
ಎರಡು ಅನಾಥಾಶ್ರಮಗಳಿಗೆ ಉತ್ತಮ ಗುಣಮಟ್ಟದ ಬರ್ಗರ್ ತಿನಿಸನ್ನು ನೀಡಬೇಕು ಎಂಬ ಷರತ್ತಿನ ಮೇಲೆ ಆರೋಪಿಯೊಬ್ಬನ ವಿರುದ್ಧ ದಾಖಲಾಗಿದ್ದ ಅತ್ಯಾಚಾರಕ್ಕೆ ಸಂಬಂಧಿಸಿದ ಎಫ್ಐಆರ್ ಅನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
ಆರೋಪಿ ಮತ್ತು ದೂರುದಾರೆ ಈ ಹಿಂದೆ ವಿವಾಹವಾಗಿದ್ದು, ವ್ಯಾಜ್ಯ ವೈವಾಹಿಕ ಸ್ವರೂಪದ್ದಾಗಿದೆ; ಪ್ರಸಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ರಾಜಿಗೆ ಮುಂದಾಗಿದ್ದಾರೆ ಗಮನಿಸಿದ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಎಫ್ಐಆರ್ ರದ್ದುಗೊಳಿಸಿದರು.
"ಪ್ರಸ್ತುತ ಪ್ರಕರಣದಲ್ಲಿ, ಪ್ರತಿವಾದಿ ನಂ.2 ಅರ್ಜಿದಾರರನ್ನು ಮದುವೆಯಾಗಿದ್ದರು. ನಂತರ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಇದಲ್ಲದೆ, ಪ್ರತಿವಾದಿ ನಂ.2 ಸ್ವತಃ ಯಾವುದೇ ಒತ್ತಡ, ಬಲಾತ್ಕಾರವಿಲ್ಲದೆ ತನ್ನ ಸ್ವಇಚ್ಛೆಯಿಂದ ಸಮಸ್ಯೆಗೆ ಅಂತ್ಯ ಹಾಡಲು ಬಯಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿರುವ ಆರೋಪಗಳನ್ನು ರದ್ದುಗೊಳಿಸಬಹುದು" ಎಂದು ನ್ಯಾಯಾಲಯ ಹೇಳಿದೆ.
ಆದರೆ ಎಫ್ಐಆರ್ 2020ರಲ್ಲಿ ದಾಖಲಾಗಿದ್ದು ಪೊಲೀಸ್ ಮತ್ತು ನ್ಯಾಯಾಂಗದ ಸಮಯವನ್ನು ಸಾಕಷ್ಟು ವ್ಯರ್ಥ ಮಾಡಲಾಗಿರುವುದರಿಂದ ಅರ್ಜಿದಾರರು ಸಮಾಜಕ್ಕೆ ಏನನ್ನಾದರೂ ಒಳಿತು ಮಾಡಬೇಕು ಎಂದು ನ್ಯಾ. ಸಿಂಗ್ ತಿಳಿಸಿದರು.
ಅರ್ಜಿದಾರರು ದೆಹಲಿ ಸಮೀಪದ ನೋಯ್ಡಾ ಮತ್ತು ಮಯೂರ್ ವಿಹಾರ್ನಲ್ಲಿ ಬರ್ಗರ್ ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದಾರೆ ಎಂಬ ವಿಚಾರ ಅರಿತ ನ್ಯಾಯಾಲಯ ಕನಿಷ್ಠ 100 ಮಕ್ಕಳಿರುವ ಎರಡು ಅನಾಥಾಶ್ರಮಗಳಿಗೆ ಉತ್ತಮ ಗುಣಮಟ್ಟದ ಬರ್ಗರ್ಗಳನ್ನು ನೀಡಬೇಕು ಎಂದು ಆದೇಶಿಸಿತು.
ಕೋವಿಡ್ ಮಾನದಂಡಗಳನ್ನು ಅನುಸರಿಸಿ ಸುರಕ್ಷಿತ ಮತ್ತು ಸ್ವಚ್ಛ ವಾತಾವರಣದಲ್ಲಿ ಬರ್ಗರ್ಗಳನ್ನು ಚೆನ್ನಾಗಿ ತಯಾರಿಸಲಾಗಿದೆಯೇ ಮತ್ತು ಅದನ್ನು ಉತ್ತಮ ರೀತಿಯಲ್ಲಿ ಬೇಯಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಪೊಲೀಸರಿಗೆ ಪೀಠ ಇದೇ ವೇಳೆ ಸೂಚಿಸಿತು.