
ತಿರುವನಂತಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಲೋಕಸಭಾ ಚುನಾವಣೆಯ ವೇಳೆ ತಮ್ಮ ವಿರುದ್ಙ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿ ಬಿಜೆಪಿಯ ಪರಾಜಿತ ಪ್ರತಿಸ್ಪರ್ಧಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಸಲ್ಲಿಸಿದ್ದ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತರೂರ್ ಅವರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ನೀಡಿದೆ.
ಚುನಾವಣಾ ಪ್ರಚಾರದ ವೇಳೆ ರಾಜೀವ್ ಚಂದ್ರಶೇಖರ್ ಮತದಾರರಿಗೆ ಹಣದ ಆಮಿಷವೊಡ್ಡಿದ್ದರು ಎಂದು ಶಶಿ ತರೂರ್ ಅವರು ಟಿವಿ ಸಂದರ್ಶನವೊಂದರಲ್ಲಿ ಆರೋಪಿಸಿದ ಕಾರಣಕ್ಕೆ ಈ ದಾವೆ ಹೂಡಲಾಗಿತ್ತು.
ಕಳೆದ ಲೋಕಸಭಾ ಚುನಾವಣೆ ವೇಳೆ ಶಶಿ ತರೂರ್ ತಮ್ಮ ವಿರುದ್ಙ ಸುಳ್ಳು ಆರೋಪ ಮಾಡಿದ್ದು ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸುವುದರ ಜೊತೆಗೆ ₹ 10 ಕೋಟಿ ಪರಿಹಾರ ನೀಡಬೇಕೆಂದು ಕೋರಿದ್ದರು.
ಚಂದ್ರಶೇಖರ್ ಅವರ ಪರವಾಗಿ ಮಂಡಿಸಲಾದ ವಾದ ಆಲಿಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಎಲ್ಲಾ ಅನುಮತಿಸುವ ವಿಧಾನಗಳ ಮೂಲಕ ನೋಟಿಸ್ ನೀಡಿದರು. ಏಪ್ರಿಲ್ 28, 2025 ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದರು.
ಏಪ್ರಿಲ್ 2024 ರಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ವಿವಿಧ ಸಾರ್ವಜನಿಕ ವೇದಿಕೆಗಳಲ್ಲಿ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆ ನೀಡಿ ತಮ್ಮ ವೃತ್ತಿಪರತೆ ಮತ್ತು ವೈಯಕ್ತಿಕ ಪ್ರತಿಷ್ಠೆಗೆ ಶಶಿ ತರೂರ್ ತೀವ್ರ ಹಾನಿ ಉಂಟುಮಾಡಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ದೂರಿದ್ದರು.
ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಸುದ್ದಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ತರೂರ್ ಅವರ ಹೇಳಿಕೆ ತಮ್ಮ ಪ್ರತಿಷ್ಠೆಗೆ ಮಸಿ ಬಳಿದಿದ್ದಲ್ಲದೆ ಚುನಾವಣೆಯಲ್ಲಿ ತನ್ನ ಸೋಲಿಗೆ ಕಾರಣವಾಯಿತು ಎಂದು ದಾವೆಯಲ್ಲಿ ಅವರು ತಿಳಿಸಿದ್ದರು.