ಒತ್ತುವರಿ ಪ್ರಕರಣ: ಎಚ್‌ಡಿಕೆಗೆ ಭೂ ದಾಖಲೆಗಳನ್ನು ಒದಗಿಸಲು ತಹಶೀಲ್ದಾರ್‌ಗೆ ಹೈಕೋರ್ಟ್‌ ಸೂಚನೆ

ಅರ್ಜಿದಾರರ ವಿರುದ್ಧ ಬಲವಂತದ ಕ್ರಮವನ್ನು ಜರುಗಿಸುವುದಿಲ್ಲ ಎಂದು ಸರ್ಕಾರ ಈ ಹಿಂದೆ ನೀಡಿರುವ ಮುಚ್ಚಳಿಕೆಯನ್ನು ಹಿಂಪಡೆಯಲಾಗುವುದು ಎಂದು ಪೀಠಕ್ಕೆ ತಿಳಿಸಿದ ಸರ್ಕಾರದ ವಕೀಲರು.
HD Kumaraswamy Karnataka HC
HD Kumaraswamy Karnataka HC
Published on

ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿ ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ರಾಮನಗರ ತಹಶೀಲ್ದಾರ್‌ ಅವರು ತಮ್ಮ ಬಳಿ ಹೊಂದಿರುವ ಭೂ ದಾಖಲೆಗಳನ್ನು (ಸರ್ವೇ ವರದಿ, ನಕ್ಷೆ ಇತ್ಯಾದಿ) ಅರ್ಜಿದಾರರಾಗಿರುವ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಒಂದು ವಾರದಲ್ಲಿ ಒದಗಿಸಬೇಕು. ದಾಖಲೆಗಳನ್ನು ಪಡೆದ ನಂತರದ ಎರಡು ವಾರಗಳಲ್ಲಿ ಕುಮಾರಸ್ವಾಮಿ ಅವರು ತಹಶೀಲ್ದಾರ್‌ ಅವರಿಗೆ ಪ್ರತ್ಯುತ್ತರ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ತಹಶೀಲ್ದಾರ್‌ ನೋಟಿಸ್‌ ಪ್ರಶ್ನಿಸಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯಗೌಡ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು “ಕರ್ನಾಟಕ ಭೂ ಕಂದಾಯ ಕಾಯಿದೆ–1964ಕ್ಕೆ ತಿದ್ದುಪಡಿ ತರುವ ಮೂಲಕ ಸರ್ಕಾರಿ ಜಮೀನು ಒತ್ತುವರಿ ಕುರಿತಂತೆ ಒತ್ತುವರಿದಾರರಿಂದ ವಿವರಣೆ ಪಡೆದು ಮುಂದಿನ ಕ್ರಮ ಜರುಗಿಸಲು ತಹಶೀಲ್ದಾರ್‌ಗೆ ಅಧಿಕಾರ ಕಲ್ಪಿಸಿರುವ ಕಾನೂನನ್ನು ಪ್ರಶ್ನಿಸಿದ್ದೇವೆ. ಈ ಕುರಿತಂತೆ ತಿದ್ದುಪಡಿ ಅರ್ಜಿ ಸಲ್ಲಿಸಲಾಗಿದ್ದು ತಿದ್ದುಪಡಿಯ ಸಾಂವಿಧಾನಿಕ ಬದ್ಧತೆಯ ವಿಚಾರಣೆ ನಡೆಸಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್ ವಿ.ರೋಣ ಅವರು “ಅರ್ಜಿದಾರರ ಈ ನಿಲುವಿಗೆ ಅನುಸಾರವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮವನ್ನು ಜರುಗಿಸುವುದಿಲ್ಲ ಎಂದು ಸರ್ಕಾರ ಈ ಹಿಂದೆ ನೀಡಿರುವ ಮುಚ್ಚಳಿಕೆಯನ್ನು ಹಿಂಪಡೆಯಲಾಗುವುದು” ಎಂದು ಪೀಠಕ್ಕೆ ಸ್ಪಷ್ಟಪಡಿಸಿದರು.

Also Read
ಎಚ್‌ಡಿಕೆ ಭೂ ಒತ್ತುವರಿ ವಿವಾದ: ನೋಟಿಸ್‌ ಜಾರಿ ಮಾಡುವ ತಹಶೀಲ್ದಾರ್‌ ಅಧಿಕಾರದ ಬಗ್ಗೆ ನ್ಯಾಯಾಲಯದಲ್ಲಿ ವಾಗ್ವಾದ

ಇದನ್ನು ದಾಖಲಿಸಿಕೊಂಡ ನ್ಯಾಯಾಲಯವು ವಿಚಾರಣೆ ಮುಂದೂಡಿತು. ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿರುವ ಸಮಾಜ ಪರಿವರ್ತನಾ ಸಮುದಾಯದ ಪರ ಹಿರಿಯ ವಕೀಲ ಎಸ್‌ ಬಸವರಾಜು ಹಾಜರಿದ್ದರು.

Kannada Bar & Bench
kannada.barandbench.com