
ಕಾಶ್ಮಿರದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಸಶಸ್ತ್ರ ಪಡೆಗಳು ಜನರನ್ನು ಹಿಂಸಿಸುತ್ತಿವೆ ಎಂಬ ಟ್ವೀಟ್ ಹಿನ್ನೆಲೆಯಲ್ಲಿ ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ವಿರುದ್ಧ ಹೂಡಲಾಗಿದ್ದ ದೇಶದ್ರೋಹ ಪ್ರಕರಣ ಮುಕ್ತಾಯಗೊಳಿಸುವಂತೆ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ಈಚೆಗೆ ಪುರಸ್ಕರಿಸಿದೆ.
ಈ ಸಂಬಂಧ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಸಿಂಗ್ ಫೆಬ್ರವರಿ 27ರಂದು ಅನುಮೋದಿಸಿದರು.
ಶೆಹ್ಲಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಈ ಹಿಂದೆ ಅನುಮತಿ ನೀಡಿದ್ದ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಈಗ ಅದನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ .
"ಪ್ರಕರಣವನ್ನು ಸ್ಕ್ರೀನಿಂಗ್ ಸಮಿತಿ ಪರಿಶೀಲಿಸಿದ್ದು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಶಿಫಾರಸು ಮಾಡಿತು. ಅದನ್ನು ದೆಹಲಿ ಸರ್ಕಾರದೆದುರು ಪರಿಗಣನೆಗೆ ಇಡಲಾಯಿತು. ದೆಹಲಿಯ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅವರು ಸಿಆರ್ಪಿಸಿ ಸೆಕ್ಷನ್ 196ರ ಅಡಿಯಲ್ಲಿ ತನಿಖೆಯಿಂದ ಹಿಂದೆ ಸರಿಯುವಂತೆ ಸ್ಕ್ರೀನಿಂಗ್ ಸಮಿತಿ ಮಾಡಿದ್ದ ಶಿಫಾರಸನ್ನು ಅನುಮೋದಿಸಿದ್ದಾರೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
2019 ರಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳು ನಾಗರಿಕರನ್ನು ಹಿಂಸಿಸುತ್ತಿವೆ ಮತ್ತು ಮನೆಗಳನ್ನು ದರೋಡೆ ಮಾಡುತ್ತಿವೆ ಎಂದು ರಶೀದ್ ತಮ್ಮ ಟ್ವೀಟ್ಗಳಲ್ಲಿ ಹೇಳಿಕೊಂಡಿದ್ದರು.
ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ದೆಹಲಿ ಪೊಲೀಸ್ ವಿಶೇಷ ಘಟಕಕ್ಕೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಐಪಿಸಿಯಡಿ ದೇಶದ್ರೋಹ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು.
ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2019ರ ಸೆಪ್ಟೆಂಬರ್ನಲ್ಲಿ ಶೆಹ್ಲಾ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]