

ಕ್ರಿಮಿನಲ್ ವಿಚಾರಣೆ ವಿಳಂಬವಾಗುವುದನ್ನು ತಡೆಯಲು ವಿಚಾರಣಾ ನ್ಯಾಯಾಲಯಗಳು ಆರೋಪ ನಿಗದಿ ಮಾಡುವುದಕ್ಕೆ ಕಾಲಮಿತಿ ವಿಧಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ಬುಧವಾರ ಮಾರ್ಗಸೂಚಿ ರೂಪಿಸುವ ಇಂಗಿತ ವ್ಯಕ್ತಪಡಿಸಿದೆ. [ಅಮನ್ ಕುಮಾರ್ ಮತ್ತು ಬಿಹಾರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪ್ರಕರಣದಲ್ಲಿ ಸಹಾಯ ಮಾಡಲು ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠ ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ.
ಆರೋಪಪಟ್ಟಿ ಸಲ್ಲಿಸಿದ ಬಳಿಕವೂ ನ್ಯಾಯಾಲಯ ಹಲವು ವರ್ಷಗಳ ಕಾಲ ಆರೋಪ ನಿಗದಿಪಡಿಸದೆ ಇರುವುದನ್ನು ಪ್ರಶ್ನಿಸಿದ್ದ ಬಿಹಾರದ ವಿಚಾರಣಾಧೀನ ಕೈದಿ ಅಮನ್ ಕುಮಾರ್ ಹೀಗಾಗಿ ತಮಗೆ ಜಾಮೀನು ನೀಡುವಂತೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಪ್ರಕರಣದಲ್ಲಿ ಆರೋಪಗಳನ್ನು ರೂಪಿಸುವಲ್ಲಿ ವಿಳಂಬ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಇಂತಹ ಸ್ಥಿತಿ ಮುಂದುವರೆಯಬಾರದು. ಪೊಲೀಸರು ಆರೋಪಪಟ್ಟಿ ಅಥವಾ ಅಂತಿಮ ತನಿಖಾ ವರದಿಯನ್ನು ಸಲ್ಲಿಸಿದ ತಕ್ಷಣ ಆರೋಪ ನಿಗದಿಪಡಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು. ಅಂತೆಯೇ ಈ ಸಂಬಂಧ ದೇಶದಾದ್ಯಂತ ಮಾರ್ಗಸೂಚಿ ಹೊರಡಿಸುವ ಇಂಗಿತವನ್ನು ಅದು ವ್ಯಕ್ತಪಡಿಸಿತು.
“ಏನಿದು? ಆರೋಪ ನಿಗದಿಗೆ ಮೂರು ನಾಲ್ಕು ವರ್ಷ ಹಿಡಿದಿದೆ? ನಾನು ಗುಜರಾತ್ನ ನನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದೆ. ಅಲ್ಲಿ ಇದು ಹೇಗೆ ನಡೆಯುತ್ತದೆ ಎಂಬ ಕಾರ್ಯವಿಧಾನ ನಮಗೆ ಗೊತ್ತಿದೆ. ಅದನ್ನು ಇಲ್ಲಿ ವಿವರಿಸುವುದಿಲ್ಲ. ಆದರೆ ವಿಚಾರಣೆ ವಿಳಂಬ ಮಾಡಲಾಗದು. ಆರೋಪಪಟ್ಟಿ ಸಲ್ಲಿಸಿದ ಕೂಡಲೇ ಆರೋಪ ನಿಗದಿ ಮಾಡಬೇಕು. ಕೆಲವನ್ನು ಬಿಡುಗಡೆ ಮಾಡಿದರೂ ಸರಿ. ಈ ನಿಟ್ಟಿನಲ್ಲಿ ದೇಶದೆಲ್ಲೆಡೆ ಮಾರ್ಗಸೂಚಿ ನಿಗದಿ ಮಾಡಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ನೀಡಲು ಅನುವಾಗುವಂತೆ ಪ್ರಕರಣದ ದಾಖಲೆಗಳನ್ನು ಭಾರತದ ಅಟಾರ್ನಿ ಜನರಲ್ ಅವರಿಗೆ ನ್ಯಾಯಾಲಯ ಅನುಮತಿಸಿತು.