[ಚೆಕ್‌ ಬೌನ್ಸ್‌ ಪ್ರಕರಣ] ಕಂಪೆನಿ ನಿರ್ದೇಶಕರುಗಳಿಗೆ ಯಾವಾಗ ಸಮನ್ಸ್‌ ನೀಡಬಹುದು? ಇಲ್ಲಿದೆ ಸುಪ್ರೀಂ ಕೋರ್ಟ್‌ ವಿವರಣೆ

ವರ್ಗಾವಣೀಯ ಲಿಖಿತಗಳ ಅಧಿನಿಯಮ ಕಾಯಿದೆ ಸೆಕ್ಷನ್ 138ರ ಜೊತೆ ಸೆಕ್ಷನ್‌ 141ರ ಅಡಿ ಸಲ್ಲಿಸಿದ ದೂರಿನಲ್ಲಿ ಯಾವ ಸಂದರ್ಭದಲ್ಲಿ ಅಪರಾಧ ಎಸಗಲಾಗಿದೆ ಎಂಬುದನ್ನು ಖಚಿತವಾಗಿ ಹೇಳುವುದು ಅಗತ್ಯ ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court

ವರ್ಗಾವಣೀಯ ಲಿಖಿತಗಳ ಅಧಿನಿಯಮ ಕಾಯಿದೆ (ನೆಗೋಷಬಲ್ ಇನ್ಸ್ ಟ್ರುಮೆಂಟ್ಸ್‌ ಆಕ್ಟ್‌) ಅಥವಾ ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ ಸೆಕ್ಷನ್ 138ರ ಅಡಿ ಕಂಪೆನಿಯ ನಿರ್ದೇಶಕರುಗಳಿಗೆ ಯಾವ ಸಂದರ್ಭದಲ್ಲಿ ಸಮನ್ಸ್‌ ನೀಡಬಹುದು ಅಥವಾ ನೇರವಾಗಿ ಅವರನ್ನು ಹೊಣೆಗಾರರನ್ನಾಗಿಸಬಹುದು ಎಂಬುದನ್ನು ಸುಪ್ರೀಂ ಕೋರ್ಟ್‌ ವಿವರಿಸಿದೆ.

ಬೌನ್ಸ್‌ ಆದ ಚೆಕ್‌ ನೀಡಿದ ಕಂಪೆನಿಯ ನಿರ್ದೇಶಕರಾಗಿರುವ ಮಾತ್ರಕ್ಕೆ ವ್ಯಕ್ತಿಯೊಬ್ಬರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದ್ದು, ಇದಕ್ಕೆ ನ್ಯಾಯಾಲಯವು ಎಸ್‌ಎಂಸ್‌ ಫಾರ್ಮಸ್ಯುಟಿಕಲ್ಸ್‌ ಲಿಮಿಟೆಡ್‌ ವರ್ಸಸ್‌ ನೇತಾ ಭಲ್ಲಾ ಮತ್ತು ಇತರರು ಪ್ರಕರಣವನ್ನು ಆಧರಿಸಿದೆ.

ವ್ಯಕ್ತಿಯನ್ನು ಹೊಣೆಗಾರನನ್ನಾಗಿಸಬೇಕು ಎಂದಾದರೆ ಅವರು ಆ ನಿರ್ದಿಷ್ಟ ಸಮಯದಲ್ಲಿ ಕಂಪೆನಿಯ ವ್ಯವಹಾರಗಳ ನಿರ್ವಹಣೆಗೆ ಹೊಣೆಗಾರರಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.

ಕಂಪೆನಿಯ ನಿರ್ದೇಶಕರ ವಿರುದ್ಧ ಪ್ರಕ್ರಿಯೆ ಆರಂಭಿಸಬೇಕು ಎಂದಾದರೆ “ವರ್ಗಾವಣೀಯ ಲಿಖಿತಗಳ ಅಧಿನಿಯಮ ಕಾಯಿದೆ (ನೆಗೋಷಬಲ್ ಇನ್ಸ್ ಟ್ರುಮೆಂಟ್ಸ್‌ ಆಕ್ಟ್‌) ಸೆಕ್ಷನ್ 138ರ ಜೊತೆ ಸೆಕ್ಷನ್‌ 141ರ ಅಡಿ ಸಲ್ಲಿಸಿದ ದೂರಿನಲ್ಲಿ ಯಾವ ಸಂದರ್ಭದಲ್ಲಿ ಅಪರಾಧ ಎಸಗಲಾಗಿದೆ ಎಂಬುದನ್ನು ಖಚಿತವಾಗಿ ದಾಖಲಿಸುವುದು ಮತ್ತು ಆ ಸಂದರ್ಭದಲ್ಲಿ ಕಂಪೆನಿಯು ಉಸ್ತುವಾರಿ ಹೊತ್ತಿದ್ದ ಹಾಗೂ ಕಂಪೆನಿಯ ವ್ಯವಹಾರ ನಿರ್ವಹಣೆಗೆ ಜವಾಬ್ದಾರಿಯಾಗಿದ್ದ ನಿರ್ದೇಶಕರನ್ನು ಉಲ್ಲೇಖಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ದೂರಿನಲ್ಲಿ ಅಂಥ ಖಚಿತ ಉಲ್ಲೇಖ ಏಕೆ ಮುಖ್ಯವಾಗುತ್ತದೆ ಎಂದರೆ “ಮ್ಯಾಜಿಸ್ಟ್ರೇಟ್‌ ನಿರ್ದೇಶಕರ ವಿರುದ್ಧ ಪ್ರಕ್ರಿಯೆ ಆರಂಭಿಸಬೇಕು ಎನ್ನುವುದನ್ನು ಮನವರಿಕೆ ಮಾಡಲು ಈ ಖಚಿತ ಉಲ್ಲೇಖವು ಬಹುಮುಖ್ಯವು ಮತ್ತು ಅಗತ್ಯವೂ ಆಗಿರುತ್ತದೆ” ಎಂದು ನ್ಯಾಯಾಲಯವು ಹೇಳಿದೆ.

ದೂರಿನಲ್ಲಿ ಈ ಕುರಿತು ಉಲ್ಲೇಖಿಸದಿದ್ದರೆ ಮ್ಯಾಜಿಸ್ಟ್ರೇಟ್‌ ಪ್ರಕ್ರಿಯೆ ಆರಂಭಿಸಲು ಕಾನೂನಾತ್ಮಕವಾಗಿ ಸಮರ್ಥನೆ ಸಿಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಅಭಯ್‌ ಶ್ರೀನಿವಾಸ್‌ ಓಕ್‌ ಅವರಿದ್ದ ವಿಭಾಗೀಯ ಪೀಠ ವಿವರಿಸಿದೆ.

ಇಂಥ ಪ್ರಕರಣದಲ್ಲಿ ನಿರ್ದೇಶಕರಿಗೆ ಸಮನ್ಸ್‌ ಆದೇಶ ಹೊರಡಿಸಿದರೆ ಹೈಕೋರ್ಟ್‌ ಅದರಲ್ಲಿ ಮಧ್ಯಪ್ರವೇಶಿಸಬಾರದು. ಅನುಮಾನಕ್ಕೆ ಎಡೆಮಾಡಿಕೊಡಲಾರದ, ಸ್ವೀಕಾರಾರ್ಹವಾದ, ಸಂಪೂರ್ಣವಾಗಿ ಒಪ್ಪಿಕೊಳ್ಳಬಹುದಾದ, ದೋಷಾತೀತವಾದ, ನಿರ್ವಿವಾದವಾದ ಸಾಕ್ಷ್ಯ ದೊರೆಯದಿದ್ದರೆ, ಅದರಲ್ಲಿ ಸ್ಪಷ್ಟವಾಗಿ ಚೆಕ್‌ಗೆ ಸಂಬಂಧಿಸಿದಂತೆ ನಿರ್ದೇಶಕರಿಗೆ ಯಾವುದೇ ಸಂಬಂಧ ಇರದಿದ್ದಲ್ಲಿ ಅವರನ್ನು ವಿಚಾರಣೆಯಲ್ಲಿ ಭಾಗವಹಿಸುವಂತೆ ಮಾಡುವುದು ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ದೂರಿನಲ್ಲಿ ಅಂತಹ ಮೂಲಭೂತ ಉಲ್ಲೇಖ ಇದ್ದರೂ ಸಹ, ಸಂಬಂಧಿತ ನ್ಯಾಯಾಲಯವು ನಂತರ ಹಲವಾರು ಕಾರಣಗಳಿಗಾಗಿ ಆರೋಪಿತ ನಿರ್ದೇಶಕರ ವಿರುದ್ಧ ಯಾವುದೇ ಪ್ರಕರಣವನ್ನು ಮಾಡಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಲಾಗಿದೆ.

ಚೆಕ್ ಬೌನ್ಸ್‌ ಪ್ರಕರಣದಲ್ಲಿ 2012ರಲ್ಲಿ ವಿಚಾರಣಾಧೀನ ನ್ಯಾಯಾಲಯವು ಕಂಪೆನಿಯ ನಿರ್ದೇಶಕರಿಗೆ ಸಮನ್ಸ್‌ ಜಾರಿಗೊಳಿಸಿದ್ದನ್ನು 2014ರಲ್ಲಿ ಹೈಕೋರ್ಟ್‌ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಚೆಕ್‌ಗಳಿಗೆ ಮೇಲ್ಮನವಿ ಸಲಿಸಿದ್ದ ನಿರ್ದೇಶಕರುಗಳು ಸಹಿ ಮಾಡಿರಲಿಲ್ಲ. ಅಲ್ಲದೇ, ಮೇಲ್ಮನವಿದಾರರು ತಾವು ಕಾರ್ಯಕಾರೇತರ ನಿರ್ದೇಶಕರು ಎಂದು ವಾದಿಸಿದ್ದರು. ದೂರನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌ “ಕಂಪೆನಿ ನೀಡಿರುವ ಚೆಕ್‌ಗಳನ್ನು ಬ್ಯಾಂಕ್‌ ನಿರಾಕರಿಸಿದ ಸಂದರ್ಭದಲ್ಲಿ ಮೇಲ್ಮನವಿದಾರರು ನಿರ್ದೇಶಕರಾಗಿದ್ದು ಕಂಪೆನಿಯ ವ್ಯವಹಾರಕ್ಕೆ ಜವಾಬ್ದಾರರಾಗಿದ್ದಾರೆ ಎಂದು ದೂರಿನಲ್ಲಿರುವ ಆರೋಪಗಳಿಂದ ಸ್ಪಷ್ಟವಾಗಿ ತಿಳಿದುಬಂದಿದೆ” ಎಂದು ನ್ಯಾಯಾಲಯ ಹೇಳಿದೆ.

Also Read
ಚೆಕ್‌ಬೌನ್ಸ್‌ ಪ್ರಕರಣಗಳ ವಿಚಾರಣೆಗೆ ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆ: ಸುಪ್ರೀಂ ಸಲಹೆಗೆ ಕೇಂದ್ರದ ಶ್ಲಾಘನೆ

ಮೇಲ್ಮನವಿದಾರರ ವಾದವನ್ನು ಅಲ್ಲಗಳೆದಿರುವ ನ್ಯಾಯಾಲಯವು ಹೈಕೋರ್ಟ್‌ ಆದೇಶದಲ್ಲಿ ಯಾವುದೇ ದೋಷಗಳಿಲ್ಲ ಎಂದಿದ್ದು, ಸಮನ್ಸ್‌ನಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಸ್ಪಷ್ಟಪಡಿಸಿದೆ. ವಿಚಾರಣೆಯ ಸಂದರ್ಭದಲ್ಲಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವುದು ಮೇಲ್ಮನವಿದಾರ ನಿರ್ದೇಶಕರುಗಳಿಗೆ ಬಿಟ್ಟ ವಿಚಾರ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು, ಮನವಿಯನ್ನು ವಜಾ ಮಾಡಿದೆ.

2012ರಲ್ಲಿ ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆ ನಡೆದಿದ್ದು, 2014ರಿಂದ ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ ಎಂದಿದ್ದು, ತುರ್ತಾಗಿ ವಿಚಾರಣೆ ಮುಗಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com