ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸ್ವತಃ ಬಿಎಸ್‌ವೈ ಸಂತ್ರಸ್ತೆಯ ತಾಯಿಯ ಬಳಿ ಒಪ್ಪಿದ್ದಾರೆ: ಸರ್ಕಾರದ ವಾದ

"ಸ್ವತಃ ಯಡಿಯೂರಪ್ಪ ಅವರು ಬಾಲಕಿಯ ಮೇಲೆ ರೇಪ್‌ ನಡೆದಿದೆಯೊ ಇಲ್ಲವೊ ಎಂದು ಪರಿಶೀಲಿಸಲು ಬಾಲಕಿಯ ಶರ್ಟ್‌ ಒಳಗೆ ಕೈ ಹಾಕಿದ್ದೆ ಎಂದು ಹೇಳಿರುವಾಗ ಅವರ ಈ ಕೃತ್ಯ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವಲ್ಲವೇ?" ಎಂದು ಪ್ರಶ್ನಿಸಿದ ಪ್ರಾಸಿಕ್ಯೂಷನ್.
ex CM B S Yediyurappa and Karnataka HC
ex CM B S Yediyurappa and Karnataka HC
Published on

“ಬಾಲಕಿಯ ಶರ್ಟ್ ಒಳಗೆ ಯಾಕೆ ಕೈ ಹಾಕಿದ್ದಿರಿ ಎಂದು ಕೇಳಿದ್ದಕ್ಕೆ, ಅವಳ ಮೇಲೆ ರೇಪ್‌ ನಡೆದಿದೆಯೊ ಇಲ್ಲವೊ ಎಂಬುದನ್ನು ಚೆಕ್ ಮಾಡಲು ಹಾಕಿದ್ದೆ ಎಂದು ಸ್ವತಃ ಯಡಿಯೂರಪ್ಪನವರೇ ಸಂತ್ರಸ್ತೆ ಯುವತಿಯ ತಾಯಿಗೆ ಹೇಳಿದ್ದಾರೆ. ಹೀಗಾಗಿ, ಯಡಿಯೂರಪ್ಪನವರ ಈ ನಡೆಯಿಂದ ಲೈಂಗಿಕ ದೌರ್ಜನ್ಯ ಎಸಗಿರುವುದು ಸ್ಪಷ್ಟವಾಗಿದೆ” ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣ ರದ್ದುಗೊಳಿಸಲು ಕೋರಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ.ರವಿವರ್ಮ ಕುಮಾರ್‌ ಅವರು “ಸ್ವತಃ ಯಡಿಯೂರಪ್ಪ ಅವರು ಬಾಲಕಿಯ ಮೇಲೆ ರೇಪ್‌ ನಡೆದಿದೆಯೊ ಇಲ್ಲವೊ ಎಂದು ಪರಿಶೀಲಿಸಲು ಬಾಲಕಿಯ ಶರ್ಟ್‌ ಒಳಕೆ ಕೈ ಹಾಕಿದ್ದೆ ಎಂದು ಹೇಳಿರುವಾಗ ಅವರ ಈ ಕೃತ್ಯ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವಲ್ಲವೇ? ಲೈಂಗಿಕ ದೌರ್ಜನ್ಯ ನಡೆದಿರುವುದು ಸ್ಪಷ್ಟವಾಗಿದೆ” ಎಂದು ವಾದಿಸಿದರು.

ಪ್ರೊ. ರವಿವರ್ಮ ಕುಮಾರ್ ಅವರ ವಾದವನ್ನು ಬಲವಾಗಿ ಅಲ್ಲಗಳೆದ ಅರ್ಜಿದಾರರ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಸಂತ್ರಸ್ತ ಬಾಲಕಿಯ ತಾಯಿ ಈ ಪ್ರಕರಣದಲ್ಲಿ ದೂರುದಾರರು (ಈಗ ಮೃತರಾಗಿದ್ದಾರೆ). ಆದರೆ, ಆಕೆ ಇಂತಹುದೇ ದೂರುಗಳನ್ನು ಹಲವು ಅಧಿಕಾರಿಗಳು, ಸಂಬಂಧಿಗಳು, ರಾಜಕಾರಣಿಗಳ ಮೇಲೆ ದಾಖಲಿಸಿದ್ದು ಒಟ್ಟು 53 ದೂರುಗಳನ್ನು ದಾಖಲಿಸಿದ್ದಾರೆ” ಎಂದರು.

“ಒಂದೂವರೆ ತಿಂಗಳ ನಂತರ ಪ್ರಕರಣ ದಾಖಲಿಸಲಾಗಿದೆ. ಯಡಿಯೂರಪ್ಪ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬ ಬಾಲಕಿಯ ಹೇಳಿಕೆ ಇದೆ. ವಾಸ್ತವವನ್ನು ಗಮನಿಸಿದಾಗ, ಹಲವು ಜನರ ಸಮ್ಮುಖದಲ್ಲಿ ಇಂತಹ ಘಟನೆ ನಡೆಯಲು ಸಾಧ್ಯವಿತ್ತೇ? ಬಾಲಕಿಯ ಹೇಳಿಕೆ ಆಧರಿಸಿ ಆರೋಪ ಪಟ್ಟಿ ದಾಖಲಿಸಲಾಗಿದೆ. ಕೆಲವರ ಹೇಳಿಕೆ ಪಡೆದಿದ್ದರೂ ಅವರನ್ನು ಸಾಕ್ಷಿಯಾಗಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ” ಎಂದರು.

ಆಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು “ನ್ಯಾಯಾಲಯ ಈ ಹಂತದಲ್ಲಿ ಬಾಲಕಿಯ ಸಿಆರ್‌ಪಿಸಿ ಸೆಕ್ಷನ್‌ 164ರ ಹೇಳಿಕೆಯನ್ನು ಪರಿಗಣಿಸಬೇಕಲ್ಲವೇ” ಎಂದು ಪ್ರಶ್ನಿಸಿದರು.

Also Read
ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ: ಡಿಸೆಂಬರ್‌ 6ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಇದಕ್ಕೆ ನಾಗೇಶ್‌ ಅವರು “ಯಡಿಯೂರಪ್ಪನವರಿಗೆ 82 ವರ್ಷವಾಗಿದ್ದು, ಕೈ ನಡುಗುತ್ತವೆ. ಲೈಟ್‌ ಸ್ವಿಚ್‌ ಹಾಕಲೂ ನಮಗೆ ಹೇಳುತ್ತಾರೆ ಎಂದು ಅವರ ಮನೆಯ ಕೆಲಸದವರ ಹೇಳಿಕೆಯಿದೆ. ಬಾಲಕಿ ರೂಮಿಗೆ ಹೋಗಿರಲಿಲ್ಲ ಎಂಬ ಸಾಕ್ಷಿಯ ಹೇಳಿಕೆ ಇದೆ. ಅಂಗರಕ್ಷಕರು ಯಡಿಯೂರಪ್ಪನವರ ಆಜುಬಾಜಿನಲ್ಲೇ ಇರುತ್ತಾರೆ. ಅಲ್ಲಿದ್ದ ಎಲ್ಲ ಸಾಕ್ಷಿಗಳೂ ಇಂತಹ ಘಟನೆ ನಡೆದಿಲ್ಲ, ಯಡಿಯೂರಪ್ಪ ಹಾಲ್‌ ಬಿಟ್ಟು ಎಲ್ಲೂ ಹೋಗಿರಲಿಲ್ಲ ಎಂದು ಹೇಳಿದ್ದಾರೆ. ಆದರೂ, ತನಿಖಾಧಿಕಾರಿ ಕೇವಲ ಬಾಲಕಿಯ ಹೇಳಿಕೆ ಆಧರಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಮಹಿಳೆ ದೂರು ನೀಡುವ ಮುನ್ನ ರಾಜಕಾರಣಿಯೊಬ್ಬರನ್ನು ಭೇಟಿ ಮಾಡಿ ಠಾಣೆಗೆ ಬಂದಿದ್ದರು. ಹೀಗಾಗಿ, ಇದರ ಹಿಂದೆ ಕಾಣದ ಹಿತಾಸಕ್ತಿ ಅಡಗಿದೆ” ಎಂದರು.

ಆಗ ಪ್ರೊ. ಕುಮಾರ್‌ ಅವರು ಆರೋಪ ಪಟ್ಟಿಯ ಮತ್ತಷ್ಟು ಅಂಶಗಳನ್ನು ಓದಲು ಮುಂದಾದರು. ಈ ಹಂತದಲ್ಲಿ ಪೀಠವು ಕೆಲವು ಅಂಶಗಳನ್ನು ಮುಕ್ತ ನ್ಯಾಯಾಲಯದಲ್ಲಿ ಓದುವುದು ಬೇಡ ಎಂದು ತಡೆದರು. ಅಂತಿಮವಾಗಿ ಪೀಠವು ವಿಚಾರಣೆಯನ್ನು ಗುರುವಾರಕ್ಕೆ (ಡಿ.19) ಮುಂದೂಡಿತು.

Kannada Bar & Bench
kannada.barandbench.com