
ಡ್ರೋನ್ ಬಳಸಿಕೊಂಡು ಭಾರತ-ಪಾಕಿಸ್ತಾನ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ [ರಾಬರ್ಟ್ ಮಸಿಹ್ ಮತ್ತು ಪಂಜಾಬ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ ].
ಇಂತಹ ಕೃತ್ಯಗಳ ಹೆಚ್ಚಳ ರಾಷ್ಟ್ರದ ಭದ್ರತೆಗೆ ಮತ್ತು ಯುವಜನಾಂಗದ ಭವಿಷ್ಯಕ್ಕೆ ಗಂಭೀರ ಬೆದರಿಕೆ ಒಡ್ಡುತ್ತಿವೆ ಎಂದು ನ್ಯಾಯಮೂರ್ತಿ ರೂಪಿಂದರ್ಜಿತ್ ಚಹಲ್ ಹೇಳಿದರು.
“ಇತ್ತೀಚಿನ ದಿನಗಳಲ್ಲಿ ಡ್ರೋನ್ಗಳ ಮೂಲಕ ಅಕ್ರಮ ಮಾದಕವಸ್ತುಗಳ ಕಳ್ಳಸಾಗಣೆ ದಿನೇ ದಿನೇ ಹೆಚ್ಚುತ್ತಿದೆ. ಪಾಕಿಸ್ತಾನದಿಂದ ಭಾರತಕ್ಕೆ ಡ್ರೋನ್ಗಳ ಮೂಲಕ ನಡೆಯುತ್ತಿರುವ ಈ ರೀತಿಯ ಕಳ್ಳಸಾಗಣೆ ಪ್ರಕರಣಗಳು ರಾಷ್ಟ್ರದ ಭದ್ರತೆಗೂ ಹಾಗೂ ಯುವಜನಾಂಗದ ಭವಿಷ್ಯಕ್ಕೂ ಗಂಭೀರ ಅಪಾಯ ಉಂಟುಮಾಡುತ್ತವೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.
ಪಾಕಿಸ್ತಾನದಿಂದ ಭಾರತಕ್ಕೆ ಡ್ರೋನ್ಗಳನ್ನು ಬಳಸಿಕೊಂಡು ಹೆರಾಯಿನ್ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಗಡಿಯುದ್ದಕ್ಕೂ ಕಳ್ಳಸಾಗಣೆ ಮಾಡಲಾದ ಮಾದಕವಸ್ತುಗಳಿಗೆ ಅರ್ಜಿದಾರರೇ ಹಣ ಪಾವತಿಸಿದ್ದಾನೆ ಎಂದು ಪ್ರಕರಣದ ಸಹ ಆರೋಪಿ ಮಾಹಿತಿ ನೀಡಿದ್ದ. ಆದರೆ ಅರ್ಜಿದಾರ ಆರೋಪಿಯು ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ದೂರಿದ್ದ. ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದರಿಂದ ಆತ ಹೈಕೋರ್ಟ್ ಮೆಟ್ಟಿಲೇರಿದ್ದ.
ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಆರೋಪಿಯ ವಾದವನ್ನು ಬಲವಾಗಿ ಅಲ್ಲಗಳೆದರು. ಆರೋಪಿ ಡ್ರೋನ್ಗಳ ಮೂಲಕ ಹೆರಾಯಿನ್ ಕಳ್ಳಸಾಗಣೆ ಮಾಡುವ ದೊಡ್ಡ ಜಾಲದ ಭಾಗವಾಗಿದ್ದಾರೆ. ಆತನ ನಿಖರ ಪಾತ್ರ ಪರಿಶೀಲನೆಗಾಗಿ ವಶಕ್ಕೆ ಪಡೆಯುವುದು ಅಗತ್ಯ. ಆತನ ವಿರುದ್ಧ ಅನೇಕ ಪ್ರಕರಣಗಳಿದ್ದು ಆತ ಒಬ್ಬ ಘೋಷಿತ ಅಪರಾಧಿ ಎಂದು ವಾದಿಸಿದರು.
ಆರೋಪಗಳು ಗಂಭೀರವಾಗಿರುವುದರಿಂದ ತನಿಖೆಗೆ ಸಮಯಾವಕಾಶ ಅಗತ್ಯವಿದೆ ಎಂದ ನ್ಯಾಯಾಲಯ ಆತನಿಗೆ ಜಾಮೀನು ನಿರಾಕರಿಸಿತು.