

ಪಟಿಯಾಲ ಹೌಸ್ ಕೋರ್ಟ್ನಲ್ಲಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ ನಡೆಸಿದ ವಕೀಲನನ್ನು ಗೂಂಡಾ ಎಂದು ಕರೆದಿದ್ದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಟೈಮ್ಸ್ ಸಮೂಹ ಸಂಸ್ಥೆಯ ಸಮೀರ್ ಜೈನ್ ಮತ್ತು ವಿನೀತ್ ಜೈನ್ ವಿರುದ್ಧದ ಪ್ರಕರಣಗಳನ್ನು ಕೂಡ ರದ್ದುಗೊಳಿಸಿದರು.
ಫೆಬ್ರವರಿ 2016 ರಲ್ಲಿ, ಅರ್ನಾಬ್ ಗೋಸ್ವಾಮಿ ನಡೆಸಿಕೊಟ್ಟ ಟೈಮ್ಸ್ ನೌ ವಾಹಿನಿಯ ಟಿವಿ ಚರ್ಚೆಯ ಸಂದರ್ಭದಲ್ಲಿ, ವಕೀಲ ವಿಕ್ರಮ್ ಸಿಂಗ್ ಚೌಹಾಣ್ ಅವರನ್ನು ಗೂಂಡಾ ಎಂದು ಕರೆದಿದ್ದರು.
ದೆಹಲಿಯ ಜವಹಾರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಜೆಎನ್ಯು ವಿದ್ಯಾರ್ಥಿಯಾಗಿದ್ದ ಕನ್ಹಯ್ಯ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ನ್ಯಾಯಾಲಯದ ಆವರಣದಲ್ಲಿ ಕನ್ಹಯ್ಯಾ ಮತ್ತು ಪತ್ರಕರ್ತರ ಮೇಲೆ ನಡೆದ ದಾಳಿಯಲ್ಲಿ ಚೌಹಾಣ್ ಪಾತ್ರ ವಹಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ ಚೌಹಾಣ್ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದರು. ಗೋಸ್ವಾಮಿಯವರ ಹೇಳಿಕೆಗಳು ಆಧಾರರಹಿತ ಮತ್ತು ಮಾನಹಾನಿಕರವಾಗಿದ್ದು ತಮ್ಮ ವರ್ಚಸ್ಸು ಮತ್ತು ವೃತ್ತಿಜೀವನ ನಾಶಮಾಡುವ ಗುರಿ ಹೊಂದಿದೆ ಎಂದು ದೂರಿದ್ದರು. ಅವರು ಟೈಮ್ಸ್ ಸಮೂಹದ ಸಮೀರ್ ಜೈನ್ ಮತ್ತು ವಿನೀತ್ ಜೈನ್ ಮತ್ತು ಇತರ ಅಧಿಕಾರಿಗಳ ವಿರುದ್ಧವೂ ಮೊಕದ್ದಮೆ ಹೂಡಿದ್ದರು.
ಅರ್ನಾಬ್ ಗೋಸ್ವಾಮಿ ಪರ ಹಿರಿಯ ವಕೀಲೆ ಮಾಳವಿಕಾ ತ್ರಿವೇದಿ ಮತ್ತವರ ತಂಡ ವಾದ ಮಂಡಿಸಿತು. ಸಮೀರ್ ಜೈನ್ ಮತ್ತು ವಿನಿತ್ ಜೈನ್ ಅವರನ್ನು ಹಿರಿಯ ವಕೀಲ ಪವನ್ ನಾರಂಗ್ ಮತ್ತವರ ತಂಡ ಪ್ರತಿನಿಧಿಸಿತ್ತು.