
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2001ರಲ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಜೈಲುಶಿಕ್ಷೆ ವಿಧಿಸುವ ಅಗತ್ಯವಿಲ್ಲ ಎಂದು ದೆಹಲಿ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಮೇಧಾ ಅವರು ಬಹುದೊಡ್ಡ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ತಮ್ಮ ಕೆಲಸಗಳಿಗಾಗಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಕೃತ್ಯ ಜೈಲು ಶಿಕ್ಷೆ ವಿಧಿಸುವಷ್ಟು ಗಂಭೀರವಲ್ಲ ಎಂದು ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಆದೇಶದ ವೇಳೆ ತಿಳಿಸಿದರು.
"ಅವರ (ಮೇಧಾ ಪಾಟ್ಕರ್) ಉತ್ತಮ ವರ್ತನೆಗಾಗಿ ಅವರನ್ನು ಬಿಡುಗಡೆ ಮಾಡಲು ನ್ಯಾಯಾಲಯ ನಿರ್ಧರಿಸಿದೆ... ಒಂದು ವರ್ಷದ ಪ್ರೊಬೇಷನ್ ಅವಧಿಯನ್ನು ಅನ್ವಯಿಸಿ ಅವರನ್ನು ಬಿಡುಗಡೆ ಮಾಡಲಾಗಿದೆ," ಎಂದು ನ್ಯಾ. ಸಿಂಗ್ ಆದೇಶದ ವೇಳೆ ತಿಳಿಸಿದರು.
ಪ್ರೊಬೇಷನ್ ಅವಧಿ ಎನ್ನುವುದು ಅಪರಾಧಿಯನ್ನು ಸಮಾಜದಲ್ಲಿ, ಸಮುದಾಯದಲ್ಲಿ ಮುಕ್ತವಾಗಿ ಇರಲು ಅನುಮತಿಸುವುದಾಗಿದ್ದು, ಈ ಅವಧಿಯಲ್ಲಿ ಅವರ ಮೇಲೆ ನಿಗಾ ಇರಿಸಲಾಗಿರುತ್ತದೆ. ಅಪರಾಧಿಯು ಉತ್ತಮ ವರ್ತನೆ ತೋರುವುದರ ಜೊತೆಗೆ, ನ್ಯಾಯಾಲಯವು ಷರತ್ತುಗಳನ್ನೇನಾದರೂ ವಿಧಿಸಿದ್ದರೆ ಅದರ ಅನ್ವಯ ನಡೆದುಕೊಳ್ಳಬೇಕಾಗುತ್ತದೆ.
ಅಲ್ಲದೆ ಮೇಧಾ ಅವರಿಗೆ ವಿಧಿಸಲಾಗಿದ್ದ ₹10 ಲಕ್ಷ ದಂಡದ ಮೊತ್ತವನ್ನೂ ಕಡಿತಗೊಳಿಸಿದ ನ್ಯಾಯಾಲಯ ಸಕ್ಸೇನಾ ಅವರಿಗೆ ಮೇಧಾ ಪರಿಹಾರ ನೀಡ ಬೇಕು ಎಂದು ತಿಳಿಸಿತು. ವಿಚಾರಣಾ ನ್ಯಾಯಾಲಯ ಮೇಧಾ ಪಾಟ್ಕರ್ ಅವರಿಗೆ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.
ತಮಗೆ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಮೇಧಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 2ರಂದು ತಿರಸ್ಕರಿಸಿದ್ದ ನ್ಯಾಯಾಧೀಶರು ಶಿಕ್ಷೆ ಮತ್ತು ಅದರ ಸ್ವೀಕಾರ ಕುರಿತಂತೆ ವಾದ ಮಂಡಿಸುವುದಕ್ಕಾಗಿ ಪ್ರಕರಣವನ್ನು ಇಂದಿಗೆ ನಿಗದಿಪಡಿಸಿದ್ದರು.
ಪಾಟ್ಕರ್ ಅವರನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಅವರು ಏಪ್ರಿಲ್ 2ರಂದು ಎತ್ತಿಹಿಡಿದಿದ್ದರು.
ನರ್ಮದಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಮೇಧಾ ಅವರು ಸಂಘಟಿಸಿದ್ದ ನರ್ಮದಾ ಬಚಾವೋ ಆಂದೋಲನದ ವಿರುದ್ಧ ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್ ಸಂಘಟನೆಯ ಅಧ್ಯಕ್ಷರಾಗಿದ್ದ ಸಕ್ಸೇನಾ ಅವರು 2000ನೇ ಇಸವಿಯಲ್ಲಿ ಜಾಹೀರಾತು ಪ್ರಕಟಿಸಿದ್ದರು.
ಈ ಹಿನ್ನೆಲೆಯಲ್ಲಿ ಮೇಧಾ ಅವರು ಸಕ್ಸೇನಾ ಅವರ ವಿರುದ್ಧ ಪತ್ರಿಕಾ ಪ್ರಕಟಣೆ ನೀಡಿದ್ದರು. ಇದರಲ್ಲಿ ಮಾಡಲಾದ ಆರೋಪಗಳನ್ನು ಆಧರಿಸಿ ಸಕ್ಸೇನಾ 2001ರಲ್ಲಿ ಅಹಮದಾಬಾದ್ನ ನ್ಯಾಯಾಲಯದಲ್ಲಿ ಮೇಧಾ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದರು.