ಎನ್‌ಸಿಇಆರ್‌ಟಿ ವಿವಾದ: ಪಠ್ಯ ಪುಸ್ತಕಕ್ಕೆ ಸುಪ್ರೀಂ ಕೋರ್ಟ್‌ ನಿಷೇಧ; ನಿರ್ದೇಶಕರಿಗೆ ನೋಟಿಸ್

ಆಕ್ಷೇಪಾರ್ಹ ಅಧ್ಯಾಯವನ್ನು ಬರೆದ ರಾಷ್ಟ್ರೀಯ ಪಠ್ಯಕ್ರಮ ಮಂಡಳಿಯ ಸದಸ್ಯರ ವಿವರಗಳನ್ನು ತಿಳಿಸುವಂತೆ ನ್ಯಾಯಾಲಯ ಸೂಚಿಸಿತು. ಇದೇ ವೇಳೆ ಕೇಂದ್ರ ಸರ್ಕಾರ ಬೇಷರತ್‌ ಕ್ಷಮೆ ಯಾಚಿಸಿತು.
Supreme Court and NCERT textbook
Supreme Court and NCERT textbook
Published on

ನ್ಯಾಯಾಂಗ ಭ್ರಷ್ಟಾಚಾರ ಕುರಿತು ಉಲ್ಲೇಖಿಸಿದ್ದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಸುಪ್ರೀಂ ಕೋರ್ಟ್‌ ಗುರುವಾರ ನಿಷೇಧಿಸಿದೆ.

ಇದು ಆಳವಾಗಿ ಬೇರೂರಿದ ಸಂಚಿನ ಫಲವಾಗಿದ್ದು, ಇದಕ್ಕೆ ಹೊಣೆಗಾರರಾದವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಸಿಜೆಐ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ ಪಂಚೋಲಿ ಅವರಿದ್ದ ಪೀಠ ತಿಳಿಸಿತು.

Also Read
ಅತಿ ವಿಳಂಬಿತ ಪ್ರಕರಣಗಳಲ್ಲಿ ಮಾತ್ರ ತನಿಖೆಗೆ ಗಡುವು ವಿಧಿಸಬೇಕು: ಸುಪ್ರೀಂ ಕೋರ್ಟ್

“ಈ ಬಗ್ಗೆ ಆಳವಾದ ತನಿಖೆ ಬೇಕು. ಯಾರು ಹೊಣೆಗಾರರು ಎಂಬುದನ್ನು ಪತ್ತೆಹಚ್ಚಬೇಕು. ತಲೆಗಳು ಉರುಳಬೇಕು! ನಾವು ಪ್ರಕರಣ ಮುಕ್ತಾಯಗೊಳಿಸುವುದಿಲ್ಲ” ಎಂದು ಸಿಜೆಐ ಕಾಂತ್ ಎಚ್ಚರಿಕೆ ನೀಡಿದರು.

ಅವರು ಗುಂಡು ಹಾರಿಸಿದ್ದಾರೆ, ನ್ಯಾಯಾಂಗವು ಇಂದು ರಕ್ತ ಸುರಿಸುತ್ತಿದೆ… ಸಾಂಸ್ಥಿಕ ಅಧಿಕಾರವನ್ನು ದುರ್ಬಲಗೊಳಿಸಲು ಮತ್ತು ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು ನಡೆಸಿದ ಉದ್ದೇಶಪೂರ್ವಕ ಯತ್ನದಂತೆ ಇದು ತೋರುತ್ತಿದೆ ಎಂತಲೂ ನ್ಯಾಯಾಲಯ ಕಿಡಿಕಾರಿದೆ.

ಅಂತೆಯೇ ಎನ್‌ಸಿಇಆರ್‌ಟಿ ನಿರ್ದೇಶಕ ಡಾ. ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಅದು ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ. ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳನ್ನು ಸಾರ್ವಜನಿಕವಾಗಿ ದೊರೆಯದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿರುವ ಅದು ವಿವಾದಿತ ಅಧ್ಯಾಯ ರಚಿಸಿದ ರಾಷ್ಟ್ರೀಯ ಪಠ್ಯಕ್ರಮ ಮಂಡಳಿಯ ಸದಸ್ಯರ ವಿವರಗಳು ಹಾಗೂ ಅಂದು ನಡೆದಿದ್ದ ಸಭೆಯ ಟಿಪ್ಪಣಿಗಳನ್ನು ಸಲ್ಲಿಸುವಂತೆ ತಾಕೀತು ಮಾಡಿದೆ.

ಈ ಅಧ್ಯಾಯವು ನ್ಯಾಯಾಂಗದ ವೈಭವಶಾಲಿ ಇತಿಹಾಸ, ಮೂಲ ಸಂರಚನಾ ಸಿದ್ಧಾಂತವನ್ನು ಕಾಪಾಡಿದ ಪಾತ್ರ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉಳಿಸುವಲ್ಲಿ ವಹಿಸಿದ ಮಹತ್ವವನ್ನು ಕಡೆಗಣಿಸಿದೆ. ಪದಪ್ರಯೋಗವು ಸಾಮಾನ್ಯ ತಪ್ಪಿನಂತೆ ಕಾಣುವುದಿಲ್ಲ ಎಂದು ಪೀಠ ಹೇಳಿದೆ. ಇದು ನ್ಯಾಯಾಂಗದ ಗೌರವ ಮತ್ತು ಸಂಸ್ಥೆಯ ಅಧಿಕಾರವನ್ನು ಕುಗ್ಗಿಸುವ ಯೋಜಿತ ಕ್ರಮವಾಗಿರಬಹುದು ಎಂದು ಅದು ಹೇಳಿತು.

Also Read
ಡಿಜಿಟಲ್‌ ಅರೆಸ್ಟ್‌: ಬ್ಯಾಂಕ್‌ಗಳ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ

ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಬೇಷರತ್‌ ಕ್ಷಮೆಯಾಚಿಸಿದರು. ಆದರೆ ಸಿಜೆಐ ಅವರು, "ಅವರು ಗುಂಡು ಹಾರಿಸಿದ್ದಾರೆ, ನ್ಯಾಯಾಂಗ ರಕ್ತ ಸುರಿಸುತ್ತಿದೆ" ಎಂದರು. ಸಮಂಜಸ ಟೀಕೆಯನ್ನು ಬೇಡ ಎನ್ನುವುದಿಲ್ಲ ಆದರೆ ವಿದ್ಯಾರ್ಥಿಗಳಿಗೆ ಪಕ್ಷಪಾತದ ಮತ್ತು ಪೂರ್ವಾಗ್ರಹದ ಚಿತ್ರಣ ನೀಡುವುದು ಶಿಕ್ಷಣದ ಅಖಂಡತೆಗೆ ಮಾರಕ ಎಂದು ನ್ಯಾಯಾಲಯ ಬುದ್ಧಿವಾದ ಹೇಳಿತು.

ತಾನು ನೀಡಿರುವ ಆದೇಶದ ಅನುಪಾಲನಾ ವರದಿಗಳು ಬಂದ ಬಳಿಕ ತಪ್ಪಿತಸ್ಥರನ್ನು ಗುರುತಿಸಲು ಸಮಿತಿ ರಚಿಸಲಾಗುವುದು ಎಂದು ನ್ಯಾಯಾಲಯ ನುಡಿಯಿತು. ವಿಚಾರಣೆ ನಾಲ್ಕು ವಾರಗಳ ಬಳಿಕ ಪ್ರಕರಣವನ್ನು ನ್ಯಾಯಾಲಯ ಮತ್ತೆ ಕೈಗೆತ್ತಿಕೊಳ್ಳಲಿದೆ.

Kannada Bar & Bench
kannada.barandbench.com