿತ್ರಿಸುವ ವಿಚಾರದಲ್ಲಿ ಯಾವುದೇ ಕಾನೂನಾತ್ಮಕ ನಿಷೇಧವಿಲ್ಲ" ಎಂದು ವಾದಮಂಡಿಸಿದ್ದರು.

ಸಿಬಿಎಫ್‌ಸಿ ಪರವಾಗಿ ಹಿರಿಯ ವಕೀಲ ರಾಮ್ ಆಪ್ಟೆ ವಾದ ಮಂಡಿಸಿದ್ದರು.

Kannada Bar & Bench
kannada.barandbench.com