ಉನ್ನಾವೋ ಅತ್ಯಾಚಾರ ಪ್ರಕರಣ: ಸೆಂಗರ್‌ಗೆ ದೆಹಲಿ ಹೈಕೋರ್ಟ್ ಜಾಮೀನು

ಸಂತ್ರಸ್ತೆ ಇರುವ ಸ್ಥಳದ 5 ಕಿಲೋಮೀಟರ್ ಒಳಗೆ ಸೆಂಗರ್ ಪ್ರವೇಶಿಸುವಂತಿಲ್ಲ ಮತ್ತು ಆತ ದೆಹಲಿಯಲ್ಲಿ ಇರುವಂತಿಲ್ಲ ಎಂದು ಪೀಠ ಆದೇಶಿಸಿದೆ.
Kuldeep Singh Sengar, Delhi HC
Kuldeep Singh Sengar, Delhi HCFacebook
Published on

ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ [ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಸಿಬಿಐ ನಡುವಣ ಪ್ರಕರಣ].

ತಮ್ಮ ವಿರುದ್ಧದ ಶಿಕ್ಷೆ ಪ್ರಶ್ನಿಸಿ ಸೆಂಗರ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಬಾಕಿ ಇರುವಂತೆಯೇ ಶಿಕ್ಷೆಯನ್ನು ಅಮಾನತುಗೊಳಿಸಿ ನ್ಯಾಯಮೂರ್ತಿಗಳಾದ ಸುಬ್ರಮೋಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ ತಿಳಿಸಿದೆ.

Also Read
ಉನ್ನಾವೊ ಪ್ರಕರಣ: ಸೆಂಗರ್ ಮಧ್ಯಂತರ ಜಾಮೀನು 4 ವಾರ ವಿಸ್ತರಿಸಿದ ದೆಹಲಿ ಹೈಕೋರ್ಟ್

ಸಂತ್ರಸ್ತೆ ಇರುವ ಸ್ಥಳದ 5 ಕಿಲೋಮೀಟರ್ ಒಳಗೆ ಸೆಂಗರ್ ಪ್ರವೇಶಿಸುವಂತಿಲ್ಲ ಮತ್ತು ಆತ ದೆಹಲಿಯಲ್ಲಿ ಇರುವಂತಿಲ್ಲ. ಪ್ರತಿ ಸೋಮವಾರ ಪೊಲೀಸರೆದುರು ಹಾಜರಾಗಬೇಕು. ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿತ್ತು.

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನು ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ 20 ಜೂನ್ 2017ರಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದ. ಅಲ್ಲದೆ ಆಕೆಯನ್ನು ₹ 60,000ಕ್ಕೆ ಮಾರಾಟ ಮಾಡಲಾಗಿತ್ತು. ಈ ಮಧ್ಯೆ ಆಕೆಗೆ ಮಾಖಿ ಪೊಲೀಸ್‌ ಠಾಣೆಯಲ್ಲಿ ರಕ್ಷಣೆ ದೊರೆತಿತ್ತು. ಪ್ರಕರಣದಲ್ಲಿ ಸೆಂಗರ್‌ ತಪ್ಪಿತಸ್ಥ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹25 ಲಕ್ಷ ದಂಡ ವಿಧಿಸಿತ್ತು.  

ಉನ್ನಾವೋ ಅತ್ಯಾಚಾರ ಘಟನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಆಗಸ್ಟ್ 2019ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿತ್ತು. ದಿನವಹಿ ವಿಚಾರಣೆ ನಡೆಸಿ 45 ದಿನಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಆದೇಶಿಸಿತ್ತು.

ಡಿಸೆಂಬರ್ 2019ರಲ್ಲಿ, ಸೆಂಗರ್‌ಗೆ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪಿತ್ತ ವಿಚಾರಣಾ ನ್ಯಾಯಾಲಯ ಜೊತೆಗೆ ಸಂತ್ರಸ್ತೆ ಹಾಗೂ ಆಕೆಯ ಕುಟುಂಬದ ಜೀವ ಮತ್ತು ಸ್ವಾತಂತ್ರ್ಯ ರಕ್ಷಿಸುವುದಕ್ಕಾಗಿ ಸುರಕ್ಷಿತ ವಾಸಸ್ಥಳ ಒದಗಿಸುವಂತೆ ಮತ್ತು ಅವರ ಗುರುತು ಬದಲಾವಣೆ ಮಾಡುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬಿಐಗೆ ನಿರ್ದೇಶಿಸಿತ್ತು.

ಗರಿಷ್ಠ ಶಿಕ್ಷೆ ವಿಧಿಸುವ ವೇಳೆ, ಯಾವುದೇ ಸಡಿಲಿಕೆ ನೀಡುವ ಸಂದರ್ಭಗಳು ಇಲ್ಲವೆಂದು ವಿಚಾರಣಾ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಸೇವಕರಾಗಿ ಜನರ ನಂಬಿಕೆಯನ್ನು ಸೆಂಗರ್ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಒಂದೇ ಒಂದು ಅಮಾನವೀಯ ಕೃತ್ಯವೇ ಆ ನಂಬಿಕೆ ದ್ರೋಹಕ್ಕೆ ಸಾಕಷ್ಟಾಗುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ಆ ತೀರ್ಪನ್ನು ಪ್ರಶ್ನಿಸಿರುವ ಮೇಲ್ಮನವಿ ಇನ್ನೂ ಬಾಕಿ ಇದೆ.

Also Read
ಉನ್ನಾವೊ ಸಂತ್ರಸ್ತೆಯ ತಂದೆ ಕಸ್ಟಡಿ ಸಾವು: ಮಾಜಿ ಶಾಸಕ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು

ಪ್ರಕರಣ ಮತ್ತೊಂದು ವಿವಾದಕ್ಕೂ ಕಾರಣವಾಗಿತ್ತು. ಸಂತ್ರಸ್ತೆ ಚಲಿಸುತ್ತಿದ್ದ ಕಾರಿಗೆ, ನಂಬರ್‌ ಪ್ಲೇಟ್‌ ಇಲ್ಲದ ಲಾರಿಯೊಂದು 2018ರಲ್ಲಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರವಾಗಿ ಗಾಯಗೊಂಡರೆ ಆಕೆಯ ಇಬ್ಬರು ಚಿಕ್ಕಮ್ಮಂದಿರು ಇಹಲೋಕ ತ್ಯಜಿಸಿದರು. ಕೆಲ ದಿನಗಳ ಬಳಿಕ ವಕೀಲ ಕೂಡ ಮೃತಪಟ್ಟರು. ಘಟನೆಯ ಹಿಂದೆ ಸೆಂಗರ್‌ ಕೈವಾಡ ಇದೆ ಎಂದು ವಕೀಲರ ಪತ್ನಿ ದೂರಿದ್ದರು.

ಅಪಘಾತಕ್ಕೆ ಸೆಂಗರ್ ಅವರೇ ಕಾರಣಕರ್ತರು ಎಂಬುದಕ್ಕೆ ಯಾವುದೇ ಪ್ರಾಥಮಿಕ ಪುರಾವೆಗಳು ದೊರೆಯದ ಕಾರಣ ದೆಹಲಿ ನ್ಯಾಯಾಲಯ ಅವರನ್ನು ಡಿಸೆಂಬರ್ 2021ರಲ್ಲಿ ಖುಲಾಸೆಗೊಳಿಸಿತ್ತು.

Kannada Bar & Bench
kannada.barandbench.com