ಸರ್ಕಾರಕ್ಕೂ ಕಾರ್ಮಿಕ ಕಾಯಿದೆ ಅನ್ವಯವೇ? ಬಿಡಬ್ಲ್ಯೂಎಸ್‌ಎಸ್‌ಬಿ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ರಚಿಸಿದ ಸುಪ್ರೀಂ

ಒಂಬತ್ತು ನ್ಯಾಯಮೂರ್ತಿಗಳ ಪೀಠ ಮಾರ್ಚ್ 17ರಂದು ವಿಚಾರಣೆ ಆರಂಭಿಸಿ, ಮುಂದಿನ ದಿನವೇ ಅದನ್ನು ಪೂರ್ಣಗೊಳಿಸುತ್ತದೆ ಎಂದು ಸಿಜೆಐ ಸೂರ್ಯಕಾಂತ್‌ ತಿಳಿಸಿದರು.
9-judge bench, Supreme Court
9-judge bench, Supreme Court
Published on

ಕೈಗಾರಿಕಾ ಸಂಬಂಧ ಸಂಹಿತೆ, 2020 ಮತ್ತು ಅದರ ಹಿಂದಿನ ಕಾಯಿದೆಯಾದ ಕೈಗಾರಿಕಾ ವ್ಯಾಜ್ಯ ಕಾಯಿದೆ – 1947ರ ಅಡಿಯಲ್ಲಿ "ಕೈಗಾರಿಕೆ" ಎಂಬ ಪದದ ವ್ಯಾಖ್ಯಾನ ನಿರ್ಧರಿಸುವುದಕ್ಕಾಗಿ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸುವುದಾಗಿ ಸುಪ್ರಿಂ ಕೋರ್ಟ್‌ ಸೋಮವಾರ ತಿಳಿಸಿದೆ.

ಒಂಬತ್ತು ನ್ಯಾಯಮೂರ್ತಿಗಳ ಪೀಠ ಮಾರ್ಚ್ 17ರಂದು ವಿಚಾರಣೆ ಆರಂಭಿಸಿ, ಮುಂದಿನ ದಿನವೇ ಅದನ್ನು ಪೂರ್ಣಗೊಳಿಸುತ್ತದೆ ಎಂದು ಸಿಜೆಐ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ ಪಂಚೋಲಿ ಅವರಿದ್ದ ಪೀಠ ಸೂಚಿಸಿದೆ.

Also Read
ಎಸ್‌ಐಆರ್‌ಗೆ ಅಡ್ಡಿ ಸಲ್ಲದು: ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಆರ್‌ ರಾಜಪ್ಪ ಮತ್ತು ಇತರರು ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 1975ರಲ್ಲಿ ಏಳು ಸದಸ್ಯರ ಪೀಠ ನೀಡಿದ್ದ ತೀರ್ಪಿನ ನಿಖರತೆಯನ್ನು ಸಾಂವಿಧಾನಿಕ ಪೀಠ ನಿರ್ಧರಿಸಲಿದೆ. ಸುಪ್ರೀಂ ಕೋರ್ಟ್‌ ಬಗೆಹರಿಸಬೇಕಾದ ಕಾನೂನು ಪ್ರಶ್ನೆಗಳು ಇಂತಿವೆ:

  • ಬಿಡಬ್ಲ್ಯೂಎಸ್‌ಎಸ್‌ಬಿ ಪ್ರಕರಣದಲ್ಲಿ ನ್ಯಾಯಮೂರ್ತಿ ವಿ ಆರ್‌ ಕೃಷ್ಣ ಅಯ್ಯರ್‌ ಅವರು ಒಂದು ಸಂಸ್ಥೆ ‘ಕೈಗಾರಿಕೆ’ ವ್ಯಾಖ್ಯಾನದೊಳಗೆ ಬರುತ್ತದೆಯೇ ಎಂಬುದನ್ನು ಅರಿಯಲು ಪ್ಯಾರಾ 140ರಿಂದ 144ರವರೆಗೆ ನಿರ್ದಿಷ್ಟಪಡಿಸಿರುವ ಪರೀಕ್ಷೆಯು ಸೂಕ್ತ ಕಾನೂನನ್ನು ರೂಪಿಸಿದೆಯೇ?

  • ಕೈಗಾರಿಕಾ ವ್ಯಾಜ್ಯ (ತಿದ್ದುಪಡಿ) ಕಾಯಿದೆ, 1982 ಜಾರಿಗೆ ಬಂದಿಲ್ಲದಿರುವಂತಹ ಸ್ಥಿತಿ ಹಾಗೂ ಹೊಸ ಕೈಗಾರಿಕಾ ಸಂಹಿತೆ ಇವುಗಳು “ಕೈಗಾರಿಕೆ” ಎಂಬ ಪದದ ವ್ಯಾಖ್ಯಾನದ ಮೇಲೆ ಯಾವುದೇ ಕಾನೂನುಬದ್ಧ ಪರಿಣಾಮ ಉಂಟುಮಾಡಿದೆಯೇ?

  • ಸರ್ಕಾರದ ಇಲಾಖೆಗಳು ಅಥವಾ ಅವುಗಳ ಅಂಗಸಂಸ್ಥೆಗಳು ಕೈಗೊಂಡಿರುವ ಸಮಾಜ ಕಲ್ಯಾಣ ಚಟುವಟಿಕೆಗಳು ಅಥವಾ ಯೋಜನೆಗಳನ್ನು ಕೈಗಾರಿಕಾ ವ್ಯಾಜ್ಯ ಕಾಯಿದೆ, 1947 ಅಡಿಯಲ್ಲಿ ಕೈಗಾರಿಕಾ ಚಟುವಟಿಕೆಗಳೆಂದು ಪರಿಗಣಿಸಬಹುದೇ?

  • ಸರ್ಕಾರದ ಯಾವ ಚಟುವಟಿಕೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ? ಮತ್ತು ಅವುಗಳು ಕೈಗಾರಿಕಾ ವ್ಯಾಜ್ಯ ಕಾಯಿದೆಯ ಸೆಕ್ಷನ್ 2(j) ವ್ಯಾಪ್ತಿಯಿಂದ ಹೊರಗೆ ಉಳಿಯಬಹುದೇ?

Also Read
ಸುಪ್ರೀಂ ನಿರ್ದೇಶನದ ಹೊರತಾಗಿಯೂ ಬುಲ್ಡೋಜರ್‌ ನ್ಯಾಯ: ಉತ್ತರ ಪ್ರದೇಶ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಛೀಮಾರಿ

ಪ್ರಕರಣ ನಿರ್ವಹಣೆಯ ಪ್ರಮುಖ ಹಂತ ಪೂರ್ಣಗೊಂಡಿದ್ದು, ಪಕ್ಷಕಾರರು 2026ರ ಫೆಬ್ರವರಿ 28ರೊಳಗೆ ಲಿಖಿತ ವಾದ ನವೀಕರಿಸಲು ಅವಕಾಶ ನೀಡಲಾಗಿದೆ. ಅರ್ಜಿದಾರರಿಗೆ 3 ಗಂಟೆಗಳ ವಾದ ಸಮಯ ಹಾಗೂ 1 ಗಂಟೆ ಪ್ರತಿವಾದಕ್ಕೆ  ಅವಕಾಶ ನೀಡಲಾಗಿದ್ದು, ಎಲ್ಲಾ ವಾದಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವಂತೆ ನೋಡ್‌ಲ್ ವಕೀಲರು ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Kannada Bar & Bench
kannada.barandbench.com