ಪಿಎಸ್‌ಐ ಹಗರಣದ ರೂವಾರಿ ಆರ್‌ ಡಿ ಪಾಟೀಲ್‌ ವಿರುದ್ಧದ 11 ಎಫ್‌ಐಆರ್‌ ವಿಲೀನ ಕೋರಿಕೆ ವಜಾ ಮಾಡಿದ ಹೈಕೋರ್ಟ್‌

ಇದರೊಂದಿಗೆ ಆರ್‌ ಡಿ ಪಾಟೀಲ್‌ ವಿರುದ್ಧದ 11 ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ವಿಧಿಸಿ ಹೈಕೋರ್ಟ್‌ 2023ರ ಏಪ್ರಿಲ್‌ 17ರಂದು ಮಾಡಿದ್ದ ಮಧ್ಯಂತರ ಆದೇಶವು ತೆರವಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
R D Patil
R D Patil

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ ಅಲಿಯಾಸ್‌ ಆರ್‌ ಡಿ ಪಾಟೀಲ್‌ ತನ್ನ ವಿರುದ್ಧ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ವಿವಿಧ ಕಡೆ ದಾಖಲಾಗಿರುವ 11 ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯನ್ನು ವಿಲೀನಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಗುರುವಾರ ವಜಾ ಮಾಡಿದೆ.

ಕಲಬುರ್ಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ವಿವಿಧ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ದಾಖಲಾಗಿರುವ 11 ಎಫ್‌ಐಆರ್‌ ಹಾಗೂ ಆರೋಪ ಪಟ್ಟಿ ಒಗ್ಗೂಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಪ್ರಕಟಿಸಿದೆ.

ಇದರೊಂದಿಗೆ ಆರ್‌ ಡಿ ಪಾಟೀಲ್‌ ವಿರುದ್ಧದ 11 ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ 2023ರ ಏಪ್ರಿಲ್‌ 17ರಂದು ಮಾಡಿದ್ದ ಮಧ್ಯಂತರ ಆದೇಶವು ತೆರವಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಕಲಬುರ್ಗಿ ನಗರದ ಅಶೋಕ್‌ ನಗರ ಠಾಣೆಯಲ್ಲಿ ಐದು, ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ಎರಡು, ಚೌಕ್‌ ಠಾಣೆಯಲ್ಲಿ ಒಂದು ಹಾಗೂ ಧಾರವಾಡದ ಸಬ್‌ ಅರ್ಬನ್‌, ತುಮಕೂರಿನ ಕ್ಯಾತಸಂದ್ರ ಹಾಗೂ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯನ್ನು ಒಟ್ಟಾಗಿಸಬೇಕು ಎಂದು ಆರ್‌ ಡಿ ಪಾಟೀಲ್‌ ಕೋರಿದ್ದರು.

Also Read
ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಆರ್‌ ಡಿ ಪಾಟೀಲ್‌ ವಿರುದ್ಧದ 11 ಪ್ರಕರಣಗಳಿಗೂ ತಡೆಯಾಜ್ಞೆ ವಿಧಿಸಿದ ಹೈಕೋರ್ಟ್‌

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಅವರು "ಆರೋಪಿಯ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಅಪರಾಧ ಕೃತ್ಯಗಳು ಬೇರೆಬೇರೆ ಇವೆ. ಅಪರಾಧ ವರದಿಯಾಗಿರುವ ಸ್ಥಳವೂ ಬೇರೆಬೇರೆಯಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳೂ ಬೇರೆಬೇರೆಯಾಗಿದ್ದಾರೆ. ಆರ್‌ ಡಿ ಪಾಟೀಲ್‌ ಎಲ್ಲಾ ಪ್ರಕರಣಗಳಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಂದೇ ಪ್ರಕರಣವನ್ನಾಗಿ ಮಾಡಲಾಗದು. ನಾಲ್ಕು ಜಿಲ್ಲೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ" ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರು "ಆರ್‌ ಡಿ ಪಾಟೀಲ್‌ ವಿರುದ್ಧ ಬೇರೆಬೇರೆ ಕಡೆ ದಾಖಲಾಗಿರುವ ಎಫ್‌ಐಆರ್‌ಗಳು ಒಂದೇ ಪರೀಕ್ಷೆಗೆ ಸಂಬಂಧಿಸಿವೆ. ಇವೆಲ್ಲವೂ ಒಂದೇ ಅಪರಾಧವಾಗಿರುವುದರಿಂದ ಪ್ರತ್ಯೇಕ ಎಫ್‌ಐಆರ್‌ ಅಗತ್ಯವಿಲ್ಲ" ಎಂದು ವಾದಿಸಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ್‌ ಬಜಾರ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಧಾನ ಪ್ರಕರಣದಲ್ಲಿ ಅರ್ಜಿದಾರ ಆರ್‌ ಡಿ ಪಾಟೀಲ್‌ ಅವರನ್ನು 14ನೇ ಆರೋಪಿಯನ್ನಾಗಿಸಲಾಗಿದೆ. ಈಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಆರ್‌ ಡಿ ಪಾಟೀಲ್‌ ಬಂಧನವಾಗಿದೆ.

Related Stories

No stories found.
Kannada Bar & Bench
kannada.barandbench.com