ಗಣಿಗಾರಿಕೆಗೆ ಅರಣ್ಯ ಭೂಮಿ ಮಂಜೂರು ಪ್ರಕರಣ: ತನಿಖಾಧಿಕಾರಿಯಾಗಿ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕಟಾರಿಯಾ ನೇಮಕ

“ಇದು ಉದಾಹರಣೆಯಷ್ಟೆ. ಕನಿಷ್ಠ ಅವರ (ಸರ್ಕಾರ) ಕೆಲಸದ ವಿಧಾನದಲ್ಲಿ ಬದಲಾವಣೆಯಾಗಲಿ” ಎಂದು ಮಾರ್ಮಿಕವಾಗಿ ನುಡಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ.
Karnataka High Court
Karnataka High Court

ರಾಜ್ಯದಾದ್ಯಂತ ಅರಣ್ಯ ಅಥವಾ ಬೇರಾವುದೇ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದರ ಕುರಿತು ತನಿಖೆ ನಡೆಸಿ, ವಿಸ್ತೃತ ವರದಿ ಸಲ್ಲಿಸಲು ಸಾರಿಗೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಗುರುವಾರ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಂಕೆರೆ ಗ್ರಾಮದಲ್ಲಿನ ಸರ್ವೆ ನಂ. 12 ಮತ್ತು 14ರಲ್ಲಿನ ಭೂಮಿಯು ಅರಣ್ಯ ಅಥವಾ ಕಂದಾಯ ಭೂಮಿಯೋ ಎಂಬುದನ್ನು ತಿಳಿಯಲು ಪ್ರತಿವಾದಿಗಳ ಜಂಟಿ ಸರ್ವೆಗೆ ಆದೇಶಿಸಬೇಕು ಎಂದು ವಾಣಿ ವಿಲಾಸ್‌ ಸಿಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಪವನ್‌ ರಾಮಸ್ವಾಮಿ ಅವರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಕಳೆದ ಫೆಬ್ರವರಿ 14ರ ಆದೇಶದ ಪಾಲನೆಯ ಭಾಗವಾಗಿ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿರುವ ಕುರಿತು ರಾಜ್ಯ ಸರ್ಕಾರ ಮೆಮೊ ಸಲ್ಲಿಸಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಂಕೆರೆ ಗ್ರಾಮದಲ್ಲಿನ ಸರ್ವೆ ನಂ. 12 ಮತ್ತು 14ರಲ್ಲಿನ ಭೂಮಿಯು ಅರಣ್ಯ ಅಥವಾ ಕಂದಾಯ ಭೂಮಿಯೋ ಎಂಬುದಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ರಾಜೇಂದ್ರ ಕಟಾರಿಯಾ ಅವರು ಜೂನ್‌ ಮೊದಲ ವಾರದಲ್ಲಿ ಮೊದಲಿಗೆ ವರದಿ ಸಲ್ಲಿಸಬೇಕು. ಆ ಬಳಿಕ, ರಾಜ್ಯದ ವಿವಿಧೆಡೆ ಅರಣ್ಯ ಅಥವಾ ಬೇರಾವುದೇ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದರ ಕುರಿತು ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು” ಎಂದು ಪೀಠವು ಆದೇಶ ಮಾಡಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಂಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 10, 12, 13, 14, 15, 17/2, 18 ಮತ್ತು 19 ರಲ್ಲಿನ 525 ಎಕರೆ ಭೂಮಿಯನ್ನು 2002ರ ಫೆಬ್ರವರಿ 4ರಂದು ವಾಣಿ ವಿಲಾಸ್‌ ಸಿಮೆಂಟ್ಸ್‌ಗೆ ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿತ್ತು. 2010ರ ಜನವರಿ 30ರಂದು ಚಿತ್ರದುರ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಸರ್ವೆ ನಂ. 12 ಮತ್ತು 14ರಲ್ಲಿನ ಭೂಮಿಯು ಜಾನಕಲ್‌ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡಲಿದ್ದು, ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿ ಅನುಮತಿ ಪಡೆಯುವವರೆವಿಗೂ ಗಣಿಗಾರಿಕೆ ನಡೆಸಬಾರದು ಎಂದು ಆದೇಶ ಮಾಡಿರುವುದರ ಕುರಿತು ಮೊದಲಿಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಪೀಠ ಆದೇಶ ಮಾಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ವಕೀಲರು ನ್ಯಾಯಾಲಯದ ಹಿಂದಿನ ಆದೇಶ ಪಾಲನೆಯ ಭಾಗವಾಗಿ ಕಟಾರಿಯಾ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ವರದಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಬೇಕು” ಎಂದರು.

ಆಗ ಮಧ್ಯಪ್ರವೇಶಿಸಿದ ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು “ವಿಚಾರಣೆಗೆ ಹಾಜರಾಗುವಂತೆ ನಮಗೆ ನೋಟಿಸ್‌ ಜಾರಿ ಮಾಡಲಾಗಿದೆ. ನಾವು ವಿಚಾರಣೆಯಲ್ಲಿ ಭಾಗಿಯಾಗುತ್ತೇವೆ. ರಾಜ್ಯದಾದ್ಯಂತ ತನಿಖೆ ನಡೆಸಲು ತನಿಖಾಧಿಕಾರಿಗೆ ಹೆಚ್ಚಿನ ಸಮಯಬೇಕಾಗಬಹುದು. ಹೀಗಾಗಿ, ನಮ್ಮ ಪ್ರಕರಣಕ್ಕೆ ಸೀಮಿತವಾಗಿ ಮೊದಲು ವರದಿ ಸಲ್ಲಿಸಲು ತನಿಖಾಧಿಕಾರಿಗೆ ಸೂಚಿಸಬೇಕು” ಎಂದರು ಕೋರಿದರು.

ಆಗ ನ್ಯಾ. ಕೃಷ್ಣ ಕುಮಾರ್‌ ಅವರು ಹುಯಿಲಗೋಳ ಅವರನ್ನು ಕುರಿತು “ಹಾಲಿ ಪ್ರಕರಣವನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿ ಎಂದು ಪರಿಗಣಿಸಿ, ನಿಮ್ಮನ್ನು ಪ್ರತಿವಾದಿಯನ್ನಾಗಿಸುವುದು ಸೂಕ್ತ” ಎಂದು ನಕ್ಕರು.

ಹುಯಿಲಗೋಳ ಅವರ ವಾದವನ್ನು ವಿಸ್ತರಿಸಿದ ಸರ್ಕಾರದ ವಕೀಲರು ಮೂರು ಇಲಾಖೆಗಳಲ್ಲಿ ತನಿಖೆ ನಡೆಸಬೇಕಿದೆ. ಇದಕ್ಕೆ ಸಮಯಾವಕಾಶ ಬೇಕಿದೆ ಎಂದು ಕೋರಿದರು. ಇದಕ್ಕೆ ಸಿಜೆ ಅವರು “ಇದು ಉದಾಹರಣೆಯಷ್ಟೆ.ಕನಿಷ್ಠ ಅವರ (ಸರ್ಕಾರ) ಕೆಲಸದ ವಿಧಾನದಲ್ಲಿ ಬದಲಾವಣೆಯಾಗಲಿ” ಎಂದು ಮಾರ್ಮಿಕವಾಗಿ ನುಡಿದರು.

Also Read
ಗಣಿಗಾರಿಕೆಗೆ ಅರಣ್ಯ ಭೂಮಿ ಮಂಜೂರು: ಸಿಬಿಐ ತನಿಖೆಗೆ ಆದೇಶಿಸುವುದಾಗಿ ಹೈಕೋರ್ಟ್‌ ಹೇಳಿದ್ದೇಕೆ?

ಮೀಸಲು ಅರಣ್ಯ ಭೂಮಿ ಎಂದು ಗೊತ್ತಿದ್ದರೂ ಅದನ್ನು ಗಣಿಗಾರಿಕೆ ನಡೆಸಲು ಗುತ್ತಿಗೆ (ಲೀಸ್‌) ನೀಡುವ ಮೂಲಕ ಪ್ರಮಾದ ಎಸಗಲಾಗಿದೆ. ಹೀಗಿದ್ದೂ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲವೇಕೆ? ಹೀಗಾಗಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಒಪ್ಪಿಸುತ್ತೇವೆ ಎಂದು ಪೀಠವು ಕಳೆದ ವಿಚಾರಣೆಯಲ್ಲಿ ಗುಡುಗಿತ್ತು.

“ರಾಜ್ಯ ಸರ್ಕಾರವು ಅಧಿಕಾರಿಗಳ ಪರವಾಗಿದೆಯೋ ಅಥವಾ ಅರ್ಜಿದಾರರ ಪರವಾಗಿದೆಯೋ? ಈ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ. ಯಾರಿಗೆ ಹೇಗೆ ಸಂಬಂಧವಿದೆ? ಅರಣ್ಯ ಭೂಮಿಯನ್ನು ಹೇಗೆ ಗುತ್ತಿಗೆಗೆ ಪಡೆಯಲಾಗಿದೆ? ಇದರ ಹಿಂದೆ ಯಾರೆಲ್ಲರ ಪ್ರಭಾವ ಇರಬಹುದು, ಮತ್ತೂ ಏನೇನೋ ಇರಬಹುದು. ಕೆಲವು ದೊಡ್ಡವರು ಸಹ ಇದರಲ್ಲಿ ಭಾಗಿಯಾಗಿರಬಹುದು ಎಂಬುದನ್ನು ತಿಳಿಯಬೇಕಿದೆ," ಎಂದು ಪೀಠ ಹೇಳಿತ್ತು.

Related Stories

No stories found.
Kannada Bar & Bench
kannada.barandbench.com