ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಎನ್‌ ವಿ ರಮಣ ಅವರ ಹೆಸರನ್ನು ಶಿಫಾರಸ್ಸು ಮಾಡಿದ ಸಿಜೆಐ ಎಸ್ ಎ ಬೊಬ್ಡೆ

ನ್ಯಾಯಮೂರ್ತಿ ಎನ್‌ ವಿ ರಮಣ ಅವರು 16 ತಿಂಗಳು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿರಲಿದ್ದು, ಆಗಸ್ಟ್‌ 26, 2022ರಂದು ನಿವೃತ್ತಿ ಹೊಂದಲಿದ್ದಾರೆ.
CJI SA Bobde and Justice NV Ramana SC
CJI SA Bobde and Justice NV Ramana SC

ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ತೆರೆ ಎಳೆದಿದ್ದು, ತಮ್ಮ ಉತ್ತರಾಧಿಕಾರಿ ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಕೇಂದ್ರ ಕಾನೂನು ಇಲಾಖೆಗೆ ಶಿಫಾರಸ್ಸು ಪತ್ರವನ್ನು ಕಳುಹಿಸಿಕೊಡಲಾಗಿದ್ದು, ಅದರ ಪ್ರತಿಯೊಂದನ್ನು ತಮ್ಮ ಉತ್ತರಾಧಿಕಾರಿಯಾದ ನ್ಯಾಯಮೂರ್ತಿ ರಮಣ ಅವರಿಗೂ ಸಿಜೆಐ ಬೊಬ್ಡೆ ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ. ಎನ್‌ ವಿ ರಮಣ ಅವರ ವಿರುದ್ಧ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ನೀಡಿದ್ದ ದೂರನ್ನೂ ಅವರು ವಜಾಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Also Read
ನ್ಯಾ. ರಮಣ ವಿರುದ್ಧ ಭ್ರಷ್ಟಾಚಾರ ಆರೋಪ: ಆಂಧ್ರ ಸಿಎಂ ಜಗನ್ ವಿರುದ್ಧದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಲಲಿತ್

2014ರ ಫೆಬ್ರವರಿ 17ರಂದು ನ್ಯಾ. ರಮಣ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಹಾಲಿ ಸಿಜೆಐ ಬೊಬ್ಡೆ ಅವರು ಏಪ್ರಿಲ್‌ 23ರಂದು ನಿವೃತ್ತಿ ಹೊಂದಲಿದ್ದು, ನ್ಯಾ. ರಮಣ ಅವರು ಏಪ್ರಿಲ್‌ 24ರಂದು ಪದಗ್ರಹಣ ಮಾಡಲಿದ್ದಾರೆ.

ನ್ಯಾಯಮೂರ್ತಿ ಎನ್‌ ವಿ ರಮಣ ಅವರು 16 ತಿಂಗಳು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿರಲಿದ್ದು, ಆಗಸ್ಟ್‌ 26, 2022ರಂದು ನಿವೃತ್ತಿ ಹೊಂದಲಿದ್ದಾರೆ. ದಶಕದ ಬಳಿಕ ಸಿಜೆಐ ಅವರ ಸುದೀರ್ಘ ಅವಧಿ ಇದಾಗಿರಲಿದೆ. 2010ರ ಮೇ ಇಂದ 2012ರ ಸೆಪ್ಟೆಂಬರ್‌ವರೆಗೆ ಸಿಜೆಐ ಆಗಿದ್ದ ದಿವಂಗತ ಎಸ್‌ ಎಚ್‌ ಕಪಾಡಿಯಾ ಅವರು ಇತ್ತೀಚಿನ ದಶಕಗಳಲ್ಲಿ ಸುದೀರ್ಘ ಅವಧಿಯವರೆಗೆ ಅತ್ಯುನ್ನತ ಸ್ಥಾನದಲ್ಲಿದ್ದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.

Related Stories

No stories found.
Kannada Bar & Bench
kannada.barandbench.com