ಬಿಕ್ಲು ಶಿವ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಎರಡನೇ ಆರೋಪಿ ಕಿರಣ್‌, ಮೂರನೇ ಆರೋಪಿ ವಿಮಲ್‌ ರಾಜ್, ಆರನೇ ಆರೋಪಿ ಪ್ರದೀಪ್‌ ಮತ್ತು ಏಳನೇ ಆರೋಪಿ ಆರ್‌ ಮದನ್‌ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.
Karnataka High Court
Karnataka High Court
Published on

ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಡಿಫಾಲ್ಟ್‌ ಜಾಮಿನು ಕೋರಿ ನಾಲ್ವರು ಆರೋಪಿಗಳು ಸಲ್ಲಿಸಿರುವ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ 2ನೇ ಆರೋಪಿ ಕಿರಣ್‌, 3ನೇ ಆರೋಪಿ ವಿಮಲ್‌ ರಾಜ್, 6ನೇ ಆರೋಪಿ ಪ್ರದೀಪ್‌ ಮತ್ತು 7ನೇ ಆರೋಪಿ ಆರ್‌ ಮದನ್‌ ಸಲ್ಲಿಸಿರುವ ಪ್ರತ್ಯೇಕ ಕ್ರಿಮಿನಲ್‌ ಅರ್ಜಿಗಳ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು.

ನಿರ್ದಿಷ್ಟ ಅವಧಿಯೊಳಗೆ ತನಿಖಾಧಿಕಾರಿಯು ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಸಂದರ್ಭದಲ್ಲಿ ಡಿಫಾಲ್ಟ್‌ ಜಾಮೀನು ಕೋರಲಾಗುತ್ತದೆ. ಪ್ರಕರಣದಲ್ಲಿ ಕೋಕಾ ಕಾಯಿದೆಯ ನಿಯಮಗಳನ್ನು ಅನ್ವಯಿಸಿ ಆರೋಪ ಪಟ್ಟಿ ಸಲ್ಲಿಕೆ ಸಮಯ ವಿಸ್ತರಿಸಿರುವ ಕ್ರಮ ಸರಿಯಿಲ್ಲ ಎಂದು ಆರೋಪಿಗಳು ವಾದಿಸಿದ್ದರು.

ಹಿನ್ನೆಲೆ: ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್‌ ಬಿಕ್ಲುಶಿವ ಅಲಿಯಾಸ್‌ ಶಿವಪ್ರಕಾಶ್‌ ಕೊಲೆಯಾಗಿತ್ತು. ಈ ಸಂಬಂಧ ಭಾರತಿನಗರ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿ ಪೊಲೀಸರಿಗೆ ವಹಿಸಿದೆ. ಉಳಿದಂತೆ ಈ ಅರ್ಜಿದಾರರು ಆರೋಪಿಗಳಾಗಿದ್ದಾರೆ. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರ ಆರೋಪಿಗಳನ್ನು ಬಂಧಿಸಿದ್ದರು. ಡಿಫಾಲ್ಟ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಬೆಂಗಳೂರಿನ ವಿಶೇಷ ನ್ಯಾಯಾಲಯವು 2025ರ ಅಕ್ಟೋಬರ್‌ 17ರಂದು ಆದೇಶಿಸಿತ್ತು.

Also Read
[ಬಿಕ್ಲು ಶಿವ ಕೊಲೆ] ಸಂಘಟಿತ ಅಪರಾಧ ಪ್ರಕರಣಗಳು ಬಾಕಿ ಇಲ್ಲದಿದ್ದರೂ ಕೋಕಾ ಅನ್ವಯ: ಬೈರತಿ ಪರ ಹೈಕೋರ್ಟ್‌ನಲ್ಲಿ ವಾದ

ಇದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಆರೋಪಿಗಳು, ಪ್ರಕರಣದ ದಾಖಲಾಗಿ 90 ದಿನ ಕಳೆದಿದ್ದರೂ ತನಿಖಾಧಿಕಾರಿಗಳು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿಲ್ಲ. ಇದರಿಂದ ಜಾಮೀನು ನೀಡಬೇಕು. ಪ್ರಕರಣದಲ್ಲಿ ಕೋಕಾ ಕಾಯಿದೆಯ ನಿಯಮಗಳನ್ನು ಅನ್ವಯಿಸಿ ಆರೋಪ ಪಟ್ಟಿ ಸಲ್ಲಿಕೆ ಸಮಯ ವಿಸ್ತರಿಸಿರುವ ಕ್ರಮ ಸಹ ಸರಿಯಿಲ್ಲ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ತಮಗೆ ಡಿಫಾಲ್ಟ್‌ ಜಾಮೀನು ನೀಡಬೇಕು ಎಂದು ಕೋರಿದ್ದರು. ಈ ಪ್ರಕರಣದಲ್ಲಿ ಕೆ ಆರ್‌ ಪುರ ಶಾಸಕ ಬೈರತಿ ಬಸವರಾಜ್‌ ಐದನೇ ಆರೋಪಿಯಾಗಿದ್ದಾರೆ.

Kannada Bar & Bench
kannada.barandbench.com