

ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶ್ರವಣ ದೋಷವುಳ್ಳ ಕ್ರೀಡಾಪಟುಗಳನ್ನು ಪರಿಗಣಿಸಲು ಸೂಕ್ತ ನಿಯಮಾವಳಿ ರೂಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ [ವೀರೇಂದ್ರ ಸಿಂಗ್ ಮತ್ತಿತರರು ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]̤
ಮಾನದಂಡಗಳನ್ನು ರೂಪಿಸುವವರೆಗೆ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಇರುವ ಗಡುವನ್ನು ವಿಸ್ತರಿಸುವಂತೆ ನ್ಯಾಯಮೂರ್ತಿ ಸಚಿನ್ ದತ್ತ ಸರ್ಕಾರಕ್ಕೆ ನಿರ್ದೇಶನ ನೀಡಿದರು.
ಶ್ರವಣ ದೋಷವುಳ್ಳ ಕ್ರೀಡಾಪಟುಗಳನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಪರಿಗಣಿಸಲು ಸೂಕ್ತ ಮಾನದಂಡ ರೂಪಿಸಲು ಸರ್ಕಾರ ಪರಿಗಣಿಸಬೇಕು. ಈ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಬೇಕು. ಅಗತ್ಯ ಅರ್ಜಿ ಸಲ್ಲಿಸಲು ಇರುವ ಗಡುವನ್ನು ವಿಸ್ತರಿಸಬೇಕು ಎಂದು ನ್ಯಾಯಾಲಯದ ಆದೇಶ ವಿವರಿಸಿದೆ.
ಶ್ರವಣ ದೋಷವುಳ್ಳ ಮತ್ತು ಪ್ಯಾರಾ-ಅಥ್ಲೀಟ್ಗಳ (ಅಂಗವೈಕಲ್ಯ ಇರುವ ಕ್ರೀಡಾಪಟುಗಳು) ನಡುವೆ ಸಮಾನತೆ ಕೋರಿ ಶ್ರವಣ ದೋಷವುಳ್ಳ ಕ್ರೀಡಾಪಟು ವೀರೇಂದ್ರ ಸಿಂಗ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ನೀಡಿದೆ.
2025 ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡುವುದಕ್ಕಾಗಿನ ಮಾನದಂಡಗಳನ್ನು ರೂಪಿಸುವಾಗ, ಶ್ರವಣ ದೋಷವುಳ್ಳ ಕ್ರೀಡಾಪಟುಗಳಿಗೆ ಯಾವುದೇ ವಿನಾಯಿತಿ ಇಲ್ಲ ಎಂದು ಅರ್ಜಿ ದೂರಿತ್ತು.
ಮಾನದಂಡಗಳನ್ನು ಗಮನಿಸಿದ ನ್ಯಾಯಾಲಯ, ಶ್ರವಣ ದೋಷವುಳ್ಳ ಕ್ರೀಡಾಪಟುಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅಥವಾ ಪರಿಗಣಿತರಾಗಲು ಯಾವುದೇ ಅವಕಾಶವಿಲ್ಲ. ಇದು ಪ್ಯಾರಾ ಕ್ರೀಡಾಪಟುಗಳಿಗಿಂತ ಶ್ರವಣ ದೋಷವುಳ್ಳ ಕ್ರೀಡಾಪಟುಗಳ ವಿರುದ್ಧ ತಾರತಮ್ಯವನ್ನುಂಟು ಮಾಡುತ್ತದೆ ಎಂದಿತು.
ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016ರಲ್ಲಿ ಶ್ರವಣ ದೋಷ ಹೊಂದಿರುವವರನ್ನು ಮತ್ತು ದೇಹ ಸಂಬಂಧಿತ/ಚಲನ ದೋಷ ಹೊಂದಿರುವವರನ್ನು ಸಮಾನವಾಗಿ ಪರಿಗಣಿಸಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕ್ರೀಡಾ ರತ್ನ ಪ್ರಶಸ್ತಿ ಮಾರ್ಗಸೂಚಿಗಳು ಶ್ರವಣ ದೋಷವುಳ್ಳು ವ್ಯಕ್ತಿಗಳನ್ನು ಹೊರಗಿಟ್ಟಿರುವುದು ತಾರತಮ್ಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಅದು ಹೇಳಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಅಜಯ್ ವರ್ಮಾ, ಸ್ಮೃತಿ ಎಸ್ ನಾಯರ್ ಮತ್ತು ಸ್ನೇಹಾ ಸೆಜ್ವಾಲ್ ವಾದ ಮಂಡಿಸಿದರು. ಕೇಂದ್ರ ಸರ್ಕಾರವನ್ನು ಸ್ಥಾಯಿ ವಕೀಲ (ಸಿಜಿಎಸ್ಸಿ) ಪ್ರೇಮ್ತೋಷ್ ಮಿಶ್ರಾ, ವಕೀಲರಾದ ಪ್ರಾರಬ್ಧ್ ತಿವಾರಿ ಹಾಗೂ ಅನುರಾಗ್ ತಿವಾರಿ ಪ್ರತಿನಿಧಿಸಿದ್ದರು.