ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಅಂಜಾರಿಯಾ, ಬಿಷ್ಣೋಯ್ ಹಾಗೂ ಚಂದೂರ್ಕರ್ ನೇಮಕ: ಕೇಂದ್ರದ ಅಧಿಸೂಚನೆ

ಮೂರು ಹೊಸ ನೇಮಕಾತಿಗಳಿಂದಾಗಿ ಒಟ್ಟು 34 ನ್ಯಾಯಮೂರ್ತಿಗಳ ಸಂಖ್ಯಾಬಲದ ಸರ್ವೋಚ್ಚ ನ್ಯಾಯಾಲಯ ಸಂಪೂರ್ಣ ಸದಸ್ಯರೊಂದಿಗೆ ಕಾರ್ಯನಿರ್ವಹಿಸಲಿದೆ.
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಅಂಜಾರಿಯಾ, ಬಿಷ್ಣೋಯ್ ಹಾಗೂ ಚಂದೂರ್ಕರ್ ನೇಮಕ: ಕೇಂದ್ರದ ಅಧಿಸೂಚನೆ
Published on

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಿ ಕೇಂದ್ರ ಸರ್ಕಾರ ಗುರುವಾರ ಆಧಿಸೂಚನೆ ಹೊರಡಿಸಿದೆ. ಇದೇ ವೇಳೆ, ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗ ವಿಜಯ್ ಬಿಷ್ಣೋಯ್ ಹಾಗೂ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಅತುಲ್ ಎಸ್. ಚಂದೂರ್ಕರ್ ಅವರಿಗೂ ಸಹ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗಿದೆ.

ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಅರ್ಜುನ್ ರಾಮ್ ಮೇಘವಾಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು‌ ಮಾಹಿತಿ ಹಂಚಿಕೊಂಡಿದ್ದಾರೆ

Also Read
ಸಿಜೆ ಅಂಜಾರಿಯಾ ಸಹಿತ ಮೂವರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲು ಕೊಲಿಜಿಯಂ ಶಿಫಾರಸ್ಸು

ಮೂರು ಹೊಸ ನೇಮಕಾತಿಗಳಿಂದಾಗಿ ಒಟ್ಟು 34 ನ್ಯಾಯಮೂರ್ತಿಗಳ ಸಂಖ್ಯಾಬಲದ ಸರ್ವೋಚ್ಚ ನ್ಯಾಯಾಲಯ ಸಂಪೂರ್ಣ ಸದಸ್ಯರೊಂದಿಗೆ ಕಾರ್ಯನಿರ್ವಹಿಸಲಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಕೊಲಿಜಿಯಂ ಮೇ 26ರಂದು ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿಗೊಳಿಸುವಂತೆ ಶಿಫಾರಸು ಮಾಡಿತ್ತು.

ಇವರಲ್ಲಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರ ಮಾತೃ ಹೈಕೋರ್ಟ್‌ ಗುಜರಾತ್‌ ಆಗಿದ್ದು ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಜಯ್‌ ಬಿಷ್ಣೋಯ್‌ ಅವರ ಮಾತೃ ಹೈಕೋರ್ಟ್‌ ರಾಜಸ್ಥಾನ ಹೈಕೋರ್ಟ್ ಆಗಿದೆ. ನ್ಯಾ. ಚಂದೂರ್ಕರ್‌ ಅವರ ಮಾತೃ ಹೈಕೋರ್ಟ್‌ ಬಾಂಬೆ ಹೈಕೋರ್ಟ್ ಆಗಿದೆ.

2011ರ ನವೆಂಬರ್‌ 21ರಂದು ನ್ಯಾ. ಅಂಜಾರಿಯಾ ಅವರು ಗುಜರಾತ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, 2013ರ ಸೆಪ್ಟೆಂಬರ್‌ 6ರಂದು ಕಾಯಂಗೊಂಡಿದ್ದರು. 2024ರ ಫೆಬ್ರವರಿ 25ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿದ್ದರು.

ನ್ಯಾಯಮೂರ್ತಿ ಬಿಷ್ಣೋಯ್‌ ಅವರು 1989ರ ಜುಲೈ 8ರಂದು ವಕೀಲರಾಗಿ ನೋಂದಣಿ ಮಾಡಿಸಿದ್ದು, ರಾಜಸ್ಥಾನ ಹೈಕೋರ್ಟ್‌ ಮತ್ತು ಜೋಧಪುರದ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಾಕ್ಟೀಸ್‌ ಮಾಡಿದ್ದಾರೆ. ಸಿವಿಲ್‌, ಕ್ರಿಮಿನಲ್‌, ಸಾಂವಿಧಾನಿಕ, ಸೇವಾ ಮತ್ತು ಚುನಾವಣಾ ಪ್ರಕರಣಗಳನ್ನು ನಡೆಸಿದ್ದಾರೆ.

ನ್ಯಾ. ಚಂದೂರ್ಕರ್‌ ಅವರು 1988ರ ಜುಲೈ 21ರಂದು ವಕೀಲರಾಗಿ ನೋಂದಣಿಯಾಗಿದ್ದು, ಮುಂಬೈನ ಹಿರಿಯ ವಕೀಲ ಬಿ ಎನ್‌ ನಾಯ್ಕ್‌ ಅವರ ಚೇಂಬರ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ್ದರು. ಆನಂತರ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿದ್ದರು. 1992ರಲ್ಲಿ ನಾಗ್ಪುರ ಪೀಠಕ್ಕೆ ಪ್ರಾಕ್ಟೀಸ್‌ ವರ್ಗಾಯಿಸಿಕೊಂಡಿದ್ದ ನ್ಯಾ. ಚಂದೂರ್ಕರ್‌ ಅವರು ಹಲವು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ಸಿಜೆಐಯಾಗಿದ್ದ ಸಂಜೀವ್‌ ಖನ್ನಾ, ನ್ಯಾಯಮೂರ್ತಿಗಳಾದ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಬೆಲಾ ತ್ರಿವೇದಿ ಅವರು ಈಚಗೆ ನಿವೃತ್ತಿ ಹೊಂದಿದ್ದರಿಂದ ಮೂರು ಹುದ್ದೆಗಳು‌ ಖಾಲಿ ಉಳಿದಿದ್ದವು.

Kannada Bar & Bench
kannada.barandbench.com