Rana Ayyub
Rana Ayyub Facebook

ರಾಣಾ ಅಯ್ಯೂಬ್‌ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್

ವಿದೇಶ ಪ್ರವಾಸಕ್ಕೆ ಅವಕಾಶ ನೀಡಿದರೆ ಪತ್ರಕರ್ತೆ ಭಾರತಕ್ಕೆ ಹಿಂತಿರುಗುವುದಿಲ್ಲ ಎಂಬ ಆತಂಕವನ್ನು ರಾಣಾ ಪರ ವಾದ ಮಂಡಿಸಿದ ವಕೀಲೆ ವೃಂದಾ ಗ್ರೋವರ್ ಹೋಗಲಾಡಿಸಿದರು.
Published on

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ತೊರೆಯದಂತೆ ಜಾರಿ ನಿರ್ದೇಶನಾಲಯ ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ನೀಡಿದ್ದ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಬದಿಗೆ ಸರಿಸಿ ಆಕೆಯ ವಿದೇಶ ಪ್ರಯಾಣಕ್ಕೆ ದೆಹಲಿ ಹೈಕೋರ್ಟ್‌ ಸೋಮವಾರ ಅನುಮತಿಸಿದೆ.

ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರು ರಾಣಾ ಸಲ್ಲಿಸಿದ ರಿಟ್‌ ಅರ್ಜಿಯನ್ನು ಪುರಸ್ಕರಿಸಿ ಅದಕ್ಕೆ ಕಾರಣಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ತಿಳಿಸಿದರು.

Also Read
ವಿದೇಶ ಪ್ರಯಾಣ ನಿರ್ಬಂಧ: ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಪತ್ರಕರ್ತೆ ರಾಣಾ ಅಯ್ಯೂಬ್‌

ಅಯ್ಯೂಬ್ ಪರ ವಾದ ಮಂಡಿಸಿದ ವಕೀಲೆ ವೃಂದಾ ಗ್ರೋವರ್, ತಮ್ಮ ಕಕ್ಷಿದಾರರು ಜಾರಿ ನಿರ್ದೇಶನಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಯಾವಾಗ ಬೇಕಾದರೂ ವಿಚಾರಣೆಗೆ ಹಾಜರಾಗಲು ಸಿದ್ಧರಾಗಿದ್ದಾರೆ ಎಂದು ಹೇಳಿದರು. ಅಯ್ಯೂಬ್ ತನಿಖೆ ಎದುರಿಸಲು ಸಿದ್ಧರಿಲ್ಲ ಎಂಬ ಇ ಡಿ ವಾದವನ್ನೂ ಅವರು ನಿರಾಕರಿಸಿದರು. ವಿದೇಶ ಪ್ರವಾಸಕ್ಕೆ ಅವಕಾಶ ನೀಡಿದರೆ ಪತ್ರಕರ್ತೆ ಭಾರತಕ್ಕೆ ಹಿಂತಿರುಗುವುದಿಲ್ಲ ಎಂಬ ಆತಂಕವನ್ನು ವೃಂದಾ ಹೋಗಲಾಡಿಸಿದರು.

Also Read
ವಿದೇಶ ಪ್ರಯಾಣ: ರಾಣಾ ಅಯ್ಯೂಬ್‌ಗೆ ಸದ್ಯಕ್ಕೆ ದೊರೆಯದ ಅನುಮತಿ; ಇ ಡಿ ಸಲ್ಲಿಸಬೇಕು ವಸ್ತುಸ್ಥಿತಿ ವರದಿ

ವಿಚಾರಣೆಯ ಆರಂಭದಲ್ಲಿ, ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ ವಿ ರಾಜು ಅವರು ಕಳೆದ ವಿಚಾರಣೆಯಲ್ಲಿ ನ್ಯಾಯಾಲಯ ಕೇಳಿದ್ದ ಸ್ಥಿತಿಗತಿ ವರದಿಯನ್ನು ಸಲ್ಲಿಸಿದರು.

ರಾಣಾ ವಿರುದ್ಧ ಲುಕ್ ಔಟ್ ಸುತ್ತೋಲೆ (LOC) ಹೊರಡಿಸಿದ ನಂತರ ಮಾರ್ಚ್ 29ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಆಕೆ ಪ್ರಯಾಣ ಮಾಡದಂತೆ ತಡೆಹಿಡಿಯಲಾಗಿತ್ತು.

Kannada Bar & Bench
kannada.barandbench.com